ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆದರಿಕೆ ಎದುರಾಗಿದೆ: ದಿನೇಶ್ ಅಮೀನ್ ಮಟ್ಟು

ಕಲಬುರಗಿ, ಜು.12: ಪ್ರಸಕ್ತ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಬೆದರಿಕೆ ಎದುರಿಸುತ್ತದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದ ಕನ್ನಡ ಭವನದ ಸುವರ್ಣ ಸಭಾದಲ್ಲಿ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ‘ಪತ್ರಕರ್ತ ಸಾಹಿತಿಗಳ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ, ಸಂಗೀತ, ಮಾಧ್ಯಮ ಹಾಗೂ ನಾಟಕ ಇವುಗಳು ಅಭಿವ್ಯಕ್ತಿಯ ವಿವಿಧ ಪ್ರಕಾರಗಳಾಗಿವೆ. ಆದರೆ, ಸಾಹಿತ್ಯ, ಸಂಗೀತ, ನಾಟಕಗಳಿಗಿರುವಷ್ಟು ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮಕ್ಕೆ ಇಲ್ಲ. ಜನಸಾಮಾನ್ಯರಿಗೆ ಇರುವ ಅಭಿವ್ಯಕ್ತಿ ಸ್ವಾತಂತ್ರ್ಯವೇ ಪತ್ರಿಕೋದ್ಯಮಕ್ಕಿದೆ. ಮಾಧ್ಯಮಕ್ಕಾಗಿ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಇಲ್ಲ ಎಂದು ಅವರು ಹೇಳಿದರು.
ಸಾರ್ವಜನಿಕ ಅಭಿಪ್ರಾಯ ಮೂಡಿಸುವಲ್ಲಿ ಪತ್ರಿಕೋದ್ಯಮ ಮಹತ್ವದ ಪಾತ್ರ ವಹಿಸುವ ಮೂಲಕ ಪ್ರಜಾಪ್ರಭುತ್ವದ 4ನೇ ಅಂಗವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪತ್ರಿಕಾ ಕ್ಷೇತ್ರ ಉದ್ದಿಮೆಯಾಗಿ ಪರಿಣಮಿಸಿದೆ ಎಂದು ದಿನೇಶ್ ಅಮೀನ್ ಮಟ್ಟು ಬೇಸರ ವ್ಯಕ್ತಪಡಿಸಿದರು.
ಗೋಕಾಕ್ ಚಳವಳಿ, ಬಂಡಾಯ ಚಳವಳಿ, ದಲಿತ ಚಳವಳಿ ಹಾಗೂ 80ರ ದಶಕದ ಚಳವಳಿಗಳನ್ನು ಉದಾಹರಿಸಿದ ಅವರು, ಇಂತಹ ಸಾಮಾಜಿಕ ಬಿಕ್ಕಟ್ಟು-ಗೊಂದಲಗಳಿಗೆ ಸಾಹಿತಿಗಳು ತಮ್ಮ ಅಭಿವ್ಯಕ್ತಿ ಮೂಲಕ ಸರಿದಾರಿ ತೋರಿದ್ದಾರೆ ಎಂದು ಗುಣಗಾನ ಮಾಡಿದರು.
ಸಾಹಿತಿಗಳಿಗೆ ತಮ್ಮ ಕೃತಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಬೇಕು ಎಂಬುವ ಆಸೆ. ಹಾಗೆಯೇ ಪತ್ರಕರ್ತರಿಗೂ ತಮ್ಮ ಪತ್ರಿಕೆಯಲ್ಲಿ ತಮ್ಮ ಕೃತಿಗಳು ಪ್ರಕಟವಾಗಬೇಕು ಎಂಬುವ ಆಸೆ. ಆದುದರಿಂದ, ಪತ್ರಕರ್ತರು, ಸಾಹಿತಿಗಳು ಅವಳಿ-ಜವಳಿ ಮಕ್ಕಳು ಇದ್ದ ಹಾಗೇ ಎಂದು ಅವರು ವರ್ಣಿಸಿದರು.
ಹಿರಿಯ ಸಾಹಿತಿ ಡಾ.ಸ್ವಾಮಿರಾವ್ ಕುಲಕರ್ಣಿ ಮಾತನಾಡಿ, ಶಿಕ್ಷಣ, ಶಿಕ್ಷಕರು, ಶಿಕ್ಷೆ, ಲೇಖನ ಹಾಗೂ ಮಾಧ್ಯಮ(ಪತ್ರಿಕೆ) ಈ ಐದು ಆಯುಧಗಳು ಸಮಾಜವನ್ನು ಯಾವ ದಿಕ್ಕಿಗೆ ಬೇಕೋ ಆ ದಿಕ್ಕಿಗೆ ಕರೆದೊಯ್ಯುಯುವಂತಹ ದೊಡ್ಡ ಶಕ್ತಿಯಾಗಿವೆ. ಸಮಾಜದ ಬದಲಾವಣೆಗೆ ಪತ್ರಕರ್ತರು ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಸದಾ ಜಾಗೃತರಿದ್ದರೆ ಸಮಾಜ ಸರಿದಾರಿಯಲ್ಲಿ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಮಾತನಾಡಿ, ಕೊರೋನದಂತಹ ಮಹಾಮಾರಿಯನ್ನು ಈ ದೇಶ ಯಶಸ್ವಿಯಾಗಿ ಎದುರಿಸಿದೆ. ಈ ತಲೆಮಾರಿನ ಪತ್ರಕರ್ತರು ಯುದ್ಧದಂತಹ ವಾತಾವರಣವನ್ನು ನೋಡಿರಲಿಲ್ಲ. ಆದರೆ, ಕೊರೋನ ಸಮಯದಲ್ಲಿ ಯುದ್ಧೋಪಾದಿಯಲ್ಲಿ ಸವಾಲನ್ನು ಎದುರಿಸಿ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ‘ಕಾವ್ಯ ಕಾವಲು’ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಖಜಾಂಚಿ ಅಶೋಕ ಕಪನೂರ, ಉಪಾಧ್ಯಕ್ಷರಾದ ದೇವೇಂದ್ರಪ್ಪ ಆವಂಟಿ, ಸುರೇಶ ಡಿ.ಬಡಿಗೇರ, ರಾಮಕೃಷ್ಣ ಬಡಶೇಷಿ, ವಾರ್ತಾ ಇಲಾಖೆಯ ಉಪನಿರ್ದೇಶಕ ಜಿ.ಬಿ.ಸಿದ್ದೇಶ್ವರಪ್ಪ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನೂರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಸೇರಿದಂತೆ ಹಲವಾರು ಪತ್ರಕರ್ತರು, ಸಾಹಿತಿಗಳು ಉಪಸ್ಥಿತರಿದ್ದರು.







