ಕುಂದಾಪುರ; ಮೆಸ್ಕಾಂ ಸೊತ್ತು ಕಳವು: 24ಗಂಟೆಯೊಳಗೆ ಆರೋಪಿಗಳ ಬಂಧನ

ಕುಂದಾಪುರ: ಮಚ್ಚಟ್ಟು ಗ್ರಾಮದ ಕುಂದ ಬಳಿ ಮೆಸ್ಕಾಂ ಇಲಾಖೆಯ ಕಂಬಗಳನ್ನು ತುಂಡರಿಸಿ ಸೊತ್ತುಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕೃತ್ಯ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಅಮಾಸೆಬೈಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಅಶೋಕ್ ನಾಯ್ಕ(೨೨), ಮೂರ್ತಿ ನಾಯ್ಕ(೩೮), ಮೊಹಿದ್ದಿನ್ ಕೆ.ಎಸ್. (೪೮) ಬಂಧಿತ ಆರೋಪಿಗಳು. ಜು.೯ರಂದು ಸಂಜೆ ವೇಳೆ ಮೆಸ್ಕಾಂ ಇಲಾಖೆಯ ೪ ಕಂಬಗಳನ್ನು ತುಂಡು ಮಾಡಿ ಅಲ್ಯೂಮಿನಿಯಂ ವಾಹಕಗಳನ್ನು ಹಾಗೂ ಅಲ್ಲಿಯೇ ಶೆಡ್ನಲ್ಲಿದ್ದ ಪಂಪುಸೆಟ್ ಕಳವು ಮಾಡಲಾಗಿತ್ತು. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡ ಪೊಲೀಸರ ತಂಡ ೨೪ ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದೆ.
ಬಂಧಿತರಿಂದ ಕಳವು ಮಾಡಿದ ಸೊತ್ತುಗಳು, ಕೃತ್ಯಕ್ಕೆ ಉಪಯೋಗಿಸಿದ ಎರಡು ಬೈಕ್ ವಶಕ್ಕೆ ಪಡೆಯಲಾಗಿದ್ದು ಈ ವಸ್ತುಗಳ ಒಟ್ಟು ಮೌಲ್ಯ 90 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
Next Story





