ವಿದ್ಯಾರ್ಥಿ ಚಳುವಳಿಗಳು ನೈಜ ನಾಯಕತ್ವವನ್ನು ಬೆಳೆಸಬೇಕಿದೆ: ಪ್ರೊ. ಚಂದ್ರ ಪೂಜಾರಿ
ಎಸ್ಎಫ್ಐ ದ.ಕ.ಜಿಲ್ಲಾ ಮಟ್ಟದ ಅಧ್ಯಯನ ಶಿಬಿರ

ಮಂಗಳೂರು, ಜು.೧೬: ಭಾರತಕ್ಕೆ ನೈಜ ನಾಯಕತ್ವದ ಕೊರತೆ ಇದೆ. ವಿದ್ಯಾರ್ಥಿ ಚಳುವಳಿಗಳು ನೈಜ ನಾಯಕರನ್ನು ಬೆಳೆಸಬೇಕಾಗಿದೆ. ಅದಕ್ಕಾಗಿ ನಾಯಕತ್ವ ಗುಣಗಳನ್ನು ಯುವ ಸಮುದಾಯದ ನಡುವೆ ಬಿತ್ತರಿಸುವ ಅಗತ್ಯವೂ ಇದೆ ಎಂದು ಹಂಪಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಚಂದ್ರ ಪೂಜಾರಿ ಅಭಿಪ್ರಾಯಪಟ್ಟರು.
ಸಮಾನ ಗುಣಮಟ್ಟದ ಶಿಕ್ಷಣಕ್ಕಾಗಿ ಮತ್ತು ವಿದ್ಯಾರ್ಥಿಗಳ ಐಕ್ಯತೆಗಾಗಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫಐ) ದ.ಕ.ಜಿಲ್ಲಾ ಸಮಿತಿಯು ನಗರದ ಬೋಳಾರದ ಎಕೆಜಿ ಭವನದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕನಿಕರವು ನಾಯಕತ್ವದ ನಿಜವಾದ ಗುಣವಲ್ಲ ಮತ್ತೊಬ್ಬರ ಜಾಗದಲ್ಲಿ ನಿಂತು ಯೋಚಿಸುವುದೇ ನಾಯಕತ್ವದ ಬಹು ದೊಡ್ಡ ಗುಣವಾಗಿದೆ. ಸತ್ಯ ಯಾವುದು, ಬಹುತೇಕರ ಆಸಕ್ತಿಗೆ ಪೂರಕವಾದದ್ದು ಯಾವುದು, ಯಾರ ಮೇಲೆ ದಬ್ಬಾಳಿಕೆಗಳು ಆಗುತ್ತಿವೆ, ಯಾರ ಮೇಲೆ ಯಜಮಾನಿಕೆ, ಅನ್ಯಾಯ, ದೌರ್ಜನ್ಯ ಆಗುತ್ತಿದೆ ಎಂಬ ಅರಿವು ಬೇಕಾಗಿದೆ. ಅಲ್ಲದೆ ಅವುಗಳನ್ನು ಪ್ರಶ್ನಿಸುವ ಧೈರ್ಯ ಮತ್ತು ಪ್ರಾಮಾಣಿಕತೆ ನಾಯಕನಿಗಿರಬೇಕು. ನಾಯಕನಿಗೆ ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಇರಬೇಕು. ಆದರೆ ಇಂದಿನ ನಾಯಕರೆನ್ನುವ ರಾಜಕಾರಣಿಗಳಲ್ಲಿ ಈ ಯಾವ ಗುಣಗಳು ಇಲ್ಲ ಎಂದರು.
ಬೆಳಗಾವಿನಲ್ಲಿ ನೆರೆಯಿಂದ ಜನ ಕಷ್ಟಪಡುತ್ತಿರುವಾಗ ಪ್ರಧಾನಿ ಬೆಂಗಳೂರಿಗೆ ಆಗಮಿಸಿ ಉದ್ಘಾಟನೆ ಮತ್ತಿತರ ಕಾರ್ಯಕ್ರಮದಲ್ಲಿ ಭಾಗವಹಿಸಿ ದೆಹಲಿಗೆ ಮರಳುತ್ತಾರೆ. ಆದರೆ ಬೆಳಗಾವಿಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು ಮತ್ತು ಅಲ್ಲಿನ ಜನರ ನೋವುಗಳಿಗೆ ಸ್ಪಂದಿಸಬೇಕೆಂದು ಪ್ರಧಾನಿಗೆ ಅನಿಸಲೇ ಇಲ್ಲ ಎಂದ ಪ್ರೊ. ಚಂದ್ರ ಪೂಜಾರಿ ಭಾರತದ ಶಿಕ್ಷಣದಲ್ಲೂ ಸಮಾನತೆ ಇಲ್ಲ. ಕೇಂದ್ರೀಯ ವಿದ್ಯಾಲಯಗಳಲ್ಲಿರುವ ಗುಣಮಟ್ಟದ ಶಿಕ್ಷಣವು ಸರಕಾರಿ ಶಾಲೆಗಳಲ್ಲಿ ಸಿಗುತ್ತಿಲ್ಲ. ಇನ್ನುಳಿದಂತೆ ಖಾಸಗಿ ಕಾಲೇಜುಗಳ ಸ್ಥಿತಿ ಬೇರೆಯೇ ಇದೆ. ಹಾಗಾಗಿ ಇಲ್ಲಿನ ಬಹುತೇಕರು ಪಡೆಯುತ್ತಿರುವ ಶಿಕ್ಷಣವು ಕೆಲವೇ ಕೆಲವು ನಾಯಕರುಗಳಿಗೆ ದುಡಿಮೆಗಾರರನ್ನು ಸೃಷ್ಟಿ ಮಾಡುವ ಶಿಕ್ಷಣವಾಗಿದೆಯೇ ಹೊರತು ನಾಯಕರನ್ನು ಸೃಷ್ಟಿ ಮಾಡುವ ಶಿಕ್ಷಣಗಳಲ್ಲ ಎಂದರು.
ಎಸ್ಎಫ್ಐ ರಾಜ್ಯ ಮುಖಂಡ ಭೀಮನಗೌಡ, ಜಿಲ್ಲಾ ಮುಖಂಡರಾದ ಮಾಧುರಿ ಬೋಳಾರ, ವಿನುಷಾ ರಮಣ, ವಿನೀತ್ ದೇವಾಡಿಗ, ಎಸ್ಎಫ್ಐ ನ ಮಾಜಿ ಜಿಲ್ಲಾ ಕಾರ್ಯದರ್ಶಿ ಮನೋಜ್ ವಾಮಂಜೂರು ಉಪಸ್ಥಿತರಿದ್ದರು.











