ನಮ್ಮ ಸರ್ಕಾರದ ಹಗರಣಗಳ ಬಗ್ಗೆ ತನಿಖೆಗೆ ಈ 3 ವರ್ಷ ಸಾಕಾಗಲಿಲ್ಲವೇ?: ಸಚಿವ ಅಶ್ವತ್ಥನಾರಾಯಣಗೆ ಸಿದ್ದರಾಮಯ್ಯ ತಿರುಗೇಟು
''ನೀವೆಲ್ಲರೂ ಸಾಮೂಹಿಕ ರಾಜೀನಾಮೆ ನೀಡಿ ಮನೆಗೆ ಹೋಗುವುದು ಒಳಿತು''

ಬೆಂಗಳೂರು: 'ನಿಮ್ಮ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ತನಿಖೆಗಾಗಿ ಇಡೀ ವಿಧಾನಸೌಧವನ್ನೇ ತನಿಖಾ ಸಂಸ್ಥೆಗಳಿಗೆ ಬಿಟ್ಟುಕೊಡಬೇಕಾಗಬಹುದು. ಸಚಿವರು ಬೇರೇನೂ ಕೆಲಸ ಮಾಡದೆ ತನಿಖಾಧಿಕಾರಿಗಳ ಮುಂದೆ ನಿತ್ಯ ವಿಚಾರಣೆಗೆ ಹಾಜರಿ ಹಾಕಬೇಕಾಗಬಹುದು. ಇದಕ್ಕಿಂತ ಎಲ್ಲರೂ ಸಾಮೂಹಿಕ ರಾಜೀನಾಮೆ ನೀಡಿ ಮನೆಗೆ ಹೋಗುವುದು ಒಳಿತು' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಕುರಿತು ಶುಕ್ರವಾರ ಟ್ವಿಟ್ ಮಾಡಿರುವ ಅವರು, 'ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯ ಹಗರಣಗಳನ್ನು ತನಿಖೆಗೆ ಒತ್ತಾಯಿಸಿ ಸಿಎಂಗೆ ಪತ್ರ ಬರೆಯಲಿರುವ ಸಚಿವ ಅಶ್ವತ್ಥನಾರಾಯಣ ಹೇಳಿಕೆಯನ್ನು ಸ್ವಾಗತಿಸುತ್ತೇನೆ, ಇದೇ ರೀತಿ ಪಿಎಸ್ ಐ ನೇಮಕಾತಿ ಹಗರಣದಲ್ಲಿ ಅವರ ಮೇಲಿನ ಆರೋಪಗಳ ಬಗ್ಗೆಯೂ ತನಿಖೆಗೆ ಒತ್ತಾಯಿಸಿ ಪತ್ರ ಬರೆಯಲು ಕೇಳಿಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.
'ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಯಿತು, ನಮ್ಮ ಸರ್ಕಾರದ ಹಗರಣಗಳ ಬಗ್ಗೆ ತನಿಖೆಗೆ ಈ ಮೂರು ವರ್ಷ ಸಾಕಾಗಲಿಲ್ಲವೇ? ನಿಮ್ಮ ತಲೆಗೆ ಹಗರಣಗಳು ಸುತ್ತಿಕೊಂಡ ಕೂಡಲೇ ನಮ್ಮ ಕಾಲದ ಹಗರಣಗಳು ನೆನಪಾಯಿತೇ?' ಎಂದು ಪ್ರಶ್ನೆ ಮಾಡಿದ್ದಾರೆ.
'ಬಿಜೆಪಿ ಸರ್ಕಾರದ ಸಾಲು ಸಾಲು ಹಗರಣಗಳನ್ನು ಬಯಲಿಗೆಳೆಯದಂತೆ ತಡೆಯಲು ನೀವು ಮಾಡುತ್ತಿರುವ ಬೆದರಿಕೆ ರೂಪದ ಆರೋಪಗಳಿಗೆ ನಾವು ಬಗ್ಗುವವರಲ್ಲ. ಈ ರೀತಿಯ ಈ ಬ್ಲಾಕ್ ಮೇಲ್ ತಂತ್ರದಿಂದ ನಮ್ಮ ಬಾಯಿ ಮುಚ್ಚಿಸಬಹುದೆಂದು ತಿಳಿದುಕೊಂಡಿದ್ದರೆ ಅದು ನಿಮ್ಮ ಭ್ರಮೆ' ಎಂದು ಹೇಳಿದ್ದಾರೆ.
ನಿಮ್ಮ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ತನಿಖೆಗಾಗಿ ಇಡೀ ವಿಧಾನಸೌಧವನ್ನೇ ತನಿಖಾ ಸಂಸ್ಥೆಗಳಿಗೆ ಬಿಟ್ಟುಕೊಡಬೇಕಾಗಬಹುದು @drashwathcn. ಸಚಿವರು ಬೇರೇನೂ ಕೆಲಸ ಮಾಡದೆ ತನಿಖಾಧಿಕಾರಿಗಳ ಮುಂದೆ ನಿತ್ಯ ವಿಚಾರಣೆಗೆ ಹಾಜರಿ ಹಾಕಬೇಕಾಗಬಹುದು. ಇದಕ್ಕಿಂತ ಎಲ್ಲರೂ ಸಾಮೂಹಿಕ ರಾಜೀನಾಮೆ ನೀಡಿ ಮನೆಗೆ ಹೋಗುವುದು ಒಳಿತು. 4/4#PSIScam pic.twitter.com/J2M0LuBsxT
— Siddaramaiah (@siddaramaiah) July 15, 2022







