"ಸರಕಾರಕ್ಕೆ ಅನನುಕೂಲವಾಗಿರುವ ವ್ಯಕ್ತಿಗಳನ್ನು ಬೇಟೆಯಾಡುವುದನ್ನು ನಿಲ್ಲಿಸಬೇಕು"
ಅಟಾರ್ನಿ ಜನರಲ್ ಗೆ 72 ಮಾಜಿ ಸರಕಾರಿ ಅಧಿಕಾರಿಗಳ ಪತ್ರ

ಹೊಸದಿಲ್ಲಿ,ಜು.17: ಸಿನಿಕತನದ ಮತ್ತು ಅತ್ಯುತ್ಸಾಹಿ ಪೊಲೀಸ್ ಪಡೆಯು ವಾಕ್ ಸ್ವಾತಂತ್ರದ ತಮ್ಮ ಹಕ್ಕುಗಳನ್ನು ಚಲಾಯಿಸುವ ವ್ಯಕ್ತಿಗಳನ್ನು ಬೇಟೆಯಾಡುವುದನ್ನು ನಿಲ್ಲಿಸಲು ಸರಕಾರಕ್ಕೆ ಸಲಹೆ ನೀಡುವಂತೆ 72 ಮಾಜಿ ನಾಗರಿಕ ಸೇವೆಗಳ ಅಧಿಕಾರಿಗಳ ಗುಂಪೊಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರಿಗೆ ಸೂಚಿಸಿದೆ.
ದೇಶದ ಉನ್ನತ ಕಾನೂನು ಅಧಿಕಾರಿಗೆ ಬರೆದಿರುವ ಪತ್ರದಲ್ಲಿ ಈ ಮಾಜಿ ಅಧಿಕಾರಿಗಳು ಆಲ್ಟ್ ನ್ಯೂಸ್ ನ ಸಹಸ್ಥಾಪಕ ಮುಹಮ್ಮದ್ ಝುಬೈರ್ ನಿರಂತರ ಬಂಧನ ಮತ್ತು ಅವರಿಗೆ ವೈಯಕ್ತಿಕ ನಾಗರಿಕ ಸ್ವಾತಂತ್ರವನ್ನು ನಿರಾಕರಿಸಿರುವುದನ್ನು ಎತ್ತಿ ತೋರಿಸಿದ್ದಾರೆ.
‘ಸರಕಾರಕ್ಕೆ ಅನನುಕೂಲಕರ ಎಂದು ಗುರುತಿಸಲ್ಪಟ್ಟ ವ್ಯಕ್ತಿಗಳ ಮೂಲಭೂತ ಸ್ವಾತಂತ್ರಗಳನ್ನು ಉದ್ದೇಶಪೂರ್ವಕವಾಗಿ ಕಸಿದುಕೊಳ್ಳಲು ದಿನದಿಂದ ದಿನಕ್ಕೆ ಪ್ರಕರಣಗಳನ್ನು ಸಿದ್ಧಪಡಿಸುವಲ್ಲಿ ಕಾನೂನು ಜಾರಿ ಸಂಸ್ಥೆಗಳು ಮಾತ್ರವಲ್ಲ,ನಿಮ್ಮ ಅಧೀನದಲ್ಲಿರುವ ಕಾನೂನು ಅಧಿಕಾರಿಗಳೂ ಸಿನಿಕತನ ಮತ್ತು ಅತ್ಯುತ್ಸಾಹದಿಂದ ತೊಡಗಿಕೊಂಡಿರುವುದನ್ನು ನಾವು ಹತಾಶೆಯಿಂದ ನೋಡುತ್ತಿದ್ದೇವೆ’ ಎಂದು ಪತ್ರದಲ್ಲಿ ಹೇಳಲಾಗಿದೆ.
‘ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಸಾಂವಿಧಾನಿಕ ನಿಯಮದ ಸಮರ್ಥಕರಾಗಿ ನಮಗೆ ನೂಪುರ್ ಶರ್ಮಾ ಮತ್ತು ಮುಹಮ್ಮದ್ ಝುಬೈರ್ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಯಲ್ಲಿ ಸ್ಪಷ್ಟವಾಗಿ ಕಾಣುತ್ತಿರುವ ತಾರತಮ್ಯವು ತೀವ್ರ ಆತಂಕವನ್ನುಂಟು ಮಾಡಿದೆ. ಕಾನೂನಿನ ಇಂತಹ ಆಯ್ದ ಅನ್ವಯವು ನ್ಯಾಯದ ಉಲ್ಲಂಘನೆಯಾಗುತ್ತದೆ ’ ಎಂದು ಮಾಜಿ ಅಧಿಕಾರಿಗಳು ಪತ್ರದಲ್ಲಿ ಬರೆದಿದ್ದಾರೆ. ಕಾನೂನಿನ ಸಮರ್ಥನೆಯಿಲ್ಲದ ಆರೋಪಗಳಲ್ಲಿ ಝುಬೈರ್ ಅವರ ನಿರಂತರ ಬಂಧನ ಮತ್ತು ಅವರ ವೈಯಕ್ತಿಕ ನಾಗರಿಕ ಸ್ವಾತಂತ್ರಗಳನ್ನು ಕಿತ್ತುಕೊಂಡಿರುವುದನ್ನು ಅವರು ನಿರ್ದಿಷ್ಟವಾಗಿ ಬೆಟ್ಟು ಮಾಡಿದ್ದಾರೆ.
2018ರಲ್ಲಿ ಝುಬೈರ್ ಮಾಡಿದ್ದ ಆಕ್ಷೇಪಾರ್ಹ ಎನ್ನಲಾಗಿರುವ ಟ್ವೀಟ್ಗೆ ಸಂಬಂಧಿಸಿದ ಪ್ರಕರಣದಲ್ಲಿ ಶುಕ್ರವಾರ ಅವರಿಗೆ ಜಾಮೀನು ಮಂಜೂರು ಮಾಡಿರುವ ದಿಲ್ಲಿ ನ್ಯಾಯಾಲಯವು,ಭಿನ್ನಾಭಿಪ್ರಾಯದ ಧ್ವನಿಯು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅಗತ್ಯವಾಗಿದೆ ಎಂದು ಹೇಳಿದೆ. ಆದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿರುವ ಆರೋಪದಲ್ಲಿ ಉತ್ತರ ಪ್ರದೇಶ ಪೊಲೀಸರು ಝುಬೈರ್ ವಿರುದ್ಧ ಎಫ್ಐಆರ್ಗಳನ್ನು ದಾಖಲಿಸಿರುವುದರಿಂದ ಅವರು ನ್ಯಾಯಾಂಗ ಬಂಧನದಲ್ಲಿ ಮುಂದುವರಿಯಲಿದ್ದಾರೆ. ಝುಬೈರ್ ಜು.2ರಿಂದಲೂ ಜೈಲಿನಲ್ಲಿದ್ದಾರೆ.
‘ತಮ್ಮ ವಾಕ್ಸ್ವಾತಂತ್ರದ ಹಕ್ಕುಗಳನ್ನು ಬಳಸುವ ನಾಗರಿಕರನ್ನು ಬೇಟೆಯಾಡುವುದನ್ನು ನಿಲ್ಲಿಸಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶ ನೀಡುವಂತೆ, ಭವಿಷ್ಯದಲ್ಲಿ ಯಾವುದೇ ಆಧಾರವಿಲ್ಲದ ಪ್ರಕರಣಗಳು ದಾಖಲಾಗದಂತೆ ನೋಡಿಕೊಳ್ಳುವಂತೆ ಸರಕಾರಕ್ಕೆ ಸಲಹೆ ನೀಡುವಂತೆ ನಾವು ನಿಮ್ಮನ್ನು ಆಗ್ರಹಿಸುತ್ತಿದ್ದೇವೆ. ಅಲ್ಲದೆ ಜಾಮೀನು ಅರ್ಜಿಗಳನ್ನು ವಾಡಿಕೆಯಂತೆ ವಿರೋಧಿಸದಂತೆ ಸರಕಾರಿ ವಕೀಲರಿಗೆ ನಿರ್ದೇಶವನ್ನು ಹೊರಡಿಸುವಂತೆಯೂ ಕೋರುತ್ತಿದ್ದೇವೆ ’ಎಂದು ಪತ್ರದಲ್ಲಿ ಹೇಳಲಾಗಿದೆ.
ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ,ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ ಮತ್ತು ಮಾಜಿ ಆರೋಗ್ಯ ಕಾರ್ಯದರ್ಶಿ ಕೆ.ಸುಜಾತಾ ರಾವ್ ಅವರು ಪತ್ರಕ್ಕೆ ಸಹಿಮಾಡಿರುವ 72 ಮಾಜಿ ಅಧಿಕಾರಿಗಳಲ್ಲಿ ಸೇರಿದ್ದಾರೆ. ‘ಯಾವುದೇ ಸಾಕ್ಷಾಧಾರಗಳಿಲ್ಲದೆ ಜನರನ್ನು ಬಂಧಿಸಿ ಜೈಲಿಗೆ ತಳ್ಳುವುದು ಭಾರತವನ್ನು ‘ಪೊಲೀಸ್ ರಾಜ್ ’ನ್ನಾಗಿ ಮಾಡುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಇತ್ತೀಚಿನ ತೀರ್ಪಿನಲ್ಲಿ ಹೇಳಿದೆ. ಎಲ್ಲ ಪ್ರಕರಣಗಳಲ್ಲಿ,ಜಾಮೀನು ವಿರೋಧಿಸಲೂ ಸಹ,ಸಾಲಿಸಿಟರ್ ಜನರಲ್ ಅವರೇ ಸ್ವತಃ ಏಕೆ ನ್ಯಾಯಾಲಯದಲ್ಲಿ ಹಾಜರಾಗುತ್ತಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಸೋತಿದ್ದೇವೆ ’ಎಂದೂ ಈ ಮಾಜಿ ಅಧಿಕಾರಿಗಳು ಪತ್ರದಲ್ಲಿ ಹೇಳಿದ್ದಾರೆ.