ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ; ಪೂರ್ವಭಾವಿ ಸಭೆಗೆ ಡಿಕೆಶಿ, ಹರಿಪ್ರಸಾದ್ ಗೈರು

ಬೆಂಗಳೂರು, ಜು.13: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೆ ಜನ್ಮದಿನಾಚರಣೆ ಪ್ರಯುಕ್ತ ದಾವಣಗೆರೆಯಲ್ಲಿ ಆ.3ರಂದು ಆಯೋಜಿಸುತ್ತಿರುವ ‘ಸಿದ್ದರಾಮಯ್ಯ ಅಮೃತ ಮಹೋತ್ಸವ’ ಕಾರ್ಯಕ್ರಮದ ಅಂಗವಾಗಿ ಬುಧವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಗೈರು ಹಾಜರಿ ಎದ್ದು ಕಾಣುತ್ತಿತ್ತು.
ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಸೂಚನೆಯಂತೆ ಆ.15ರಂದು ಹಮ್ಮಿಕೊಂಡಿರುವ ಸ್ವಾತಂತ್ರ್ಯದ ನಡಿಗೆ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲು ಕೆಪಿಸಿಸಿ ಕಚೇರಿಯಲ್ಲಿ ಪೂರ್ವನಿಗದಿತ ಸಭೆ ಹಿನ್ನೆಲೆಯಲ್ಲಿ ನಾನು ಸಿದ್ದರಾಮಯ್ಯ ಅಮೃತ ಮಹೋತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದರು.
ಆದರೆ, ಸಿದ್ದರಾಮಯ್ಯ ಅಮೃತ ಮಹೋತ್ಸವವನ್ನು ಪಕ್ಷದ ವತಿಯಿಂದಲೆ ಆಯೋಜಿಸಲಾಗುತ್ತಿದೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಡಿ.ಕೆ.ಶಿವಕುಮಾರ್, ಪೂರ್ವಸಿದ್ಧತಾ ಸಭೆಯಿಂದ ಅಂತರ ಕಾಯ್ದುಕೊಂಡಿದ್ದು ಏಕೆ ಎಂಬ ಪ್ರಶ್ನೆ ಕಾಡುತ್ತಿದೆ. ಅದೇ ರೀತಿ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೊಸದಿಲ್ಲಿಗೆ ತೆರಳಿದ್ದರಿಂದ ಸಭೆಯಲ್ಲಿ ಭಾಗಿಯಾಗಿರಲಿಲ್ಲ.
ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಸಿದ್ದರಾಮಯ್ಯ ತಮ್ಮ ಹುಟ್ಟುಹಬ್ಬವನ್ನು ಈ ರೀತಿ ಆಚರಿಸಿಕೊಳ್ಳಲು ಒಪ್ಪಿರಲಿಲ್ಲ. ನಾವೆಲ್ಲ ಸ್ನೇಹಿತರು ಸೇರಿ ಒತ್ತಡ ಹಾಕಿದ್ದರಿಂದ ಅವರು ಸಮ್ಮತಿ ಸೂಚಿಸಿದರು. ನಾವು ಯಾರೂ ಸಿದ್ದರಾಮಯ್ಯ ಅವರಿಗೆ ಹೊಗಳುಭಟ್ಟರೂ ಅಲ್ಲ, ವ್ಯಕ್ತಿಪೂಜೆ ಮಾಡುವವರೂ ಅಲ್ಲ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ಗೆ ತಿರುಗೇಟು ನೀಡಿದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, 75ನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಬೇಕು ಎಂದು ಸಿದ್ದರಾಮಯ್ಯ ಅವರ ಅಭಿಮಾನಿಗಳು, ಹಿತೈಷಿಗಳು ತೀರ್ಮಾನಿಸಿದ್ದಾರೆ. ಕಾಕತಾಳೀಯ ಎಂಬಂತೆ ಅವರ 75ನೆ ಹುಟ್ಟುಹಬ್ಬದ ಜೊತೆಯಲ್ಲಿ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವು ನಡೆಯುತ್ತಿದೆ. ಇವೆರಡನ್ನೂ ಜೊತೆಗೆ ಬಿಂಬಿಸುವ ಮೂಲಕ ಕಾರ್ಯಕ್ರಮ ಆಯೋಜಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವ್ಯಕ್ತಿ ಪೂಜೆ ಸಿದ್ದರಾಮಯ್ಯ ಅವರಿಗೆ ಇಷ್ಟ ಇದೆಯೋ, ಇಲ್ಲವೋ, ಆದರೆ ಕೆಲವರು ಅದನ್ನು ಮಾಡುತ್ತಲೆ ಇರುತ್ತಾರೆ. ನಾವು ಯಾರದ್ದೋ ನಾಯಕತ್ವ ಬಿಂಬಿಸಲು ಹೋಗುತ್ತಿದ್ದೇವೆ ಎಂದಲ್ಲ, ನಮ್ಮ ನಾಯಕರ ಹುಟ್ಟುಹಬ್ಬ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ಸುರೇಶ್ ಹೇಳಿದರು.
ಚುನಾವಣಾ ವರ್ಷದಲ್ಲಿ ಕಾರ್ಯಕರ್ತರಿಗೆ ಹಾಗೂ ಜನಸಾಮಾನ್ಯರಿಗೆ ಯಾವುದೆ ರೀತಿಯ ಕೆಟ್ಟ ಸಂದೇಶ ಹೋಗದಂತೆ ಕಾರ್ಯಕ್ರಮ ಆಯೋಜಿಸಬೇಕು. ಆ ಮೂಲಕ ಇದರಿಂದ ಪಕ್ಷಕ್ಕೂ ಲಾಭ ಆಗಬೇಕು. ನಮಗೆ ಇಷ್ಟ ಇದೆಯೋ, ಇಲ್ಲವೋ, ಆದರೆ ಮಾಧ್ಯಮಗಳು ಮಾತ್ರ ಈ ಕಾರ್ಯಕ್ರಮವನ್ನು ‘ಸಿದ್ದರಾಮೋತ್ಸವ’ ಎಂದೇ ಪ್ರಚಾರ ಮಾಡುತ್ತಿವೆ ಎಂದು ಸುರೇಶ್ ಹೇಳಿದರು.
ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಕೆಪಿಸಿಸಿ ಅಧ್ಯಕ್ಷನಾಗಿ 8 ವರ್ಷ ಸಿದ್ದರಾಮಯ್ಯ ಜೊತೆ ಕೆಲಸ ಮಾಡಿದ್ದೇನೆ. ಸಂಪೂರ್ಣವಾಗಿ ಅವರನ್ನು ಅರ್ಥ ಮಾಡಿಕೊಳ್ಳಲು ಆಗದೆ ಇದ್ದರೂ ಶೇ.50ರಷ್ಟಾದರೂ ಅರ್ಥ ಮಾಡಿಕೊಂಡಿದ್ದೇನೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ಶೇ.50ರಷ್ಟು ಅಲ್ಲ, ಇನ್ನೂ ಜಾಸ್ತಿನೇ ಅರ್ಥ ಮಾಡಿಕೊಂಡಿದ್ದೀರಾ ಎಂದರು. ನಂತರ ಮಾತು ಮುಂದುವರೆಸಿದ ಪರಮೇಶ್ವರ್, ಇನ್ನು ಜಾಸ್ತಿನಾ ಸರ್ ಎಂದರು. ಆಗ ಸಭೆಯಲ್ಲಿ ಎಲ್ಲರೂ ಮುಗುಳ್ನಕ್ಕರು.
ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಸಿದ್ದರಾಮಯ್ಯ ಅವರ 75ನೆ ಜನ್ಮದಿನಾಚರಣೆ ಕಾರ್ಯಕ್ರಮವನ್ನು ನಾವು ಸಿದ್ದರಾಮಯ್ಯ ಅಮೃತ ಮಹೋತ್ಸವ ಎಂದು ಹೇಳಿದ್ದೇವೆಯೇ ಹೊರತು, ಸಿದ್ದರಾಮೋತ್ಸವ ಎಂದು ಎಲ್ಲೂ ಹೇಳಿಲ್ಲ. ಬಿಜೆಪಿಯವರು ತೀರಾ ಕೀಳುಮಟ್ಟದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಗಾರಿದರು.
ಸಭೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಧ್ರುವನಾರಾಯಣ, ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ನಸೀರ್ ಅಹ್ಮದ್, ಮಾಜಿ ಶಾಸಕ ಕೆ.ಎನ್.ರಾಜಣ್ಣ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಸಿದ್ದರಾಮಯ್ಯ ಅಮೃತ ಮಹೋತ್ಸವ ಆಚರಣೆಯ ಪೂರ್ವಸಿದ್ಧತಾ ಸಭೆಗೆ ಆಗಮಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕಂಡು ಅಭಿಮಾನಿಗಳು, ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’, ‘ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಘೋಷಣೆಗಳನ್ನು ಕೂಗಿದರು.






.jpg)
.jpg)

