ಸಮ ಸಮಾಜ ನಿರ್ಮಾಣವಾದಾಗ ಮಾತ್ರ ಅಸಮಾನತೆ ನಿರ್ಮೂಲನೆ ಸಾಧ್ಯ: ಸಿದ್ದರಾಮಯ್ಯ
ಮುರುಘಾ ಮಠದಿಂದ ವಿಪಕ್ಷ ನಾಯಕರಿಗೆ ಜಯದೇವ ಪ್ರಶಸ್ತಿ ಪ್ರದಾನ

ದಾವಣಗೆರೆ, ಜು.12 : ಮನುಷ್ಯತ್ವ ಇಲ್ಲದ ಧರ್ಮ ಧರ್ಮವೇ ಅಲ್ಲ, ಯಾವ ಧರ್ಮದಲ್ಲಿ ಮನುಷ್ಯತ್ವ ಇರುವುದೋ ಅದೇ ಶ್ರೇಷ್ಠವಾದ ಧರ್ಮ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಶ್ರೀ ಶಿವಯೋಗಾಶ್ರಮದಲ್ಲಿ ಸೋಮವಾರ ಶ್ರೀ ಮುರುಘಾ ಮಠದಿಂದ ಬಸವ ಚೇತನ ಲಿಂಗೈಕ್ಯ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 65ನೇ ಸ್ಮರಣೋತ್ಸವ-2022, ಶರಣ ಸಂಸ್ಕೃತಿ ಉತ್ಸವ, ಮಹಾತಪಸ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ, ಡಾ.ಶಿಮುಶರ ಶೂನ್ಯ ಪೀಠಾರೋಹದಣದ ತೃತೀಯ ದಶಮಾನೋತ್ಸವದ ಇ.ಲಿಟ್ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಜಯದೇವ ಶ್ರೀ ಶೂನ್ಯಪೀಠ ಪ್ರಶಸ್ತಿ ಪುರಸ್ಕೃತರಾಗಿ ಮಾತನಾಡಿದರು.
ಬಸವವಾದಿ ಶರಣರು ಧರ್ಮ ಸಂಘರ್ಷ ಮಾಡುವಂತೆ ಹೇಳಿದ್ದರಾ? ಜಾತಿ ತಾರತಮ್ಯ ಮಾಡುವಂತೆ ಹೇಳಿದ್ದರಾ? ಅಸಮಾತೆ ತೊಲಗಿಸಲು ಶ್ರಮಿಸಿದರು. ಅದರೆ, ಅವರು 900 ವರ್ಷ ಕಳೆದರೂ ಇಂದಿಗೂ ಆರ್ಥಿಕ, ಸಾಮಾಜಿಕ ಅಸಮಾನತೆ ಜೀವಂತವಾಗಿದೆ. ಮುಸ್ಲಿಮರು, ಕ್ರಿಶ್ಚಿಯನರ್, ಬೌದ್ದರು ಮನುಷ್ಯರಲ್ಲವೇ. ಯಾಕೆ ಧರ್ಮ ಸಂಘರ್ಷ ಎಂದು ಪ್ರಶ್ನಿಸಿದರು.
ಮುರುಘ ಮಠ ಸರ್ವ ಜನಾಂಗದವರಿಗೂ ಅದ್ಯತೆ ನೀಡಿದೆ. ಅದರಂತೆ ಮುಸ್ಲಿಮ್ ಸಮುದಾಯದ ವ್ಯಕ್ತಿಗೆ ಮಠದಲ್ಲಿ ನಿರ್ದೇಶಕ ಸ್ಥಾನಮಾನ ನೀಡಿದೆ. ಇದು ಮಠದ ಶ್ರೇಷ್ಠತೆ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಇದೆ. ಅವರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳು ದೊರೆಯಬೇಕು ಎಂದರು.
ದೇಶದಲ್ಲಿ ಬೇರು ಬಿಟ್ಟಿರುವಂತಹ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಸಾಮಾಜಿಕ ವ್ಯವಸ್ಥೆಗೆ ಚಲನೆ ಇಲ್ಲದಿದ್ದರೆ ಅದು ಜಡತ್ವದಿಂದ ಇರುತ್ತದೆ. ನಿಂತ ನೀರಾಗುತ್ತದೆ. ಸಾಮಾಜಿಕ ವ್ಯವಸ್ಥೆ ನಿರಂತರ ಹರಿಯುವ ನೀರಿನಂತೆ ಇರಬೇಕು. ಜಾತಿ ವ್ಯವಸ್ಥೆಗೆ ಚಲನೆ ಇಲ್ಲವೆಂದು ಲೋಹಿಯಾ ಹೇಳಿದ್ದರು. ಸಾಮಾಜಿಕ ವ್ಯವಸ್ಥೆಗೆ ಚಲನೆ ಇಲ್ಲದಿದ್ದರೆ ನಿಂತ ನೀರಾಗುತ್ತದೆ, ಜಡತ್ವದಿಂದ ಕೂಡಿರುತ್ತದೆ. ಬುದ್ಧ, ಬಸವ, ಅಂಬೇಡ್ಕರ್ರಂತಹ ಬದಲಾವಣೆಯ ಹರಿಕಾರರ ಹೋರಾಟವೂ ಇಂತಹ ಜಡತ್ವದ ವಿರುದ್ಧವೇ ಆಗಿತ್ತು. ಜಡತ್ವವಿದ್ದರೆ ಸಮಾನತೆ ಇರಲ್ಲ. ಅಕ್ಷರ, ಆರ್ಥಿಕ ಗಳಿಕೆಗೆ ಅವಕಾಶ ಇರುವುದಿಲ್ಲ. ಶೂದ್ರರಿಗೆ ಅಕ್ಷರ ಕಲಿಕೆಗೆ ಅವಕಾಶ ಇಲ್ಲವೆಂದರೆ, ಸಮಾನತೆಯಾದರೂ ಹೇಗೆ ಸಾಧ್ಯ? ಆರ್ಥಿಕ ಅಸಮಾನತೆ ಇಂದಿಗೂ ಪಿಡುಗಾಗಿ ಕಾಡುತ್ತಿದೆ. ಶ್ರೇಣೀಕೃತ ವ್ಯವಸ್ಥೆ ಇರದಿದ್ದರೆ ಯಾವ ಅಸಮಾನತೆಯೂ ಇರುತ್ತಿರಲಿಲ್ಲ ಎಂದು ಅವರು ತಿಳಿಸಿದರು.
ಚತುರ್ವರ್ಣದಲ್ಲಿ ಮೂರು ವರ್ಣೀಯರು ಮಾತ್ರ ಶಿಕ್ಷಣ ಕಲಿಯಬೇಕಿತ್ತು. ಮಹಿಳೆಯರೂ ಶಿಕ್ಷಣಕ್ಕೆ ಅವಕಾಶ ಇರಲಿಲ್ಲ. ಇದಕ್ಕೆ ಜಾತಿ ವ್ಯವಸ್ಥೆ ಕಾರಣವಾಗಿದೆ. ಯಾವ ಜಾತಿ ವ್ಯವಸ್ಥೆಯಲ್ಲಿ ಚಲನೆ ಇರಲ್ಲವೋ ಅಲ್ಲಿ ಜಡತ್ವ ಇರುತ್ತದೆ. ಅಲ್ಲಿ ಅಸಮಾನತೆಯೂ ಬರುತ್ತದೆ. ಶೂದ್ರರೂ, ಶೋಷಿತರು ದುಡಿದು ಗಳಿಸಿದ ಸಂಪತ್ತನ್ನು ಅನುಭವಿಸುವವರು ಬೇರೆಯವರಾದರೆ, ಸಮಾನತೆಯಾದರೂ ಎಲ್ಲಿಂದ ಬರುತ್ತದೆ? ಸಮ ಸಮಾಜ ನಿರ್ಮಾಣವಾದಾಗ ಮಾತ್ರ ಅಸಮಾನತೆ ನಿರ್ಮೂಲನೆ ಸಾಧ್ಯ. ಶೋಷಣೆ ನಿಲ್ಲುವವರೆಗೆ ಬಡತನ ನಿಲ್ಲುವುದಿಲ್ಲ. ಜಾತಿ ಪದ್ಧತಿ ತೊಲಗಿ, ಸಮಾನ ಶಿಕ್ಷಣ, ಸಮಾನ ಅವಕಾಶ, ಸಮ ಸಮಾಜ ನಿರ್ಮಾಣವಾಗಬೇಕಿದೆ ಎಂದು ಅವರು ಹೇಳಿದರು.
ಎಲ್ಲಿವರೆಗೆ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಗುವುದಿಲ್ಲವೋ ಅಲ್ಲಿವರೆಗೆ ಸ್ವಾತಂತ್ರ್ಯ ಬಂದಿದ್ದು ಸಾರ್ಥಕವಾಗದೆಂದು ಅಂಬೇಡ್ಕರ್ ಹೇಳಿದ್ದರು. ಎಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿ ಸಂವಿಧಾನ ಜಾರಿಯಾಗುತ್ತದೆ ಕಾದು ನೋಡಬೇಕಿದೆ ಎಂದರು.
ಶೂನ್ಯ ಪೀಠ ಅಲ್ಲಮ ಪ್ರಶಸ್ತಿ ಪುರಸ್ಕೃತರಾದ ವಿಧಾನ ಪರಿಷತ್ ಮಾಜಿ ಸಭಾಪತಿ ಡಾ.ಡಿ.ಎಚ್.ಶಂಕರಮೂರ್ತಿ ಮಾತನಾಡಿ, ವಿಶ್ವಕ್ಕೆ ಪ್ರಜಾಪ್ರಭುತ್ವ ತತ್ವದ ಅಡಿಪಾಯ ಹಾಕಿಕೊಟ್ಟಿದ್ದೇ ಭಾರತ. ಅದರಲ್ಲೂ ಕರ್ನಾಟಕ. ಅದೂ ನಮ್ಮ ಬಸವಣ್ಣ ಎಂಬುದಕ್ಕೆ ನಾವು ಹೆಮ್ಮೆ ಪಡಬೇಕು. 12ನೇ ಶತಮಾನದಲ್ಲೇ ಇಂತಹದ್ದೊಂದು ಅಡಿಪಾಯ ಹಾಕಿಕೊಟ್ಟು, ಸರ್ವರನ್ನು ಒಳಗೊಂಡ ಕಾಯಕ ಮಂಟಪದ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವ ತತ್ವ ತೋರಿಸಿದ್ದು ಬಸವಣ್ಣ. ಚರ್ಚೆಯ ಮೂಲಕ ಉತ್ತಮ ಸಮಾಜ ಕಟ್ಟುವ ಉದ್ದೇಶ, ಗುರಿ ಹೊಂದಿದ ಬಸವಣ್ಣ ಅದಕ್ಕಾಗಿ ಅನುಭವ ಮಂಟಪ ಆರಂಭಿಸಿದೆ. ಆ ಕಾಲದಲ್ಲೇ ಪ್ರಜಾಪ್ರಭುತ್ವ ಕಲಿಸಿಕೊಟ್ಟ ನಮ್ಮ ದೇಶ ವಿಶ್ವಕ್ಕೆ ಗುರುವಾಗಿದೆ ಎಂದರು.
ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಅಧ್ಯಕ್ಷತೆ ವಹಿಸಿದ್ದರು. ಇಳಕಲ್ನ ಶ್ರೀ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹರಿಹರದ ಸಾಹಿತಿ ಡಾ.ಎಚ್.
ಎ.ಭಿಕ್ಷಾವರ್ತಿಮಠ ಅವರಿಗೆ ಶೂನ್ಯಪೀಠ ಚನ್ನಬಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಎಚ್.ಆಂಜನೇಯ, ವಿಪ ಸದಸ್ಯ ಕೆ.ಅಬ್ದಲ್ ಜಬ್ಬಾರ್, ಶಾಸಕ ಎಸ್.ರಾಮಪ್ಪ, ನಾಯಕ ಸಮಾಜದ ಮುಖಂಡ ಬಿ.ವೀರಣ್ಣ, ಮಿಲ್ಲತ್ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಸೈಯದ್ ಸೈಫ್ ಉಲ್ಲಾ, ಶ್ರೀ ಬಸವಪ್ರಭು ಸ್ವಾಮೀಜಿ, ಡಿ.ಬಸವರಾಜ, ಎಸ್.ಓಂಕಾರಪ್ಪ, ಅಂದನೂರು ಮುಪ್ಪಣ್ಣ, ಎಂ.ಜಯಕುಮಾರ ಇತರರು ಇದ್ದರು.
ಡಾ.ಶಿಮುಶ ಸಂಯುಕ್ತ ಪದವಿ ಪೂರ್ವ ಕಾಲೇಜು, ಎಸ್ಜೆಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.







