ರಾಷ್ಟ್ರಪತಿ ಚುನಾವಣೆ: ವಿಧಾನಸೌಧ ತಲುಪಿದ ಬ್ಯಾಲೆಟ್ ಬಾಕ್ಸ್

ಬೆಂಗಳೂರು, ಜು.12: ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಹಿನ್ನಲೆಯಲ್ಲಿ ಮತದಾನದ ಅವಶ್ಯಕ ಸಾಮಾಗ್ರಿಗಳು ಹಾಗೂ ಬ್ಯಾಲೆಟ್ ಬಾಕ್ಸ್ ಗಳನ್ನು ಇಂದು ನವದೆಹಲಿಯ ಭಾರತ ಚುನಾವಣಾ ಆಯೋಗದ ಕೇಂದ್ರ ಕಚೇರಿಯಿಂದ ಆಯಾ ರಾಜ್ಯಗಳಿಗೆ ರವಾನಿಸಲಾಯಿತು. ನಮ್ಮ ರಾಜ್ಯದ ಬ್ಯಾಲೆಟ್ ಜರ್ನಿಯ ನೇತೃತ್ವವನ್ನು ರಾಜ್ಯ ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ ಅವರು ವಹಿಸಿದ್ದು, ಇಂದು ಸಂಜೆ ನವದೆಹಲಿಯಿಂದ ನಿರ್ಗಮಿಸಿ ರಾತ್ರಿ 8:15 ಕ್ಕೆ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು.
ಈ ವಿಶೇಷ ಬ್ಯಾಲೆಟ್ ಜರ್ನಿಯ ಮುಖಾಂತರ ರಾಜ್ಯಕ್ಕೆ ಆಗಮಿಸಿದ ಮತದಾನದ ಸಾಮಾಗ್ರಿಗಳನ್ನು ವಿಧಾನಸೌಧದ ಇದಕ್ಕಾಗಿ ಮೀಸಲಿಟ್ಟಿರುವ ಕೊಠಡಿ ಸಂಖ್ಯೆ 108 ರಲ್ಲಿ (Strong Room) ಶೇಖರಿಸಿಡಲಾಯಿತು.
ಇಂದು ರಾತ್ರಿ 9 ಗಂಟೆಗೆ ವಿಧಾನಸೌಧ ತಲುಪಿದ ಈ ವಿಶೇಷ ಬ್ಯಾಲೆಟ್ ಜರ್ನಿಯನ್ನು ರಾಜ್ಯ ಮುಖ್ಯಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹಾಗೂ ಸಹಾಯಕ ಚುನಾವಣಾಧಿಕಾರಿ ಶ್ರೀಮತಿ ವಿಶಾಲಾಕ್ಷಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸ್ಟ್ರಾಂಗ್ ರೂಂ ಲಾಕ್ ಮಾಡಿದರು.
ನವದೆಹಲಿಯಿಂದ ಆಗಮಿಸಿದ ಈ ವಿಶೇಷ ಬ್ಯಾಲೆಟ್ ಜರ್ನಿಯಲ್ಲಿ ರಾಜ್ಯಕ್ಕೆ ಒಂದು ಸ್ಟೀಲ್ ಫ್ರೇಮ್ ಬ್ಯಾಲೆಟ್ ಬಾಕ್ಸ್, ಮಾರ್ಕ್ ಕಾಪಿ ಮತದಾರರ ಪಟ್ಟಿ ಹಾಗೂ ವಿಶೇಷ ಪೆನ್ನು ಸೇರಿದಂತೆ ಹಲವು ಸಾಮಾಗ್ರಿಗಳನ್ನು ಒಳಗೊಂಡಿದೆ.
ಸ್ಟ್ರಾಂಗ್ ರೂಂ ಲಾಕ್ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಹಾಯಕ ಚುನಾವಣಾಧಿಕಾರಿಗಳು ರಾಷ್ಟ್ರಪತಿ ಚುನಾವಣೆಯಲ್ಲಿ ರಾಜ್ಯದ ಒಟ್ಟು 224 ಶಾಸಕರು+1ಸಂಸತ್ ಸದಸ್ಯರು ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದರು.
ಉಳಿದ ರಾಜ್ಯದ ಸಂಸದರು ಸಂಸತ್ ನಲ್ಲಿ ಮತ ಚಲಾಯಿಸಲಿದ್ದಾರೆ, ಒಬ್ಬರು ಅನಾರೋಗ್ಯದ ಕಾರಣಕ್ಕಾಗಿ ಇಲ್ಲಿಯೇ ಮತ ಚಲಾಯಿಸಲು ಮನವಿ ಮಾಡಿಕೊಂಡಿರುವ ಕಾರಣಕ್ಕಾಗಿ ಚುನಾವಣಾ ಆಯೋಗ ಅನುಮತಿ ನೀಡಿದೆ ಎಂದು ಹೇಳಿದರು.






.jpeg)


