ಆರೆಸ್ಸೆಸ್ನಿಂದ ದೇಶದ ವೈವಿಧ್ಯತೆಯನ್ನು ವಿನಾಶಗೊಳಿಸುವ ಯತ್ನ: ಎಂ.ಎಸ್.ಸಾಜಿದ್

ಮಂಗಳೂರು: ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಪ್ರಯತ್ನದ ಭಾಗವಾಗಿ ಆರೆಸ್ಸೆಸ್ ದೇಶದ ವೈವಿಧ್ಯತೆ ಯನ್ನು ವಿನಾಶಗೊಳಿಸುವ ಯತ್ನ ನಡೆಸುತ್ತಿದೆ. ಹಾಗಾಗಿಯೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾಯಿತ ಸರಕಾರ ಬಿಜೆಪಿಯದ್ದಾಗಿದ್ದರೂ ಆರೆಸ್ಸೆಸ್ನ ಅಜೆಂಡಾದಂತೆ ಒಂದು ದೇಶ, ಒಂದು ರೇಶನ್, ಒಂದು ಭಾಷೆ ಎಂಬ ಹೆಸರಿನಲ್ಲಿ ಸಂವಿಧಾನದ ಆಶಯಗಳನ್ನು ಛಿದ್ರಗೊಳಿಸಲಾಗುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರಾಧ್ಯಕ್ಷ ಎಂ.ಎಸ್.ಸಾಜಿದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯ ಆಶ್ರಯದಲ್ಲಿ ‘ಆಯ್ಕೆಯ ಸ್ವಾತಂತ್ರ್ಯವನ್ನು ಖಾತರಿಪಡಿಸೋಣ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯೋಣ’ ಎಂಬ ಘೋಷ ವಾಕ್ಯದೊಂದಿಗೆ ನಗರದ ಪುರಭವನದಲ್ಲಿ ಆಯೋಜಿಸಲಾದ ಗರ್ಲ್ಸ್ ಕಾನ್ಫರೆನ್ಸ್ ಅನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದು ಮೋದಿ, ನಾಳೆ ಯೋಗಿ ಎಂಬ ಆರೆಸ್ಸೆಸ್ನ ಧೋರಣೆಯ ಸರ್ವಾಧಿಕಾರ ಸರಕಾರ ಜನರು ಆಯ್ಕೆ ಮಾಡಿದ ಶಾಸಕರನ್ನೇ ಖರೀದಿಸುವ ಮೂಲಕ ಪ್ರಜಾಪ್ರಭುತ್ವದ ಕೊಲೆ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಹಿಜಾಬ್ ವಿಷಯದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದ ದಬ್ಬಾಳಿಕೆ ನೋವಿನ ವಿಚಾರವಾಗಿದ್ದರೂ, ಈ ವಿಚಾರವನ್ನು ಧೈರ್ಯದಿಂದ ಎದುರಿಸಿದ ಹೆಣ್ಣು ಮಕ್ಕಳು ಅಭಿನಂದನಾರ್ಹರು. ಇಂತಹ ದಬ್ಬಾಳಿಕೆ ಹಿಂದೆಯೂ ನಡೆದಿದೆ. ಹಿಂದೂ ರಾಷ್ಟ್ರವನ್ನಾಗಿಸಲು ಪ್ರಯತ್ನ ಪಡುತ್ತಿರುವ ಆರೆಸ್ಸೆಸ್ನ ದಬ್ಬಾಳಿಕೆ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಸಂವಿಧಾನದ ಹಕ್ಕುಗಳಿಗೆ ಧ್ವನಿ ಎತ್ತುವ ಎಲ್ಲರ ಮೇಲೂ ನಡೆಯುತ್ತಿದೆ. ಹಾಗಾಗಿ ಯಾರೂ ಎದೆಗುಂದಬೇಕಾಗಿಲ್ಲ. ನಮ್ಮ ಸಮಯ ಬಂದಾಗ ನಮ್ಮ ಶಕ್ತಿಯನ್ನು ನಾವು ತೋರಿಸಲಿದ್ದೇವೆ ಎಂದರು.
ವಿದ್ಯಾರ್ಥಿನಿ ಅಲಿಯಾ ಅಸಾದಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಹುಟ್ಟಿಕೊಂಡ ಹಿಜಾಬ್ ಧಾರಣೆ ವಿಚಾರ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿ ಸುಪ್ರೀಂ ಕೋರ್ಟ್ನಲ್ಲಿದೆ. ನಮ್ಮ ಹಕ್ಕಿಗಾಗಿನ ನ್ಯಾಯವನ್ನು ಸುಪ್ರೀಂ ಕೋರ್ಟ್ನಿಂದ ಪಡೆಯುವ ನಿರೀಕ್ಷೆ, ಆಶಾವಾದ ನಮಗಿದೆ ಎಂದರು.
ಹೋರಾಟ ಆರಂಭವಾದಾಗ ನಾನು ಈ ಮಟ್ಟಕ್ಕೆ ಈ ಹೋರಾಟ ತಲುಪಬಹುದೆಂದು ಊಹಿಸಿಯೇ ಇರಲಿಲ್ಲ. ನಮ್ಮ ಕಾಲೇಜಿನ ಆರು ಮಂದಿ ವಿದ್ಯಾರ್ಥಿಗಳಿಂದ ಆರಂಭವಾದ ಹೋರಾಟ ಇಂದು ದೇಶದ ಗಮನಸೆಳೆದು ಇದೀಗ ಸುಪ್ರೀಂ ಕೋರ್ಟ್ಗೆ ತಲುಪಿದೆ. ಇದೀಗ ನಮ್ಮ ಹಕ್ಕನ್ನು ನಾವು ಘನತೆಯೊಂದಿಗೆ ಪಡೆಯುವ ನಿರೀಕ್ಷೆ ಇದೆ. ಈ ಹೋರಾಟ ಧೈರ್ಯ ಮಾತ್ರ ಅಲ್ಲ, ಸಹನೆಯನೂ ಕಲಿಸಿಕೊಟ್ಟಿದೆ. ನಾವು ಮುಂದೆ ಉತ್ತಮ ಅಂಕಗಳೊಂದಿಗೆ ಶಿಕ್ಷಣ ಪೂರೈಸಲಿದ್ದೇವೆ. ಎಲ್ಲಾ ಘನತೆಯೊಂದಿಗೆ ಹಿಜಾಬ್ ಧರಿಸಲಿದ್ದೇವೆ ಎಂದು ಭಾವುಕರಾಗಿಯೇ ತಮ್ಮ ಅನುಭವ ಹಂಚಿಕೊಂಡರು.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ದೆಹಲಿಯ ಅಧ್ಯಕ್ಷೆ ಫೌಝಿಯಾ, ವಿದ್ಯಾರ್ಥಿನಿ ಹೋರಾಟಗಾರ್ತಿ ಗೌಸಿಯಾ ಮತ್ತು ಸಿಎಫ್ಐನ ರಾಜ್ಯಾಧ್ಯಕ್ಷ ಅತಾವುಲ್ಲಾ ಪುಂಜಾಲಕಟ್ಟೆ ಮಾತನಾಡಿದರು.
ಸಭಾ ಕಾರ್ಯಕ್ರಮದ ಮುನ್ನ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಕುರಿತಂತೆ ರೂಪಕವನ್ನು ವಿದ್ಯಾರ್ಥಿನಿಯರು ಪ್ರದರ್ಶಿಸಿದರು. ಇದೇ ವೇಳೆ ಹೆಣ್ಣು ಮಕ್ಕಳ ಸ್ವ ರಕ್ಷಣೆಯ ಕಲೆಯನ್ನು ವಿದ್ಯಾರ್ಥಿನಿಯರು ವೇದಿಕೆಯಲ್ಲಿ ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ಪೋಸ್ಟರ್ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ‘ಹಿಜಾಬ್’ ಆಂಗ್ಲ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಸಿಎಫ್ಐನ ರಾಜ್ಯ ಸಮಿತಿ ಸದಸ್ಯರಾದ ಮಿಶ್ರಿಯಾ ಪುತ್ತೂರು, ಹಿಜಾಬ್ ಪರ ಹೋರಾಟಗಾರ್ತಿಯರಾದ ಎ.ಎಚ್. ಅಲ್ಮಾಸ್, ರೇಶಂ, ಹಿಬಾ ಸೇಖ್, ಶಫಾ, ಹಝ್ರಾ ಶಿಫಾ , ಮುಸ್ಕಾನ್ ಝೈನಬ್ ಉಪಸ್ಥಿತರಿದ್ದರು.
ಫಾತಿಮಾ ಉಸ್ಮಾನ್ ಸ್ವಾಗತಿಸಿದರು. ಮುರ್ಶಿದಾ ವಂದಿಸಿದರು.
"ಮನುವಾದಿಗಳು ಇಂದು ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಸಮಾಜದಲ್ಲಿ ಬಲಹೀನರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ನಮ್ಮ ಮತಗಳ ಶಕ್ತಿಯ ಮೂಲಕ ನಾವು ಅವರಿಗೆ ಎಚ್ಚರಿಕೆ ನೀಡಬೇಕಾಗಿದೆ. ಹೆಣ್ಣು ಮಕ್ಕಳು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಜತೆಗೆ ಮಹಿಳೆಯರು ಸಮಾಜದಲ್ಲಿ ಆಗುತ್ತಿರುವ ದಬ್ಬಾಳಿಕೆ ವಿರುದ್ಧ ಸೆಣಸಾಡುವ ಬೆಂಕಿಯ ಕಿಡಿಯಾಗಿ ರೂಪುಗೊಳ್ಳಬೇಕಾಗಿದೆ".
| ಕಂಕುಬೆನ್ ರಾಥೋಡ್
ಸಾಮಾಜಿಕ ಕಾರ್ಯಕರ್ತೆ, ಗುಜರಾತ್
"ನಮ್ಮ ಹಕ್ಕಿಗಾಗಿನ ಹೋರಾಟ ನಾಗರಿಕ ಯುದ್ಧವಾಗಿ ಸಾಗಬೇಕಾಗಿದೆ. ಅದು ಎಂದಿಗೂ ದ್ವೇಷದ ಯುದ್ಧವಾಗದಂತೆ ನಾವು ಎಚ್ಚರಿಕೆ ವಹಿಸಬೇಕು. ಹೆಣ್ಣು ಮಕ್ಕಳು ತಮ್ಮ ಹಕ್ಕುಗಳ ರಕ್ಷಣೆಗಾಗಿ ಹಿಜಾಬ್ನಲ್ಲಿರುವ ಸೈನಿಕರಂತೆ ಹೋರಾಟ ನಡೆಸಬೇಕಾಗಿದೆ".
| ಡಾ.ರುಕ್ಸಾನ ಹಸನ್,
ಮನೋಶಾಸ್ತ್ರಜ್ಞೆ, ಸಾಮಾಜಿಕ ಕಾರ್ಯಕರ್ತೆ
ಜಾಥಾ ನಡೆಸಲು ಅನುಮತಿ ನಿರಾಕರಣೆ
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಹಮ್ಮಿಕೊಂಡಿದ್ದ ಗರ್ಲ್ಸ್ ಕಾನ್ಫರೆನ್ಸ್ನ ಹಿನ್ನೆಲೆಯಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ ಪುರಭವನದವರೆಗಿನ ಜಾಥಾಕ್ಕೆ ಪೊಲೀಸರಿಂದ ಅನುಮತಿ ನಿರಾಕರಿಸಲಾಗಿತ್ತು. ಈ ನಡುವೆ ಮಿಲಾಗ್ರಿಸ್ ಬಳಿಯಿಂದ ಜಾಥಾಕ್ಕೆ ಸಮಾವೇಶ ಗೊಂಡಿದ್ದ ವಿದ್ಯಾರ್ಥಿನಿಯ ರನ್ನು ಪೊಲೀಸ್ ಆಯುಕ್ತರೇ ಮನವೊಲಿಸಿ ಬಸ್ಸಿನಲ್ಲೇ ಪುರಭವನಕ್ಕೆ ಕಳುಹಿಸಿದ ಘಟನೆ ನಡೆಯಿತು.
ಅಂಬೇಡ್ಕರ್ ವೃತ್ತದಿಂದ ಜಾಥಾ ನಡೆಸಲಿದ್ದ ವಿದ್ಯಾರ್ಥಿನಿಯರು ಮಿಲಾಗ್ರಿಸ್ನಲ್ಲಿ ಸಮಾವೇಶಗೊಂಡು ಜಾಥಾಕ್ಕೆ ಮುಂದಾದಾಗ ಪೊಲೀಸರು ಜಾಥಾ ನಡೆಸದಂತೆ ತಡೆದರು. ಪೊಲೀಸರು ಹಾಗೂ ಕಾರ್ಯಕ್ರಮ ಸಂಘಟಕರ ಜತೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು.
ಕಾರ್ಯಕ್ರಮಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಜಾಥಾಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಈ ನಡುವೆ ಸಿಎಫ್ಐನ ವಿದ್ಯಾರ್ಥಿಗಳು ಅಂಬೇಡ್ಕರ್ ವೃತ್ತ , ವೆನ್ಲಾಕ್ ಸಮೀಪದ ಮಸೀದಿಯಿಂದ ಜಾಥಾಕ್ಕೆ ಮುಂದಾಗಿ ದ್ದರು. ಆಯೋಜಕರ್ನು ಕರೆಸಿ ಜಾಥಾಕ್ಕೆ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿ ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಪುರಭವನಕ್ಕೆ ಕಳುಹಿಸಲಾಯಿತು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
‘‘ಕಾರ್ಯಕ್ರಮವನ್ನು ರ್ಯಾಲಿ ಮೂಲಕ ಆರಂಭಿಸುವುದಾಗಿ ಅನುಮತಿ ಕೇಳಿದ್ದೆವು. ಜಾಥಾಕ್ಕೆ ಮೌಖಿಕ ಅನುಮತಿ ಪಡೆಯ ಲಾಗಿತ್ತು. ಆದರೆ ಎಬಿವಿಪಿಯ ಕುಮ್ಮಕ್ಕಿನ ಮೇರೆಗೆ ಜಾಥಾಕ್ಕೆ ಸಮಾವೇಶಗೊಂಡಿದ್ದ ವಿದ್ಯಾರ್ಥಿನಿಯರಿಗೆ ಅವಕಾಶ ನಿರಾಕರಿ ಸಲಾಗಿದೆ. ಒಟ್ಟಿನಲ್ಲಿ ಇಂದಿನ ಕಾರ್ಯಕ್ರಮದ ಬಗ್ಗೆ ಬಿಜೆಪಿ ಸರಕಾರ ಭಯಗೊಂಡಿರುವುದು ಇದರಿಂದ ಸ್ಪಷ್ಟವಾಗಿದೆ’’ ಎಂದು ಸಿಎಫ್ಐನ ವಿದ್ಯಾರ್ಥಿನಿ ನಾಯಕಿಯರು ಆರೋಪಿಸಿದ್ದಾರೆ.