ಬೆಂಗಳೂರು | ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣ: ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.12: ಕೆಂಗೇರಿಯ ವಿಶ್ವೇಶ್ವರಯ್ಯ ಬಡಾವಣೆಯ ಧನನಾಯಕನಹಳ್ಳಿ ಬಳಿಯ ಪೊದೆಯಲ್ಲಿ ಸುಟ್ಟು ಕರಕಲಾದ ಮಹಿಳೆಯ ಶವ ಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸಿರುವ ಕೆಂಗೇರಿ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಸುಟ್ಟು ಕರಕಲಾದ ಮಹಿಳೆಯು ಕೆಂಗೇರಿಯ ಸನ್ ಸಿಟಿಯ ನಗೀನಾ ಎಂದು ಗುರುತಿಸಿ ಕೃತ್ಯ ನಡೆಸಿದ ಆಕೆಯ ಪತಿ ಕೆಂಗೇರಿಯ ಸನ್ ಸಿಟಿ ನಿವಾಸಿ ಮನ್ಸೂರ್(29) ಹಾಗೂ ಕೊಲೆಗೆ ಸಹಕರಿಸಿದ ಆತನ ಸ್ನೇಹಿತ ದೊಡ್ಡ ತುಮಕೂರಿನ ಕರೀಂ ಸೊಣ್ಣೆನಹಳ್ಳಿಯ ಪ್ರಜ್ವಲ್(21)ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಜು.3ರಂದು ಕೆಂಗೇರಿಯ ವಿಶ್ವೇಶ್ವರಯ್ಯ ಬಡಾವಣೆಯ ಧನನಾಯಕನಹಳ್ಳಿ ಬಳಿಯ ಪೊದೆಯಲ್ಲಿ ಮಹಿಳೆಯೊಬ್ಬರ ಸುಟ್ಟು ಕರಕಲಾದ ಶವ ಪತ್ತೆಯಾಗಿತ್ತು. ಗುರುತು ಪತ್ತೆ ಹಚ್ಚಲಾಗದಷ್ಟು ದೇಹ ಸುಟ್ಟು ಹೋಗಿದ್ದರಿಂದ ಪೊಲೀಸರಿಗೆ ಈ ಪ್ರಕರಣವನ್ನು ಭೇದಿಸುವುದು ಸವಾಲಾಗಿ ಪರಿಣಮಿಸಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ವಿಶೇಷ ತಂಡಗಳು ಮೃತ ಮಹಿಳೆಯ ವಿಳಾಸವನ್ನು ಪತ್ತೆ ಮಾಡಿ ಆಕೆಯ ತಂದೆತಾಯಿಯಿಂದ ಖಚಿತ ಪಡಿಸಿಕೊಂಡು ತನಿಖೆ ಮುಂದುವರಿಸಿದ ವಿಜಯಪುರ ಜಿಲ್ಲೆಯಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಗಿದೆ.
ಕೊಲೆಯಾದ ಮಹಿಳೆಗೆ ಈ ಹಿಂದೆಯೇ ವಿವಾಹವಾಗಿದ್ದು, ಎರಡು ಮಕ್ಕಳಿದ್ದಾರೆ. ಮೊದಲನೆ ಪತಿಯನ್ನು ತೊರೆದು ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದ ಆಕೆ, ಜೆಸಿಬಿ ಚಾಲಕನಾಗಿದ್ದ ಆರೋಪಿ ಮನ್ಸೂರ್ನನ್ನು ಎರಡನೇ ವಿವಾಹವಾಗಿದ್ದಳು. ಇದಲ್ಲದೇ ಹಲವು ದಿನಗಳಿಂದ ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಇದನ್ನು ತಿಳಿದ ಆರೋಪಿ ಆಕೆಯೊಂದಿಗೆ ಜಗಳ ಕೊಲೆಗೈದಿರುವ ಮಾಹಿತಿ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.







