ಶಿರ್ವ: ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಅಮೃತಾಂಜಲಿ ಕಾರ್ಯಕ್ರಮಕ್ಕೆ ಚಾಲನೆ
ಸ್ವಾತಂತ್ರ್ಯ ವೀರರ ಆದರ್ಶ ಅನುಕರಣೀಯ: ಸಚ್ಚಿದಾನಂದ ಆಚಾರ್

ಶಿರ್ವ, ಜು.18: ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗಮಾಡಿ, ಪ್ರಾಣವನ್ನೂ ಲೆಕ್ಕಿಸದೆ ನಿಸ್ವಾರ್ಥ ಹೋರಾಟ ಮಾಡಿದ ಸ್ವಾತಂತ್ರ್ಯ ವೀರರ ಆದರ್ಶ ಅನುಕರಣೀಯ ಎಂದು ನಿವೃತ್ತ ಶಿಕ್ಷಕ ಸಚ್ಚಿದಾನಂದ ಆಚಾರ್ ಶಿರ್ವ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಾಪು ತಾಲೂಕು ಘಟಕದ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದಡಿಯಲ್ಲಿ ರವಿವಾರ ಶಿರ್ವ ಸಾರ್ವಜನಿಕ ಶ್ರೀಗಣೇಶೋತ್ಸವ ವೇದಿಕೆಯಲ್ಲಿ ಆಯೋಜಿಸಲಾದ ಅಮೃತಾಂಜಲಿ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಿರ್ವದಲ್ಲಿ ನೆಲೆಸಿದ್ದ ಸ್ವಾತಂತ್ರ ಹೋರಾಟಗಾರ ಬಿ.ಶಂಭು ಶೆಟ್ಟಿ ಶಿರ್ವರವರ ಅತ್ಯಂತ ಸಂಕಷ್ಟದ ದಿನಗಳನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿದರು.
ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಆರ್.ಪಾಟ್ಕರ್ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು, ಅವರ ಜೀವನದ ಘಟನೆಗಳನ್ನು ತಿಳಿಸುವುದು ಅತೀ ಅಗತ್ಯವಾಗಿದೆ ಎಂದು ತಿಳಿಸಿದರು.
ಶಿರ್ವ ಕಂದಾಯ ನಿರೀಕ್ಷಕ ವಿಜ್, ಕಸಾಪ ಉಡುಪಿ ಜಿಲ್ಲಾ ಕನ್ನಡ ಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಶಂಭು ಶೆಟ್ಟಿರವರ ಮೊಮ್ಮಗಳು ರಂಜಿತಾ ಪ್ರಶಾಂತ್ ಶೆಟ್ಟಿ ಮಾತನಾಡಿದರು. ಶಂಭು ಶೆಟ್ಟಿರವರ ಪುತ್ರಿ ಆಶಾ ರತ್ನಾಕರ್ ಶೆಟ್ಟಿ, ಮರಿಮಕ್ಕಳಾದ ಮಿಶಿಕಾ ಪಿ. ಶೆಟ್ಟಿ, ಸಮಿಕಾ ಪಿ.ಶೆಟ್ಟಿ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿ ನೀಲಾನಂದ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸದಸ್ಯರಾದ ಅನಂತ ಮೂಡಿತ್ತಾಯ ನಿರೂಪಿಸಿದರು. ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.







