ತುಂಬೆ; ಸರಕಾರಿ ವಾಹನದ ಗಾಜು ಪುಡಿ ಮಾಡಿ ಹಲ್ಲೆಗೆ ಮುಂದಾದ ಯುವಕ: ಪ್ರಕರಣ ದಾಖಲು

ಬಂಟ್ವಾಳ: ಕ್ಷುಲ್ಲಕ ವಿಚಾರಕ್ಕೆ ದ್ವಿಚಕ್ರ ವಾಹನ ಸವಾರನೊಬ್ಬ ಸರಕಾರಿ ವಾಹನವೊಂದರ ಗಾಜು ಪುಡಿ ಮಾಡಿದ್ದಲ್ಲದೆ ಕಾರಿನಲ್ಲಿದ್ದ ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿ, ಅವ್ಯಾಚ್ಚ ಶಬ್ದಗಳಿಂದ ಬೈದಿರುವ ಘಟನೆ ಶನಿವಾರ ತುಂಬೆಯಲ್ಲಿ ನಡೆದಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ಜಿಪಂ ಕಚೇರಿಯ ವಾಹನವೊಂದರ ಚಾಲಕ ದೇವದಾಸ್ ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ.
ದೇವದಾಸ್ ಅವರು, ಪುತ್ತೂರಿನಲ್ಲಿ ನಡೆಯುವ ಅಗತ್ಯ ಮೀಟಿಂಗ್ ನಲ್ಲಿ ಭಾಗವಹಿಸಲು ಜಿಲ್ಲಾ ಪಂಚಾಯತ್ ನ ಮೂವರು ಅಧಿಕಾರಿಗಳನ್ನು ಕಾರಿನಲ್ಲಿ ಮಂಗಳೂರಿನಿಂದ ಪುತ್ತೂರಿಗೆ ಕರೆದುಕೊಂಡು ಹೋಗುವ ವೇಳೆ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಮ್ಮ ಎದುರಿನಲ್ಲಿ ಸಂಚರಿಸುತ್ತಿದ್ದ ವಾಹನವೊಂದು ಬ್ರೇಕ್ ಹಾಕಿದಾಗ ನಾನು ಕೂಡಾ ಕಾರಿನ ಬ್ರೇಕ್ ಹಾಕಿದ್ದೇನೆ. ಕಾರಿನ ಹಿಂಬದಿಯಲ್ಲಿ ವೇಗವಾಗಿ ಬರುತ್ತಿದ್ದ ದ್ವಿಚಕ್ರ ವಾಹನದಲ್ಲಿದ್ದ ಆರೋಪಿ ಯುವಕ ಕೂಡ ಬ್ರೇಕ್ ಹಾಕಿದ್ದು ಈ ವೇಳೆ ಆತ ನಿಯಂತ್ರಣ ಕಳೆದು ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾನೆ ಎಂದು ದೂರಿನಲ್ಲಿ ದೇವದಾಸ್ ಅವರು ತಿಳಿಸಿದ್ದಾರೆ.
ಬಳಿಕ ಆತ ಕಾರಿಗೆ ದ್ವಿಚಕ್ರ ವಾಹನವನ್ನು ಅಡ್ಡ ಇಟ್ಟು ಕಾರಿನ ಗಾಜು ಅನ್ನು ಪುಡಿ ಮಾಡಿದ್ದಾನೆ. ಆ ಬಳಿಕ ತನ್ನ ಸಹಿತ ಕಾರಿನಲ್ಲಿದ್ದ ಅಧಿಕಾರಿಗಳಿಗೆ ಅವ್ಯಾಚ್ಚ ಶಬ್ದಗಳಿಂದ ಬೈದು ನಿಂದಿಸಿದ್ದಾನೆ ಎಂದು ದೂರು ನೀಡಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







