ಹಣಕ್ಕಾಗಿ ವರ್ಗಾವಣೆ ವಿವಾದದಲ್ಲಿ ಉತ್ತರ ಪ್ರದೇಶ ಸಚಿವ ಜಿತಿನ್ ಪ್ರಸಾದ
ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಲೋಕೋಪಯೋಗಿ ಇಲಾಖೆಯ ಐವರು ಅಧಿಕಾರಿಗಳು ಸಸ್ಪೆಂಡ್
![ಹಣಕ್ಕಾಗಿ ವರ್ಗಾವಣೆ ವಿವಾದದಲ್ಲಿ ಉತ್ತರ ಪ್ರದೇಶ ಸಚಿವ ಜಿತಿನ್ ಪ್ರಸಾದ ಹಣಕ್ಕಾಗಿ ವರ್ಗಾವಣೆ ವಿವಾದದಲ್ಲಿ ಉತ್ತರ ಪ್ರದೇಶ ಸಚಿವ ಜಿತಿನ್ ಪ್ರಸಾದ](https://www.varthabharati.in/sites/default/files/images/articles/2022/07/20/343017-1658298608.jpg)
ಜಿತಿನ್ ಪ್ರಸಾದ (PTI)
ಹೊಸದಿಲ್ಲಿ: ಬಿಜೆಪಿಗೆ ಸೇರಿ ನಂತರ ಉತ್ತರ ಪ್ರದೇಶದ ಲೋಕೋಪಯೋಗಿ ಸಚಿವರೂ ಆದ ಮಾಜಿ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ ಈಗ ತಮ್ಮ ಸಚಿವಾಲಯದಲ್ಲಿ ಅಕ್ರಮ ವ್ಯವಹಾರಗಳ ಅನೇಕ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಬಿಜೆಪಿ ಸೇರಿದ ಬೆನ್ನಲ್ಲೇ ಅವರು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ಹಣಕ್ಕೆ ಬದಲಾಗಿ ಲೋಕೋಪಯೋಗಿ ಇಲಾಖೆಗಳಲ್ಲಿ ವರ್ಗಾವಣೆಗಳು ನಡೆಯುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸೋಮವಾರ ಪ್ರಸಾದ ಅವರ ವಿಶೇಷ ಕರ್ತವ್ಯದ ಅಧಿಕಾರಿ ಅನಿಲ್ ಕುಮಾರ್ ಪಾಂಡೆ ಅವರನ್ನು ಹುದ್ದೆಯಿಂದ ಕಿತ್ತು ಹಾಕಲಾಗಿದ್ದು. ಪಾಂಡೆ ವಿರುದ್ಧ ದೂರುಗಳು ಬಂದ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ, ಅವರನ್ನು ಮತ್ತೆ ಕೇಂದ್ರ ಸರಕಾರದ ಸೇವೆಗೆ ಕಳುಹಿಸಲಾಗಿದೆ ಅವರ ವಿರುದ್ಧ ವಿಜಿಲೆನ್ಸ್ ತನಿಖೆ ಹಾಗೂ ಶಿಸ್ತು ಕ್ರಮ ಶಿಫಾರಸು ಮಾಡಲಾಗಿದೆ,''ಎಂದು ವಜಾ ಆದೇಶದಲ್ಲಿ ಸರಕಾರ ಹೇಳಿತ್ತು.
ಪಾಂಡೆ ಹಾಗೂ ಜಿತಿನ್ ಪ್ರಸಾದ ಬಹಳ ಸಮಯದಿಂದ ಪರಿಚಿತರಾಗಿದ್ದಾರೆ ಹಾಗೂ ಜಿತಿನ್ ಪ್ರಸಾದ ಅವರು ಯುಪಿಎ ಆಡಳಿತದ ಅವಧಿಯಲ್ಲಿ ಸಚಿವರಾಗಿದ್ದಾಗಲೂ ಇಬ್ಬರೂ ಒಟ್ಟಿಗೆ ಇದ್ದರು, ಜಿತಿನ್ ಪ್ರಸಾದ ಅವರು ಉತ್ತರ ಪ್ರದೇಶ ಸಚಿವರಾದ ನಂತರ ಅವರನ್ನು ಅಲ್ಲಿಗೆ ಡೆಪ್ಯುಟೇಶನ್ ಮೇಲೆ ಕರೆಸಲಾಗಿತ್ತು.
ಹಣ ಪಡೆದು ವರ್ಗಾವಣೆ ಆದೇಶ ನೀಡುತ್ತಿದ್ದಾರೆಂಬ ಆರೋಪಗಳ ಹಿನ್ನೆಲೆಯಲ್ಲಿ ಪಿಡಬ್ಲ್ಯುಡಿ ಮುಖ್ಯಸ್ಥರೂ ಸೇರಿದಂತೆ ಐದು ಅಧಿಕಾರಿಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ವಜಾಗೊಳಿಸಿದ್ದಾರೆ.
ಈ ವಿಚಾರ ಕುರಿತಂತೆ ಜಿತಿನ್ ಪ್ರಸಾದ ಈಗಾಗಲೇ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿಯಾಗುವ ನಿರೀಕ್ಷೆಯಿದೆ.