ಅಪಹರಣ ಪ್ರಕರಣ: ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರಾದ ರುಬಿಯಾ ಸಯೀದ್
ಜಮ್ಮು, ಜು. 15: 1989ರ ತನ್ನ ಅಪಹರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್ ಅವರು ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.
ಈ ಅಪಹರಣ ಪ್ರಕರಣದಲ್ಲಿ ಜೆಕೆಎಲ್ಎಫ್ ವರಿಷ್ಠ ಯಾಸಿನ್ ಮಲಿಕ್ ಹಾಗೂ ಇತರ ಮೂವರನ್ನು ಆರೋಪಿಗಳನ್ನು ಎಂದು ಹೆಸರಿಸಲಾಗಿದೆ. ಐವರು ಭಯೋತ್ಪಾದಕರನ್ನು ಬಿಡುಗಡೆ ಮಾಡಿದ ಮಾಡಿದ ಬಳಿಕ ರುಬಿಯಾ ಸಯೀದ್ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಹಾಜರಾಗುವಂತೆ ರುಬಿಯಾ ಸಯೀದ್ಗೆ ನ್ಯಾಯಾಲಯ ಇದೇ ಮೊದಲ ಬಾರಿಗೆ ಸೂಚಿಸುತ್ತಿರುವುದು.
ಪ್ರಕರಣದ ತನಿಖೆಯನ್ನು 1990ರಲ್ಲಿ ಕೈಗೆತ್ತಿಕೊಂಡಿರುವ ಸಿಬಿಐ ತಮಿಳುನಾಡಿನಲ್ಲಿ ನೆಲೆಸಿರುವ ರುಬಿಯಾ ಸಯೀದ್ ಅವರನ್ನು ಪ್ರಾಸಿಕ್ಯೂಷನ್ ಸಾಕ್ಷಿ ಎಂದು ಪರಿಗಣಿಸಿದೆ.
ಭಯೋತ್ಪಾದನೆಗೆ ಹಣ ಹೂಡಿಕೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ನಿಷೇಧಿತ ಜೆಕೆಎಲ್ಎಫ್ನ ವರಿಷ್ಠ ಮಲಿಕ್ಗೆ ನ್ಯಾಯಾಲಯ ಇತ್ತೀಚಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.