ಮಣಿಪಾಲ: ರಸ್ತೆ ನಿಯಮ ಉಲ್ಲಂಘಿಸಿದವರಿಗೆ ಗುಲಾಬಿ ನೀಡಿ ಅರಿವು

ಮಣಿಪಾಲ, ಜು.೧೭: ಮಣಿಪಾಲ ಟೌನ್ ರೋಟರಿ, ಉಡುಪಿ ಪಾಲಿಟೆಕ್ನಿಕ್ ಇಂಟರಾಕ್ಟ್ ಕ್ಲಬ್, ಮಣಿಪಾಲ ಹಿಲ್ಸ್ ರೋಟರಿ ಮತ್ತು ಮಣಿಪಾಲ್ ಅಟೋ ಕ್ಲಬ್ ವತಿಯಿಂದ ಮಣಿಪಾಲ ಪೊಲೀಸ್ ಠಾಣೆಯ ಸಹಕಾರದೊಂದಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ರೆಡ್ ರೋಸ್ ಡೇಯನ್ನು ಶನಿವಾರ ಆಚರಿಸಲಾಯಿತು.
ಅಧ್ಯಕ್ಷ ನಿತ್ಯಾನಂದ ನಾಯಕ್ ಅವರು ಮಾತನಾಡಿ ರಸ್ತೆ ಅಪಘಾತಗಳು ಜಗತ್ತಿನಲ್ಲೇ ಅತ್ಯಂತ ಹೆಚ್ಚು ಪ್ರಾಣಹಾನಿಯನ್ನು ಉಂಟು ಮಾಡುತ್ತಿವೆ. ಇದಕ್ಕೆ ಕಾರಣ ರಸ್ತೆ ನಿಯಮಗಳನ್ನು ಪಾಲಿಸದೇ ವಾಹನಗಳನ್ನು ಚಲಾಯಿಸುವುದು. ಅತಿ ವೇಗ, ಸೀಟ್ ಬೆಲ್ಟ್ ಮತ್ತು ಶಿರಸ್ತ್ರಾಣ ಧರಿಸದಿರುವುದು ಆಗಿರುತ್ತದೆ. ಇದರ ಕುರಿತು ಜನರಿಗೆ ಪ್ರಜ್ಞೆಯನ್ನು ಮೂಡಿಸಲು ರಸ್ತೆಗಳಲ್ಲಿ ತಪ್ಪೆಸಗಿದವರನ್ನು ನಿಲ್ಲಿಸಿ ರೆಡ್ ರೋಸ್ ನೀಡಿ ಅವರ ತಪ್ಪನ್ನು ಇನ್ನು ಮುಂದಕ್ಕೆ ಮಾಡದಿರುವಂತೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಮಣಿಪಾಲದ ಹಲವು ಕಡೆ ರಸ್ತೆಗಳಲ್ಲಿ ಸ್ವಯಂಸೇವಕರು ಕಾನೂನು ಬಾಹಿರವಾಗಿ ವಾಹನ ಚಲಾಯಿಸುವವರನ್ನು ನಿಲ್ಲಿಸಿ ಹೂವು ನೀಡಿ ಎಚ್ಚರಿಕೆ ಯನ್ನು ನೀಡಲಾಯಿತು. ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್ ನಿರ್ದೇಶನ ಮತ್ತು ಠಾಣೆಯ ಸಿಬ್ಬಂದಿ ಸಹಕಾರ ನೀಡಿದರು.
ಮಣಿಪಾಲ ಆಟೋ ಕ್ಲಬ್ ಸ್ಥಾಪಕ ಅಧ್ಯಕ್ಷ ನಿಶಾಂತ್ ಭಟ್, ಸವಿತಾ ಭಟ್, ಸುಂದರ ಶೆಟ್ಟಿ, ದಯಾನಂದ ನಾಯಕ್, ಉಮೇಶ್ ರಾವ್, ಗೋಪಾಲ್ ಗಾಣಿಗ, ಕೆಂಪರಾಜ್, ಡಾ.ಶ್ರೀಧರ್, ಡಾ.ದೀಪಕ್ ರಾಮ್ ಬಾಯರಿ, ರೋಟರಾಕ್ ಅಧ್ಯಕ್ಷ ವಿಶ್ವೇಶ್ ರಾವ್, ನಿಂಗರಾಜ್, ಅಶ್ವಿನಿ, ಕಿರಣ್ ಮೊದಲಾದವರು ಉಪಸ್ಥಿತರಿದ್ದರು.







