ಬೆಳ್ಳಾರೆ: ತಂಡದಿಂದ ಹಲ್ಲೆಗೊಳಗಾದ ಮಸೂದ್ ಮೃತ್ಯು

ಮಸೂದ್
ಬೆಳ್ಳಾರೆ, ಜು.21: ಬೆಳ್ಳಾರೆ ಸಮೀಪದ ಕಳಂಜದಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ತಂಡದಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಮಸೂದ್(18) ಚಿಕಿತ್ಸೆ ಫಲಿಸದೆ ಗುರುವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೂಲತಃ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ನಿವಾಸಿಯಾಗಿದ್ದ ಮಸೂದ್ ಮೇಲೆ ಜೂ.19ರಂದು ರಾತ್ರಿ ಕಳಂಜ ಗ್ರಾಮದ ವಿಷ್ಣು ನಗರ ಎಂಬಲ್ಲಿ ಎಂಟು ಮಂದಿಯ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಈ ವೇಳೆ ತಲೆಗೆ ಸೋಡಾ ಬಾಟಲಿಯ ಏಟು ಬಿದ್ದಿದ್ದರಿಂದ ಗಂಭೀರಾವಸ್ಥೆಗೆ ತಲುಪಿದ್ದ ಮಸೂದ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳದಿದ್ದಾರೆ.
ಮೈಗೆ ತಾಗಿದ ಕ್ಷುಲ್ಲಕ ವಿಚಾರಕ್ಕೆ ನಡೆದಿತ್ತು ಹಲ್ಲೆ
ಮಸೂದ್ ಮೇಲೆ ಜು.19ರಂದು ರಾತ್ರಿ 11 ಗಂಟೆ ಸುಮಾರಿಗೆ ಕಳಂಜ ಗ್ರಾಮದ ವಿಷ್ಣು ನಗರ ಎಂಬಲ್ಲಿ ಈ ಹಲ್ಲೆ ನಡೆದಿದೆ.
ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ನಿವಾಸಿಯಾಗಿರುವ ಮಸೂದ್ ತಿಂಗಳ ಹಿಂದೆಯಷ್ಟೇ ಬೆಳ್ಳಾರೆಯ ಕಳಂಜದಲ್ಲಿರುವ ಅಜ್ಜ ಅಬ್ಬು ಎಂಬವರ ಮನೆಗೆ ಬಂದು ನೆಲೆಸಿದ್ದು, ಇಲ್ಲೇ ಸ್ಥಳೀಯವಾಗಿ ಕೂಲಿ ಕೆಲಸ ಮಾಡಿ ಕೊಂಡಿದ್ದರೆನ್ನಲಾಗಿದೆ. ಜು.19ರಂದು ಸಂಜೆ ವಿಷ್ಣು ನಗರದಲ್ಲಿ ಖಾಸಗಿ ಸಮಾರಂಭವೊಂದರಲ್ಲಿ ಭಾಗವಹಿಸಲು ಮಸೂದ್ ತೆರಳಿದ್ದು, ಈ ವೇಳೆ ಅಲ್ಲಿ ಸಮೀಪದ ಅಂಗಡಿಯ ಬಳಿ ಮೈ ತಾಗಿತು ಎಂಬ ಕ್ಷುಲ್ಲಕ ಕಾರಣಕ್ಕೆ ಇವರ ಮಧ್ಯೆ ಮಾತಿನ ಚಕಮಕಿ, ಹೊಡೆದಾಟ ನಡೆದಿದೆ ಎನ್ನಲಾಗಿದೆ. ಈ ವೇಳೆ ಸುಧೀರ್ಗೆ ಮಸೂದ್ ಬಾಟಲಿ ತೋರಿಸಿ ಜೀವ ಬೆದರಿಕೆ ಹಾಕಿದ್ದರೆನ್ನಲಾಗಿದೆ. ಇದೇ ವಿಚಾರವಾಗಿ ಅಂದು ರಾತ್ರಿ 10:30ರ ಸುಮಾರಿಗೆ ಆರೋಪಿಗಳಾದ ಸುನೀಲ್ ಹಾಗೂ ಅಭಿಲಾಷ್ ಎಂಬವರು ದೂರುದಾರ ಇಬ್ರಾಹಿಂ ಶಾನಿಫ್ರನ್ನು ಸಂಪರ್ಕಿಸಿ ಸುಧೀರ್ ಮೇಲೆ ಮಸೂದ್ ಹಲ್ಲೆ ನಡೆಸಿದ್ದಾನೆ, ಇದನ್ನು ರಾಜಿ ಮಾತುಕತೆ ಮೂಲಕ ಮುಗಿಸೋಣ. ಅದಕ್ಕಾಗಿ ಮಸೂದ್ನನ್ನು ವಿಷ್ಣು ನಗರಕ್ಕೆ ಕರೆದುಕೊಂಡು ಬರುವಂತೆ ಸೂಚಿಸಿದ್ದಾರೆ.
ಅದರಂತೆ ರಾತ್ರಿ 11 ಗಂಟೆ ಸುಮಾರಿಗೆ ಮಸೂದ್ರನ್ನು ಕರಕೊಂಡು ಶಾನಿಫ್ ವಿಷ್ಣು ನಗರಕ್ಕೆ ಬಂದಿದ್ದಾರೆ. ಈ ವೇಳೆ ಎಂಟು ಮಂದಿ ಆರೋಪಿಗಳು ಏಕಾಏಕಿ ಮಸೂದ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆರೋಪಿ ಅಭಿಲಾಷ್ ಸೋಡಾ ಬಾಟಲಿಯಿಂದ ಮಸೂದ್ರ ತಲೆಗೆ ಬಲವಾಗಿ ಹೊಡೆ ದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಳಿಕ ಮಸೂದ್ ಹಾಗೂ ಶಾನಿಫ್ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬೇರೆ ಬೇರೆ ದಿಕ್ಕಿಗೆ ಅಲ್ಲಿಂದ ಓಡಿದ್ದಾರೆ. ಸ್ವಲ್ಪಹೊತ್ತಿನ ಬಳಿಕ ಶಾನಿಫ್ ಹಾಗೂ ಆತನ ಸ್ನೇಹಿತರು ಮಸೂದ್ಗಾಗಿ ಹುಡುಕಾಟ ನಡೆಸಿದ್ದು, ತಡರಾತ್ರಿ 1:30ರ ವೇಳೆ ಅದೇ ಪರಿಸರದ ಅಬೂಬಕರ್ ಎಂಬವರ ಮನೆಯ ಬಾವಿಯ ಬಳಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಸೂದ್ ಪತ್ತೆಯಾಗಿದ್ದರು.
ಬಳಿಕ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಎಂಟು ಮಂದಿಯ ಬಂಧನ: ಹಲ್ಲೆಗೆ ಸಂಬಂಧಿಸಿ ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಪೆಲತ್ತಡ್ಕ ನಿವಾಸಿ ಇಬ್ರಾಹೀಂ ಶಾನಿಫ್ ಎಂಬವರು ನೀಡಿರುವ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಆರೋಪಿಗಳಾದ ಸುನೀಲ್, ಸುಧೀರ್, ಶಿವ, ಸದಾಶಿವ, ರಂಜಿತ್, ಅಭಿಲಾಷ್, ಜಿಮ್ ರಂಜಿತ್ ಹಾಗೂ ಭಾಸ್ಕರ ಎಂಬವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಇವರೆಲ್ಲರೂ ಸ್ಥಳೀಯ ನಿವಾಸಿಗಳಾಗಿದ್ದಾರೆ.
ಬಂಧಿತ ಹಲ್ಲೆ ಆರೋಪಿಗಳು