ನಾಗರಾಜ್ ಹೆಬ್ಬಾರ್ರ ‘ಚಾರಧಾಮ್ ಯಾತ್ರಾ’ ಕೃತಿ ಬಿಡುಗಡೆ

ಉಡುಪಿ : ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ಮರವಂತೆ ನಾಗರಾಜ್ ಹೆಬ್ಬಾರ್ ಅವರ ಪ್ರವಾಸ ಕಥನ ‘ಚಾರಧಾಮ್ ಯಾತ್ರಾ’ ಕೃತಿ ಬಿಡುಗಡೆ ಸಮಾರಂಭವು ಮಂಗಳವಾರ ಉಡುಪಿಯ ಮಣಿಪಾಲ್ ಇನ್ ಹೊಟೇಲಿನ ಸಿಂಡ್ರೆಲಾ ಸಭಾಂಗಣದಲ್ಲಿ ಜರಗಿತು.
ಕೃತಿಯನ್ನು ಬಿಡುಗಡೆಗೊಳಿಸಿದ ಮಣಿಪಾಲ ಕೆಎಂಸಿಯ ಪ್ರೊಫೆಸರ್ ಡಾ. ಕಿರಣ್ ಆಚಾರ್ಯ ಮಾತನಾಡಿ, ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಾಗರಾಜ್ ಹೆಬ್ಬಾರ್ ಮುಂದೆಯೂ ಇಂತಹ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಕಥೆಗಳನ್ನು ಚಿಕ್ಕ ಪುಸ್ತಕ ರೂಪದಲ್ಲಿ ಹೊರ ತಂದು ಪ್ರವಾಸಿ ತಾಣಗಳ ಪರಿಚಯವನ್ನು ಪ್ರವಾಸಿಗರಿಗೆ ಮಾಡಿಕೊಡಬೇಕೆಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಲಕ್ಷ್ಮೀನಾರಾಯಣ ಕೃತಿ ಪರಿಚಯ ಮಾಡಿದರು. ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕರಾವಳಿ ಪ್ರವಾಸ ಉದ್ಯಮ ಸಂಘಟನೆಯ ಮನೋಹರ್ ಎಸ್.ಶೆಟ್ಟಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು.
ಕಲಾವಿದ ರಾಜೇಶ್ ಭಟ್ ಪಣಿಯಾಡಿ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.