ಪರ್ಕಳದಲ್ಲಿ ಶತಮಾನ ಕಂಡ ಎತ್ತಿನ ಗಾಡಿ!
![ಪರ್ಕಳದಲ್ಲಿ ಶತಮಾನ ಕಂಡ ಎತ್ತಿನ ಗಾಡಿ! ಪರ್ಕಳದಲ್ಲಿ ಶತಮಾನ ಕಂಡ ಎತ್ತಿನ ಗಾಡಿ!](https://www.varthabharati.in/sites/default/files/images/articles/2022/07/14/342326-1657802178.jpg)
ಉಡುಪಿ, ಜು.14: ಪರ್ಕಳ ಸರಸ್ವತಿ ನಗರದ ದಿನೇಶ್ ಶೆಟ್ಟಿಗಾರ್ ಅವರ ಮನೆಯಲ್ಲಿ ಹಳೆ ಕಾಲದ ಮೂರು ತಲೆಮಾರು ಕಂಡ ಎತ್ತಿನ ಗಾಡಿಯೊಂದು ಪಳೆಯುಳಿಕೆಯಾಗಿ ಉಳಿದುಕೊಂಡಿದೆ.ಕಾರ್ಕಳ, ಬೈಲೂರು, ಹೆಬ್ರಿ, ಉಡುಪಿ ಮೊದಲಾದ ಕಡೆ ನಡೆಯುವ ಸಂತೆಗೆ ಅಕ್ಕಿ ಮೂಟೆ, ದಿನಸಿ, ಸಾಂಬಾರು ಪದಾರ್ಥ, ಬೆಲ್ಲದ ಡಬ್ಬಿ, ಒಡೆದ ಕಟ್ಟಿಗೆ, ತೆಂಗಿನಕಾಯಿ, ಬೈ ಹುಲ್ಲು, ತರಕಾರಿಗಳ ಮೂಟೆ ಸಾಗಿಸುವ ಮೂಲಕ ಒಂದು ಕುಟುಂಬದ ಜೀವನಾಡಿಯಾಗಿದ್ದ ಈ ಎತ್ತಿನ ಗಾಡಿ ಇದೀಗ ಶತಮಾನ ಪೂರೈಸಿದೆ ಎಂದು ಸರಸ್ವತಿ ನಗರದ ದಿನೇಶ್ ಶೆಟ್ಟಿಗಾರ್ ನೆನಪಿಸಿಕೊಂಡರು.
ಇದನ್ನು ಮೊದಲು ನನ್ನ ಅಜ್ಜ ದಿವಂಗತ ಕಿಟ್ಟ ಶೆಟ್ಟಿಗಾರ್, ನಂತರ ನನ್ನ ತಂದೆ ದಿವಂಗತ ಸಾಧು ಶೆಟ್ಟಿಗಾರ್ ಉಪಯೋಗಿಸುತ್ತಿದ್ದರು. ತಂದೆ ಸ್ವಲ್ಪ ದುರಸ್ತಿ ಮಾಡಿ ಈ ಎತ್ತಿನ ಗಾಡಿಯನ್ನು ಓಡಿಸುತ್ತಿದ್ದರು. ಮೂರು ತಲೆಮಾರುಗಳನ್ನು ಕಂಡ ಎತ್ತಿನಗಾಡಿ ಇದಾಗಿದೆ. ನನ್ನ ಪತಿ ಉಪಯೋಗಿಸುತ್ತಿದ್ದ ಈ ಎತ್ತಿನ ಗಾಡಿಯನ್ನು ಇಂದಿಗೂ ನಮ್ಮ ಮನೆಯ ಮುಂದೆ ಉಳಿಸಿಕೊಂಡಿದ್ದೇವೆ ಎಂದು ಸಾಧು ಶೆಟ್ಟಿಗಾರರ ಪತ್ನಿ ಭವಾನಿ ಶೆಟ್ಟಿಗಾರ್ ತಿಳಿಸಿದರು.
ನಮ್ಮ ಮಕ್ಕಳು ಇದನ್ನು ಮನೆಯ ಮುಂದೆ ಇಟ್ಟು ನಮ್ಮ ಹಿರಿಯರು ಬಾಳಿ ಬದುಕು ಸಾಗಿಸಿದ ಜೀವನದ ಬಂಡಿಯೇ ಎನಿಸಿದ ಈ ಎತ್ತಿನ ಗಾಡಿಯ ಸವಿ ನೆನಪನ್ನು ಮೆಲಕು ಹಾಕುತ್ತಾರೆ. ಶತಮಾನ ಕಂಡಿರುವ ಈ ಎತ್ತಿನ ಬಂಡಿ ಈಗಲೂ ಉಪಯೋಗಿಸುವ ಸ್ಥಿತಿಯಲ್ಲಿ ಇರುವುದು ಅದ್ಭುತವಾಗಿದೆ ಎಂದು ಅವರು ಹೇಳಿದರು.
ಕಾಲ ಬದಲಾದಂತೆ ನಾವು ಇಂದು ವಾಹನಗಳ ಮೂಲಕ ಸಾಗಾಟ ಮಾಡುವ ಪ್ರಕ್ರಿಯೆಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ಎತ್ತಿನ ಗಾಡಿ ತುಳು ನಾಡಿನಲ್ಲಿ ಅವಸಾನದ ಅಂಚಿಗೆ ಬಂದು ತಲುಪಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ರಾಜೇಶ್ ಪ್ರಭು ಪರ್ಕಳ ಅಭಿಪ್ರಾಯ ಪಟ್ಟಿದ್ದಾರೆ.