ಮಂಗಳೂರು: ಅಗ್ನಿಶಾಮಕ ಠಾಣೆಯ ವಾಹನ ನಿಲುಗಡೆಯ ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು

ಮಂಗಳೂರು : ನಗರ ಹೊರವಲಯದ ಬಾರೆಬೈಲ್ನಲ್ಲಿರುವ ಅಗ್ನಿಶಾಮಕ ಠಾಣೆಯ ವಾಹನ ನಿಲುಗಡೆಯ ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಮಂಗಳವಾರ ನಡೆದಿರುವುದಾಗಿ ವರದಿಯಾಗಿದೆ.
ಬಂಟ್ವಾಳ ತಾಲೂಕಿನ ಅಮ್ಮುಂಜೆಯ ದೀಪಕ್ (29) ಮೃತಪಟ್ಟ ಕಾರ್ಮಿಕರು.
ಬಾರೆಬೈಲ್ನಲ್ಲಿರುವ ಅಗ್ನಿಶಾಮಕ ಠಾಣೆಯ ವಾಹನ ನಿಲುಗಡೆಯ ಕಟ್ಟಡಕ್ಕೆ ಶೀಟ್ ಅಳವಡಿಸುವ ಗುತ್ತಿಗೆಯನ್ನು ನಿರ್ಮಿತಿ ಕೇಂದ್ರದವರು ಪ್ರವೀಣ್ ಎಂಬವರಿಗೆ ವಹಿಸಿತ್ತು. ಅದರಂತೆ ಗುತ್ತಿಗೆದಾರ ಪ್ರವೀಣ್ ರೊಂದಿಗೆ 8 ವರ್ಷದಿಂದ ಫ್ಯಾಬ್ರಿಕೇಶನ್ ಕೆಲಸ ಮಾಡುತ್ತಿದ್ದ ದೀಪಕ್ ಕಳೆದೊಂದು ವಾರದಿಂದ ಈ ಕಟ್ಟಡಕ್ಕೆ ಶೀಟ್ ಅಳವಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.
ಮಂಗಳವಾರ ಬೆಳಗ್ಗೆ ಸುಮಾರು 9.50ಕ್ಕೆ ದೀಪಕ್ ಕಟ್ಟಡದ ಮೇಲ್ಛಾವಣಿ ಅಳವಡಿಸುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಸುಮಾರು 30 ಅಡಿ ಆಳಕ್ಕೆ ಬಿದ್ದಿದ್ದು, ತಕ್ಷಣ ಅವರನ್ನು ಇತರ ಕೆಲಸಗಾರರು ಮತ್ತು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದೀಪಕ್ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕದ್ರಿ ಪೊಲೀಸರು ತಿಳಿಸಿದ್ದಾರೆ.
ದೀಪಕ್ ಅವರಿಗೆ ಸೇಫ್ಟಿ ಬೆಲ್ಟ್, ಸೇಫ್ಟಿ ನೆಟ್, ಹೆಲ್ಮೆಟ್ ನೀಡಲಿಲ್ಲ. ಸುರಕ್ಷಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಹಾಗಾಗಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ನವೀತ್ ಮತ್ತು ಗುತ್ತಿಗೆದಾರ ಪ್ರವೀಣ್ ಹಾಗೂ ಕಾಮಗಾರಿಯ ಉಸ್ತುವಾರಿ ವಹಿಸಿದದ ನಿರ್ಮಿತಿ ಕೇಂದ್ರದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೀಪಕ್ರ ಭಾವ ನಾಗೇಶ್ ಕದ್ರಿ ಠಾಣೆಗೆ ದೂರು ನೀಡಿದ್ದಾರೆ.