‘ಅವಸರದಿಂದ ಮಾಡುವ ವಿವೇಚನಾರಹಿತ ಬಂಧನ’ಗಳ ಬಗ್ಗೆ ಮುಖ್ಯ ನ್ಯಾಯಾಧೀಶ ಕಳವಳ
![‘ಅವಸರದಿಂದ ಮಾಡುವ ವಿವೇಚನಾರಹಿತ ಬಂಧನ’ಗಳ ಬಗ್ಗೆ ಮುಖ್ಯ ನ್ಯಾಯಾಧೀಶ ಕಳವಳ ‘ಅವಸರದಿಂದ ಮಾಡುವ ವಿವೇಚನಾರಹಿತ ಬಂಧನ’ಗಳ ಬಗ್ಗೆ ಮುಖ್ಯ ನ್ಯಾಯಾಧೀಶ ಕಳವಳ](https://www.varthabharati.in/sites/default/files/images/articles/2022/07/16/342611-1657991934.png)
ಹೊಸದಿಲ್ಲಿ, ಜು. 16: ಅವಸರವಸರದಿಂದ ನಡೆಸಲಾಗುವ ವಿವೇಚನಾರಹಿತ ಬಂಧನಗಳು, ಜಾಮೀನು ಪಡೆಯುವಲ್ಲಿನ ಸಂಕಷ್ಟಗಳು ಮತ್ತು ವಿಚಾರಣಾಧೀನ ಕೈದಿಗಳ ಸುದೀರ್ಘ ಜೈಲುವಾಸ- ಈ ವಿಷಯಗಳ ಬಗ್ಗೆ ತುರ್ತಾಗಿ ಗಮನಹರಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ವಿ. ರಮಣ ಶನಿವಾರ ಹೇಳಿದ್ದಾರೆ.
ದಿಲ್ಲಿ ಮತ್ತು ಉತ್ತರಪ್ರದೇಶ ಪೊಲೀಸರಿಂದ ವಾಸ್ತವಾಂಶಗಳ ಪತ್ತೆಹಚ್ಚುವ ವೆಬ್ಸೈಟ್ ‘ಆಲ್ಟ್ ನ್ಯೂಸ್’ನ ಸಹ ಸಂಸ್ಥಾಪಕ ಮುಹಮ್ಮದ್ ಝಬೇರ್ ಬಂಧನ ಮತ್ತು ಮಹಾರಾಷ್ಟ್ರದಲ್ಲಿ ನಟಿ ಕೇತಕಿ ಚಿತಾಳೆ ಬಂಧನಗಳ ಹಿನ್ನೆಲೆಯಲ್ಲಿ ಭಾರತದ ಮುಖ್ಯ ನ್ಯಾಯಾಧೀಶರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಜೈಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ, ಕೇಂದ್ರ ಕಾನೂನು ಸಚಿವ ಕಿರಣ್ ರಿಜೀಜು ಮತ್ತು ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶರ ಸಮ್ಮುಖದಲ್ಲಿ ಮಾತನಾಡಿದ ನ್ಯಾ. ರಮಣ, ಯಾವುದೇ ನಿರ್ದಿಷ್ಟ ಪ್ರಕರಣಗಳನ್ನು ಉಲ್ಲೇಖಿಸಲಿಲ್ಲ. ಆದರೆ, ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಪ್ರಕ್ರಿಯೆಯೇ ‘ಶಿಕ್ಷೆಯಾಗಿದೆ’ ಎಂದು ಹೇಳಿದರು.
‘‘ಸವಾಲುಗಳು ಅಗಾಧವಾಗಿವೆ. ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಪ್ರಕ್ರಿಯೆಯೇ ಶಿಕ್ಷೆಯಾಗಿದೆ. ಇಲ್ಲಿ ಅವಸರವಸರವಾಗಿ ವಿವೇಚನೆಯಿಲ್ಲದೆ ಬಂಧನಗಳನ್ನು ನಡೆಸಲಾಗುತ್ತದೆ ಮತ್ತು ಜಾಮೀನು ಸಿಗದಂತೆ ನೋಡಿಕೊಳ್ಳಲಾಗುತ್ತದೆ. ವಿಚಾರಣಾಧೀನ ಕೈದಿಗಳ ಸುದೀರ್ಘ ಜೈಲುವಾಸಕ್ಕೆ ಕಾರಣವಾಗುವ ಪ್ರಕ್ರಿಯೆಯ ಸುಧಾರಣೆಗೆ ತುರ್ತು ಗಮನ ನೀಡುವುದು ಅಗತ್ಯವಾಗಿದೆ’’ ಎಂದು ನ್ಯಾ. ರಮಣ ಹೇಳಿದರು.
‘‘ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ನಮಗೆ ಸಮಗ್ರ ಕ್ರಿಯಾ ಯೋಜನೆಯೊಂದು ಬೇಕಾಗಿದೆ. ಈ ನಿಟ್ಟಿನಲ್ಲಿ ಪೊಲೀಸರಿಗೆ ತರಬೇತಿ ನೀಡುವುದು ಮತ್ತು ಅವರಲ್ಲಿ ಸಂವೇದನೆ ಉಂಟು ಮಾಡುವುದು ಮತ್ತು ಜೈಲು ವ್ಯವಸ್ಥೆಯ ಆಧುನೀಕರಣವು ಈ ನಿಟ್ಟಿನಲ್ಲಿ ಒಂದು ಪರಿಹಾರವಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.