ಜಮ್ಮು: ಗ್ರೆನೇಡ್ ಆಕಸ್ಮಿಕವಾಗಿ ಸ್ಪೋಟಗೊಂಡು ಸೇನಾ ಕ್ಯಾಪ್ಟನ್, ಜೆಸಿಒ ಸಾವು
ಜಮ್ಮು, ಜು. ೧೮: ಜಮ್ಮು ಹಾಗೂ ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಗ್ರೆನೆಡ್ ಆಕಸ್ಮಿಕವಾಗಿ ಸ್ಫೋಟಗೊಂಡ ಪರಿಣಾಮ ಸೇನಾ ಕ್ಯಾಪ್ಟನ್ ಹಾಗೂ ಜೆಸಿಒ ಮೃತಪಟ್ಟಿದ್ದಾರೆ.
ಮೆಂಧರ್ ವಲಯದಲ್ಲಿ ರವಿವಾರ ತಡ ರಾತ್ರಿ ಭಾರತೀಯ ಸೇನಾ ಪಡೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ ಎಂದು ಜಮ್ಮುವಿನ ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ದೇವೇಂದರ್ ಆನಂದ್ ಅವರು ಹೇಳಿದ್ದಾರೆ.
ಸ್ಫೋಟದಿಂದ ಕ್ಯಾಪ್ಟನ್ ಆನಂದ್ ಹಾಗೂ ಜೆಸಿಒ ನಾಯಬ್ ಸುಬೇದಾರ್ ಭಗವಾನ್ ಸಿಂಗ್ ಅವರು ಗಾಯಗೊಂಡಿದ್ದರು. ಕೂಡಲೇ ಅವರನ್ನು ಹೆಲಿಕಾಪ್ಟರ್ ಮೂಲಕ ತೆರವುಗೊಳಿಸಿ ಉದಮ್ಪುರದ ಕಮಾಂಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕ್ಯಾಪ್ಟನ್ ಆನಂದ್ ಬಿಹಾರದ ಭಾಗಲ್ಪುರ ಜಿಲ್ಲೆಯ ಚಂಪಾ ನಗರ ಪ್ರದೇಶದವರು. ನಾಯಬ್ ಸುಬೇದಾರ್ ಭಗ್ವಾನ್ ಸಿಂಗ್ ಉತ್ತರಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಪೋಖರ್ ಬಿಟ್ಟಾ ಗ್ರಾಮದವರು.
Next Story