ಆಗ್ರೋ ಸ್ಟಾರ್ಟ್ಅಪ್ಗಳು ದೇಶದ ಅಭಿವೃದ್ಧಿಗೆ ಸಹಕಾರಿ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು, ಜು.21: ಆಗ್ರೋ ಸ್ಟಾರ್ಟ್ಅಪ್ಗಳು ದೇಶದ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಕೃಷಿ ಪದ್ಧತಿಗಳಿಗೆ ಸಂಬಂಧಿಸಿದ ಸ್ಟಾರ್ಟ್ಅಪ್ಗಳನ್ನು ಸ್ಥಾಪಿಸುವ ಚಿಂತನೆಯನ್ನು ಮಾಡಬಹುದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ಗುರುವಾರ ನಗರದ ಖಾಸಗಿ ಹೊಟೇಲ್ನಲ್ಲಿ ಬಿಡಬ್ಲ್ಯೂ ಬ್ಯುಸಿನೆಸ್ ವರ್ಲ್ಡ್ ಆಯೋಜಿಸಿದ್ದ ಯೂನಿಕಾರ್ನ್ ಶೃಂಗಸಭೆ ಮತ್ತು ಪ್ರಶಸ್ತಿ ಸಮಾರಂಭ-2022ರಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಬಹುಪಾಲು ಜನರು ಕೃಷಿಯನ್ನೇ ಅವಲಂಬಿಸಿದ್ದು, ಕೃಷಿ ಕ್ಷೇತ್ರದಲ್ಲಿ ನವೀನ ಕೃಷಿ ಉತ್ಪನ್ನಗಳು, ಯಂತ್ರೋಪಕರಣಗಳ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ಕುರಿಸಾಕಾಣಿಕೆ, ಹೈನೋದ್ಯಮ, ಹೀಗೆ ಬಹಳಷ್ಟು ಅವಕಾಶಗಳಿವೆ. ಈ ಕ್ಷೇತ್ರಗಳನ್ನು ನವೋದ್ಯಮಿಗಳು ತಮ್ಮ ನಾವಿನ್ಯತೆಯ ಚಿಂತನೆಯಿಂದ ಅಭಿವೃದ್ಧಿಗೊಳಿಸಬಹುದು ಎಂದು ಮುಖ್ಯಮಂತ್ರಿ ಹೇಳಿದರು.
ಸ್ಟಾರ್ಟ್ಅಪ್ಗಳು ವಿಶ್ವದ ಭವಿಷ್ಯ: ಬೆಂಗಳೂರು ಯೂನಿಕಾರ್ನ್, ಡೆಕಾಕಾರ್ನ್ ಸಂಸ್ಥೆಗಳಿಗೆ ಅತ್ಯಂತ ಸೂಕ್ತವಾಗಿದೆ. ನವೋದ್ಯಮ ಪ್ರಪಂಚದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಯಾವುದೇ ರಂಗದಲ್ಲಿ ಯೂನಿಕಾರ್ನ್ಗಳು ಬರಬಹುದಾಗಿದೆ. ಅವಶ್ಯಕತೆಯೇ ಅವಿಷ್ಕಾರದ ಜೀವಾಳ. ಅವಿಷ್ಕಾರದ ಹಸಿವು ನಮ್ಮಲ್ಲಿರಬೇಕು. ಮನುಷ್ಯ ಬೆಳೆದಂತೆ ಅಗತ್ಯತೆಗಳು ಬೆಳೆದಿದ್ದು, ನಾಗರಿಕತೆಯೂ ಬೆಳೆದಿದೆ ಎಂದು ಅವರು ತಿಳಿಸಿದರು.
ಆಧುನಿಕತೆಯ ನಾಗರಿಕತೆಗೆ ಒಗ್ಗಿಕೊಂಡಿರುವ ಜನರು ಡಿಜಿಟಲೀಕರಣವನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಬಳಸುತ್ತಿದ್ದಾರೆ. ನಮ್ಮಲ್ಲೇನಿದೆ ಎಂಬುದು ನಾಗರಿಕತೆ, ನಾವೇನಾಗಿದ್ದೇವೆ ಎಂಬುದು ನಮ್ಮ ಸಂಸ್ಕøತಿ. ಮಾನವೀಯ ಸ್ಪಂದನೆ ಹಾಗೂ ಸಾಮಾಜಿಕ ಕಳಕಳಿಯಂತಹ ಮೌಲ್ಯಗಳನ್ನು ಸ್ಟಾರ್ಟ್ಅಪ್ಗಳು ಹೊಂದಿರಬೇಕು. ಸ್ಟಾರ್ಟ್ಅಪ್ಗಳು ವಿಶ್ವದ ಭವಿಷ್ಯವಾಗಿದ್ದು, ಅದರ ಮೌಲ್ಯಗಳು ಸಮಾಜದ ಒಳಿತನ್ನು ಗುರಿಯಾಗಿಸಿಕೊಂಡಿರಬೇಕು. ಅವಿಷ್ಕಾರ, ಮೂಲಸೌಕರ್ಯ ಹಾಗೂ ಅಭಿವೃದ್ಧಿಯತ್ತ ದೇಶ ಮುನ್ನಡೆಯಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ರಾಜ್ಯದಲ್ಲಿ ಸ್ಟಾರ್ಟ್ಅಪ್ಗಳ ಸ್ಥಾಪನೆಗೆ ಪೂರಕ ಪರಿಸರ: ಬೆಂಗಳೂರು ಸ್ಟಾರ್ಟ್ಅಪ್ಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿರುವ ನಗರ. ಬೆಂಗಳೂರಿನಲ್ಲಿ 400 ಅಂತರರಾಷ್ಟ್ರೀಯ ಗುಣಮಟ್ಟದ ಆರ್ ಎಂಡ್ ಡಿ ಕೇಂದ್ರಗಳಿವೆ. ದೇಶದ ಯಾವುದೇ ನಗರದಲ್ಲಿ ಇಷ್ಟು ಸಂಖ್ಯೆಯ ಸಂಶೋಧನಾ ಕೇಂದ್ರಗಳಿಲ್ಲ. ಸರಕಾರಿ ಸ್ವಾಮ್ಯದ ಸಂಸ್ಥೆಗಳು ನಡೆಸಿದ ಅವಿಷ್ಕಾರಗಳಿಂದಾಗಿ ಬೆಂಗಳೂರು ನಗರ ಇಂದು ಐಟಿಬಿಟಿ ಕ್ಷೇತ್ರವಾಗಿ ಬೆಳೆದಿದೆ ಎಂದು ಅವರು ತಿಳಿಸಿದರು.
ಕೃಷಿಯಿಂದ ಹಿಡಿದು ಏರೋಸ್ಪೇಸ್ವರೆಗೆ, ಜೆನಿಟಿಕ್ಸ್ ನಿಂದ ಜೆನೋಮಾಟಿಕ್ಸ್ವರೆಗೆ ಸ್ಟಾರ್ಟ್ಅಪ್ಗಳು ಇಲ್ಲಿವೆ. ಗರಿಷ್ಟ ಸಂಖ್ಯೆಯ ಯೂನಿಕಾರ್ನ್ಗಳು ಹಾಗೂ 3 ಡೆಕಾಕಾರ್ನ್ಗಳು ಬೆಂಗಳೂರಿನಲ್ಲಿವೆ. ನಗರದಲ್ಲಿ ಸ್ಟಾರ್ಟ್ಅಪ್ಗಳಿಗೆ ಉತ್ತಮ ಪರಿಸರ, ನೀತಿಗಳಿವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಈಸ್ ಆಫ್ ಡೂಯಿಂಗ್ ಬಿಸನೆಸ್, ಐಟಿಬಿಟಿ ಪಾಲಿಸಿ, ಸೆಮಿಕಂಡಕ್ಟರ್ ನೀತಿ, ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನೂ ಶೀಘ್ರದಲ್ಲಿಯೇ ಸರಕಾರ ನಿರ್ಮಿಸಲಿದೆ. ಕರ್ನಾಟಕ ನವೀಕರಿಸಬಹುದಾದ ಇಂಧನದ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಹೈಡ್ರೊಜನ್ ಇಂಧನ, ಸಮುದ್ರದಿಂದ ಅಮೋನಿಯಾ ಉತ್ಪಾದನಾ ಕಾರ್ಯವನ್ನೂ ಸರಕಾರ ಕೈಗೆತ್ತಿಕೊಳ್ಳಲಿದೆ. ಸರಕಾರದ ಈ ಎಲ್ಲ ಕ್ರಮಗಳು ರಾಜ್ಯದಲ್ಲಿ ಸ್ಟಾರ್ಟ್ಅಪ್ಗಳ ಸ್ಥಾಪನೆಗೆ ಪೂರಕವಾದ ಪರಿಸರವನ್ನು ನಿರ್ಮಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.







