ಸರಕಾರಿ ಕಟ್ಟಡಗಳ ಆಕ್ರಮಣವನ್ನು ಕೊನೆಗೊಳಿಸುತ್ತಿದ್ದೇವೆ: ಲಂಕಾದ ಪ್ರತಿಭಟನಾಕಾರರ ಘೋಷಣೆ

Photo:ANI
ಕೊಲಂಬೊ: ಭೀಕರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಪ್ರಧಾನ ಮಂತ್ರಿಯನ್ನು ಕೆಳಗಿಳಿಸಲು ತಮ್ಮ ಪ್ರಯತ್ನವನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದ ಶ್ರೀಲಂಕಾದ ಸರಕಾರಿ ವಿರೋಧಿ ಪ್ರತಿಭಟನಾಕಾರರು ಗುರುವಾರ ಅಧಿಕೃತ ಕಟ್ಟಡಗಳ ಆಕ್ರಮಣವನ್ನು ಕೊನೆಗೊಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರು ವಾರಾಂತ್ಯದಲ್ಲಿ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ಅರಮನೆಯನ್ನು ಆಕ್ರಮಿಸಿದ್ದರು, ಬುಧವಾರ ಗೊಟಬಯ ಮಾಲ್ಡೀವ್ಸ್ಗೆ ಪಲಾಯನಯಾಗುವಂತೆ ಮಾಡಿದ್ದರು, ಕೆಲವು ಕಾರ್ಯಕರ್ತರು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಕಚೇರಿಗೆ ನುಗ್ಗಿದ್ದರು.
ರಾಜಪಕ್ಸ ಬುಧವಾರ ರಾಜೀನಾಮೆ ನೀಡುವುದಾಗಿ ಭರವಸೆ ನೀಡಿದ್ದರು, ಆದರೆ ಅವರು ಹಾಗೆ ಮಾಡದೆ ದೇಶಬಿಟ್ಟು ಪರಾರಿಯಾಗಿದ್ದರು.
ರಾಜಪಕ್ಸ ಅವರ ಅನುಪಸ್ಥಿತಿಯಲ್ಲಿ ಹಂಗಾಮಿ ಅಧ್ಯಕ್ಷರಾಗಿ ಹೆಸರಿಸಲಾದ ಪ್ರಧಾನ ಮಂತ್ರಿ ರನಿಲ್ ವಿಕ್ರಮಸಿಂಘೆ ರಾಜ್ಯದ ಕಟ್ಟಡಗಳನ್ನು ಖಾಲಿ ಮಾಡುವಂತೆ ಹಾಗೂ ಕಾನೂನು "ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಏನು ಅಗತ್ಯವಿದೆಯೇ ಅದನ್ನು ಮಾಡುವಂತೆ" ಎಂದು ಭದ್ರತಾ ಪಡೆಗಳಿಗೆ ಸೂಚಿಸಿದ್ದರು.
"ನಾವು ತಕ್ಷಣದಿಂದ ಜಾರಿಗೆ ಬರುವಂತೆ ರಾಷ್ಟ್ರಪತಿ ಭವನ, ಅಧ್ಯಕ್ಷೀಯ ಸಚಿವಾಲಯ ಹಾಗೂ ಪ್ರಧಾನ ಮಂತ್ರಿ ಕಚೇರಿಯಿಂದ ಶಾಂತಿಯುತವಾಗಿ ಹಿಂದೆ ಸರಿಯುತ್ತಿದ್ದೇವೆ, ಆದರೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ" ಎಂದು ಪ್ರತಿಭಟನಾಕಾರರ ವಕ್ತಾರರು ತಿಳಿಸಿದ್ದಾರೆ.