ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಟೆಕ್ಸ್ಟೈಲ್ ಪಾರ್ಕ್: ಸಿಎಂ ಬೊಮ್ಮಾಯಿ
ಹಾವೇರಿ, ಜು.16: ಗಾರ್ಮೆಂಟ್ ಇಂಡಸ್ಟ್ರಿಯಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಟೆಕ್ಸ್ಟೈಲ್ ಪಾರ್ಕ್ಗಳನ್ನು ನಿರ್ಮಾಣ ಮಾಡುವ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶನಿವಾರ ಶಿಗ್ಗಾಂವಿ ತಾಲೂಕಿನ ಖುರ್ಸಾಪುರ ಗ್ರಾಮದಲ್ಲಿ ‘ಶಿಗ್ಗಾಂವಿ ಜವಳಿ ಪಾರ್ಕ್’ ಹಾಗೂ ‘ಮೆ. ಟೆಕ್ಸ್ಪೋರ್ಟ್ ಇಂಡಸ್ಟ್ರೀಸ್ ಪ್ರೈ.ಲಿ. ಆಂಕರ್ ಸಿದ್ಧ ಉಡುಪು ಘಟಕ’ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಹೆಣ್ಣುಮಕ್ಕಳ ಏಳ್ಗೆಗೆ ಜವಳಿ ಕೈಗಾರಿಕೆ ಹೆಚ್ಚು ಪೂರಕವಾಗಿದೆ. ಕೇವಲ ಬೆಂಗಳೂರಿನಲ್ಲೇ 10 ಲಕ್ಷಕ್ಕೂ ಹೆಚ್ಚು ಮಹಿಳೆಯರು ಗಾರ್ಮೆಂಟ್ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಟೆಕ್ಸ್ಟೈಲ್ ಪಾರ್ಕ್ನಿಂದ ಕನಿಷ್ಠ ಎಂದರೂ 10 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಕಲ್ಪಿಸಲಾಗುತ್ತದೆ. ಎಲ್ಲರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಈ ಯೋಜನೆ ಪೂರಕವಾಗಿದೆ. ರೈತರಿಗೂ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂದರು.
ಕೈಮಗ್ಗ, ಜವಳಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಮಾತನಾಡಿ, ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕು ಕೈಗಾರಿಕಾ ಬೆಳವಣಿಗೆಗೆ ವಿಫುಲ ಅವಕಾಶ ಹಾಗೂ ಸಾಮಥ್ರ್ಯ ಹೊಂದಿರುವ ಪ್ರದೇಶವಾಗಿದೆ. ಈ ಭಾಗದಲ್ಲಿ ಹೇರಳವಾಗಿ ಹತ್ತಿ ಉತ್ಪಾದನೆಯಾಗುತ್ತಿದ್ದು, ಜಿನ್ನಿಂಗ್, ನೂಲಿನ ಗಿರಣಿ(ಸ್ಪಿನ್ನಿಂಗ್), ಸಂಸ್ಕರಣಾ, ಪ್ರಿಂಟಿಂಗ್ ಮತ್ತು ಸಿದ್ಧ ಉಡುಪು ಘಟಕಗಳನ್ನು ಸ್ಥಾಪಿಸಬಹುದಾಗಿರುತ್ತದೆ ಎಂದರು.
ರಾಜ್ಯದಲ್ಲೇ ಪ್ರಥಮ ಬಾರಿಗೆ ಆಂಕರ್ ಮಾದರಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆಯಾಗಲಿದ್ದು, ಇದು ಸಂಪೂರ್ಣವಾಗಿ ರಾಜ್ಯ ಸರಕಾರದ ಒಡೆತನದಲ್ಲಿರಲಿದೆ. ಇಲ್ಲಿ ಸಿದ್ಧ ಉಡುಪು ಘಟಕಗಳು ಹಾಗೂ ಜವಳಿ ಘಟಕಗಳ ಸ್ಥಾಪನೆಗೆ ಪೂರಕ ಮೂಲಸೌಲಭ್ಯಗಳನ್ನು ಎರಡು ಹಂತಗಳಲ್ಲಿ ಕಲ್ಪಿಸಲಾಗುವುದು. ಮೊದಲ ಹಂತದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಅವಶ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಆಂಕರ್ ಪ್ರವರ್ತಕ ಮೆ. ಟೆಕ್ಸ್ಪೋರ್ಟ್ ಇಂಡಸ್ಟ್ರೀಸ್ ಪ್ರೈ.ಲಿ. 45 ಕೋಟಿ ರೂ. ವೆಚ್ಚದಲ್ಲಿ ಸಿದ್ಧ ಉಡುಪು ಘಟಕವನ್ನು ಸ್ಥಾಪಿಸಿ ಅಂದಾಜು 3,000 ಉದ್ಯೋಗಗಳನ್ನು ನೀಡಲಿದೆ. ಈ ಪಾರ್ಕ್ ಪೂರ್ಣಗೊಳ್ಳುವ ವೇಳೆಗೆ 200 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, 5,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಲಭ್ಯವಾಗುತ್ತದೆ ಎಂದು ಭರವಸೆ ನೀಡಿದರು.
ಬಡ್ಡಿ ಸಹಾಯಧನ ಯೋಜನೆಯನ್ನು ಬೃಹತ್ ಕೈಗಾರಿಕೆಗಳ ಜೊತೆಗೆ ಮದ್ಯಮ ಕೈಗಾರಿಕೆಗಳಿಗೂ ವಿಸ್ತರಿಸಲಾಗವುದು. ರಿಯಾಯಿತಿ ಹಾಗೂ ಪ್ರೋತ್ಸಾಹಧನಗಳ ಮೇಲಿನ ಮಿತಿಯನ್ನು ಶೇ.100 ರವರೆಗೆ ವಿಸ್ತರಿಸಲಾಗುವುದು. ಜವಳಿ ಪಾರ್ಕ್ ಮೂಲಭೂತ ಸೌಕರ್ಯಗಳಿಗಾಗಿ ಪ್ರತ್ಯೇಕ ಉದ್ಯಮಿಗೆ ಎಸ್.ಪಿ.ವಿ. ಮಾದರಿಯಲ್ಲಿರುವ ಯೋಜನಾ ಮೊತ್ತದ ಮೇಲೆ ಶೇ.40 ಅಥವಾ 40 ಕೋಟಿ ರೂ. ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಒದಗಿಸಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶ ಭಾಗದಲ್ಲಿ ಸ್ಥಾಪಿತವಾಗುವ ಸಿದ್ಧ ಉಡುಪು ಘಟಕಗಳಲ್ಲಿನ ಪ್ರತಿ ಕಾರ್ಮಿಕರಿಗೆ 3 ಸಾವಿರ ರೂ.ಗಳವರೆಗೆ ವೇತನ ಸಹಾಯಧನವನ್ನು ನೀಡಲಾಗುವುದು. ಕಲ್ಯಾಣ ಕರ್ನಾಟಕ ಅಲ್ಲದ ಪ್ರದೇಶಗಳಲ್ಲಿ ಸ್ಥಾಪಿತವಾಗುವ ಸಿದ್ಧ ಉಡುಪು ಘಟಕಗಳಿಗೆ 2 ಸಾವಿರ ರೂ.ಗಳವರೆಗೆ ವೇತನ ಸಹಾಯಧನವನ್ನು ಒದಗಿಸಲಾಗುವದು. ಇವುಗಳನ್ನು ಈಗಾಗಲೇ ಒದಗಿಸಲಾಗುತ್ತಿರುವ ಸಾಲಾಧಾರಿತ ಬಂಡವಾಳ ಸಹಾಯಧನ, ಜವಳಿ ವಲಯದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಪ್ರೋತ್ಸಾಹ, ಮುದ್ರಾಂಕ ಶುಲ್ಕ ವಿನಾಯಿತಿ, ಇಎಸ್ಐ, ಇಪಿಎಫ್ ಸಹಾಯಧನ ಹಾಗೂ ವಿದ್ಯುಚ್ಛಕ್ತಿ ಮರುಪಾವತಿ ಸಹಾಯಧನಗಳೊಂದಿಗೆ ನೀಡಲಾಗುವುದು ಎಂದು ವಿವರಿಸಿದರು.
ಸಣ್ಣ ಮತ್ತು ಅತೀ ಸಣ್ಣ (ಎಸ್ಎಂಇ) ಘಟಕಗಳನ್ನು ಪ್ರಾರಂಭಿಸಲು ಉತ್ತೇಜಿಸುವ ಸಲುವಾಗಿ ನೇಕಾರರ ಪ್ಯಾಕೇಜ್ ಯೋಜನೆ, ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಗಳಡಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ ಮತ್ತು ಅತೀ ಸಣ್ಣ ಘಟಕಗಳ ಸ್ಥಾಪನೆಗೆ ಸರಕಾರದಿಂದ ಗರಿಷ್ಠ 2 ಕೋಟಿ ರೂ.ಗಳ ಸಹಾಯಧನ ನೀಡುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಚಿವ ಶಿವರಾಮ ಹೆಬ್ಬಾರ, ಬಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮತ್ತಿತರರು ಉಪಸ್ಥಿತರಿದ್ದರು.







