ಶಿಕ್ಷಣದಲ್ಲಿ ಸಂಸ್ಕೃತ, ಮನುಸ್ಮತಿ ಸೇರ್ಪಡೆಗೆ ಚಿಂತನೆ: ಎಐಎಸ್ಇಸಿ ಖಂಡನೆ
ಬೆಂಗಳೂರು, ಜು.12: ಎಲ್ಲಾ ಶಾಲಾ ಮಕ್ಕಳಿಗೆ ಸಂಸ್ಕೃತವನ್ನು ತೃತೀಯ ಭಾಷೆಯಾಗಿ ಕಲಿಸುವ ಹಾಗೂ ಮನುಸ್ಮøತಿಯನ್ನು ಶಿಕ್ಷಣದಲ್ಲಿ ಹೇರಲು ಶಿಫಾರಸ್ಸು ಮಾಡಿ ಪ್ರಾಚೀನ ಭಾರತದ ಸುಳ್ಳು ವೈಭವೀಕರಣದ ಮೂಲಕ ಬಿಜೆಪಿಯು 'ಹಿಂದೂ ದುರಭಿಮಾನ'ವನ್ನು ಹುಟ್ಟುಹಾಕುತ್ತಿದೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ(ಎಐಎಸ್ಇಸಿ)ಯ ರಾಜ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ರಾಜ್ಯ ಸರಕಾರದ ಪಠ್ಯಕ್ರಮವನ್ನು ಖಂಡಿಸಿದ್ದಾರೆ.
ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ವಿವಾದಾತ್ಮಕ ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್ಇಪಿ) ಅನುಷ್ಠಾನದ ಭಾಗವಾಗಿ, ಸಂಸ್ಕøತ ಮತ್ತು ಮನುಸ್ಮತಿಯನ್ನು ಪಠ್ಯಕ್ರಮದ ಚೌಕಟ್ಟಿನಲ್ಲಿ ಮತ್ತು ರಾಜ್ಯ ಪಠ್ಯಕ್ರಮದಲ್ಲಿ ಸೇರಿಸಲಾಗುವುದು ಎಂದು ಹೇಳಿ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ‘ಭಾರತೀಯ ಜ್ಞಾನ ಕುರಿತಾದ ಪತ್ರ’ವನ್ನು ಸಲ್ಲಿಸಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ.
ನಮಗೆ ಲಾಭದಾಯಕ ಉದ್ಯೋಗವನ್ನು ನೀಡಲಾಗದ ಸಂಸ್ಕೃತ ಭಾಷೆಯನ್ನು ಹೇರುವ ಮೂಲಕ ಆಡಳಿತಗಾರರು ನಮ್ಮ ಮಕ್ಕಳನ್ನು ಶತಮಾನಗಳಷ್ಟು ಹಿಂದೆ ತಳ್ಳಲು ಹೊರಟಿದ್ದಾರೆ. ಬಹಳ ಕಾಲದ ಹಿಂದೆಯೇ ಭಾರತದಲ್ಲಿ ವಿದ್ಯಾಸಾಗರರು, ಜ್ಯೋತಿಬಾ ಫುಲೆ, ಅಂಬೇಡ್ಕರ್ ಈ ಮನುಸ್ಮøತಿಯನ್ನು ಧಿಕ್ಕರಿಸಿದ್ದರು. ಇದನ್ನು ಪರಿಚಯಿಸಲು ಹೊರಟಿದ್ದು ಖಂಡನೀಯ ಎಂದು ಉಲ್ಲೇಖಿಸಿದ್ದಾರೆ.
ಪ್ರಾಚೀನ ಕಾಲದಲ್ಲಿ ಈಜಿಪ್ಟ್, ಮೆಸೊಪಟೋಮಿಯಾ ಮತ್ತು ಚೀನಿ ನಾಗರಿಕತೆಗಳು ಸಿಂಧೂ ನಾಗರಿಕತೆಗಳ ಮೇಲೆ ಪ್ರಭಾವ ಬೀರಿದವು ಮತ್ತು ಪ್ರತಿಯಾಗಿ ಅವರು ಭಾರತೀಯರಿಂದ ಬಹಳಷ್ಟು ಕಲಿತರು. ಆದರೆ, ಬಿಜೆಪಿ ಸರಕಾರವು ಇತರರಿಂದ ಕಲಿಯುವ ಮತ್ತು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ ಸಂಸ್ಕøತಿಯನ್ನು ನಾಶಮಾಡಲು ಉದ್ದೇಶಿಸಿದೆ. ಸುಳ್ಳುಲೇಪಿತ ಇಂತಹ ಅಂಶಗಳನ್ನು ಸೇರಿಸುವ ಮೂಲಕ ವಿಶ್ವದ ಜ್ಞಾನ ಭಂಡಾರಕ್ಕೆ ನಮ್ಮ ಪೂರ್ವಜರು ನೀಡಿದ ಕೊಡುಗೆಯನ್ನೂ ಕೂಡಾ ಗೌಣವಾಗಿ ಕೆಲವೊಮ್ಮೆ ಸಂಶಯದಿಂದ ಕಾಣುವಂತೆ ಮಾಡುತ್ತದೆ ಎಂದು ಕಿಡಿಕಾರಿದ್ದಾರೆ.
ಧಾರ್ಮಿಕ ಮತಾಂಧ ಮನಸ್ಸು ದ್ವೇಷ, ಕೋಮುವಾದಿ ಮತ್ತು ಫ್ಯಾಶಿಸ್ಟ್ ವಿಚಾರಗಳ ಬೀಜಗಳನ್ನು ಬಿತ್ತಲು ಫಲವತ್ತಾದ ನೆಲವಾಗಿದ್ದುದರಿಂದ ಪಠ್ಯಪುಸ್ತಕಗಳಲ್ಲಿ ಈ ಭಯಾನಕ ತಪ್ಪು ವಿಚಾರಗಳನ್ನು ಪರಿಚಯಿಸುವ ಮೂಲಕ, ಮಕ್ಕಳಲ್ಲಿನ ಚಿಂತನಾ ಪ್ರಕ್ರಿಯೆಯನ್ನೇ ಸರಕಾರಗಳು ನಾಶಗೊಳಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಪಂಚದ ಜ್ಞಾನ ಮತ್ತು ಪ್ರಗತಿಯನ್ನು ಸ್ವೀಕರಿಸಿ ನಮ್ಮ ನಾಗರಿಕತೆಯನ್ನು ಉನ್ನತಕ್ಕೇರಿಸುವಲ್ಲಿ ಇದು ಅಡ್ಡಿಯಾಗುತ್ತದೆ. ನಮ್ಮ ಜನತೆಯು ಪಠ್ಯಗಳ ಮೂಲಕ ರಾಜಕೀಯ ಉಪದೇಶಗಳನ್ನು ಕಲಿಯುವುದನ್ನು ವಿರೋಧಿಸಬೇಕಿದೆ. ಮಕ್ಕಳಲ್ಲಿ ವೈಜ್ಞಾನಿಕ ಮತ್ತು ಜಾತ್ಯತೀತ ಮನೋಭಾವವನ್ನು ಬೆಳೆಸುವ ಗುಣಮಟ್ಟದ ಪಠ್ಯಪುಸ್ತಕಗಳಿಗಾಗಿ ದ್ವನಿ ಎತ್ತಬೇಕಿದೆ ಎಂದು ಕರೆ ನೀಡಿದ್ದಾರೆ.







