ಬಿಳಿ ಆನೆಯಾಗಿರುವ ಸಾರಿಗೆ ನಿಗಮಗಳ ಒಗ್ಗೂಡಿಸಲು ಒಪ್ಪದಿರುವುದು ಆಶ್ಚರ್ಯ: ಅನಂತಸುಬ್ಬರಾವ್

ಬೆಂಗಳೂರು, ಜು. 21: ‘ಸಿಬ್ಬಂದಿ ವೆಚ್ಚವನ್ನು ತಗ್ಗಿಸಲು ವರದಿ ನೀಡಿರುವ ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿಯು ನಾಲ್ಕೂ ಸಾರಿಗೆ ನಿಗಮಗಳನ್ನು ವಿಲೀನ ಮಾಡುವ ಅವಶ್ಯಕತೆ ಇಲ್ಲವೆಂದು ತಿಳಿಸಿದೆ. ದುಡಿಯುವ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡಿ ಉಳಿಯುವ ನೌಕರರಿಗೆ ಕೆಲಸದ ಒತ್ತಡವನ್ನು ಜಾಸ್ತಿ ಮಾಡುವ ಶಿಫಾರಸ್ಸನ್ನು ಕೊಟ್ಟಿದ್ದು, ಬಿಳಿ ಆನೆಯಾಗಿರುವ 4 ನಿಗಮಗಳನ್ನು ಒಗ್ಗೂಡಿಸಲು ಒಪ್ಪದಿರುವುದು ಆಶ್ಚರ್ಯದ ಸಂಗತಿ' ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಟೀಕಿಸಿದ್ದಾರೆ.
ಗುರುವಾರ ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ‘ಸಾರಿಗೆ ನಿಗಮಗಳಿಗೆ ತಲಾ ಮೂವರು ಅಧ್ಯಕ್ಷರು, ಉಪಾಧ್ಯಕ್ಷರು, ಎಂ.ಡಿ.ಗಳು, ಅವರ ಸಿಬ್ಬಂದಿಗಳು, ಅವರ ಖರ್ಚು ವೆಚ್ಚಗಳು, 3 ಮಂಡಳಿಗಳು, ಇವುಗಳ ಅವಶ್ಯಕತೆ ಹೇಗೆ? ಎನ್ನುವುದನ್ನು ಸಮಿತಿ ಪರಿಶೀಲಿಸಿಲ್ಲ ಎಂಬುದು ನಮ್ಮ ಅಭಿಪ್ರಾಯ. ಅಧಿಕಾರಿಗಳು ಮತ್ತವರ ಮುಂಭಡ್ತಿಗಳನ್ನು ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಲು ಈ ಸಮಿತಿ ನಿಂತಂತೆ ಕಾಣುತ್ತದೆ. ಮೇಲ್ಕಂಡ ಶಿಫಾರಸ್ಸು ನಕಾರಾತ್ಮಕವಾಗಿವೆ ಮತ್ತು ಸಂಪೂರ್ಣವಾಗಿ ಕಾರ್ಮಿಕ ವಿರೋಧಿಯಾಗಿವೆ. ಆದುದರಿಂದ ಈ ಶಿಫಾರಸ್ಸುಗಳನ್ನು ಸರಕಾರವು ಸಂಪೂರ್ಣವಾಗಿ ತಿರಸ್ಕರಿಸಬೇಕು' ಎಂದು ಒತ್ತಾಯಿಸಿದ್ದಾರೆ.
‘ಸಮಿತಿ ವರದಿಯು ಯಾವ ನೌಕರರು ಈ ಬೃಹತ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೋ ಅವರಿಗೆ ಸಂಪೂರ್ಣ ವಿರೋಧಿಯಾಗಿದೆ. ಸಾರಿಗೆ ನಿಗಮಗಳಿಗೆ 1,24,155 ಸಿಬ್ಬಂದಿಗಳು ಮಂಜೂರಾಗಿದ್ದು, ಅದರಲ್ಲಿ 1,07,000 ಸಿಬ್ಬಂದಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಮತ್ತು 16,969 ಖಾಲಿ ಹುದ್ದೆಗಳಿವೆ ಎಂದು ತಿಳಿಸಿದೆ. ಈಗಾಗಲೇ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗಿ ಹೆಚ್ಚು ಕೆಲಸದ ಹೊರೆಯಲ್ಲಿ ದುಡಿಯುವ ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿಗಳ ಬೆನ್ನು ಹುರಿ ಬಾಗಿದೆ. ಹೆಚ್ಚಿನ ಮಂದಿ ಚಾಲಕರು, ನಿರ್ವಾಹಕರು ‘ಬಾರ್ ಡ್ಯೂಟಿ, ಡಬಲ್ ಡ್ಯೂಟಿ'ಗಳಿಂದ ಬಸವಳಿದು ಎರಡು ಮೂರು ದಿನಗಳ ಕಾಲ ಅವರ ಮನೆಗಳಿಗೇ ಹೋಗಲಾಗುತ್ತಿಲ್ಲ. ಅವರ ವಾಸ ಬಸ್ನಲ್ಲೇ ಆಗುತ್ತಿದೆ' ಎಂದು ಅವರು ಗಮನ ಸೆಳೆದಿದ್ದಾರೆ.
‘ಇನ್ನು ಮುಂದೆ ಚಾಲಕರು ಮಾತ್ರ ಇರುವ ಬಸ್ಗಳನ್ನು ಓಡಿಸಬೇಕೆಂಬ ಶಿಫಾರಸ್ಸನ್ನು ಮಾಡಲಾಗಿದೆ. ಪರಿಸ್ಥಿತಿ ಹೀಗಿರುವಾಗ ಆರ್ಥಿಕ ಸುಸ್ಥಿರತೆಗೆ ಸಿಬ್ಬಂದಿ ವೆಚ್ಚ ಕಡಿಮೆ ಮಾಡಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಈಗಿರುವ ಸಿಬ್ಬಂದಿಗಳು 35 ಸಾವಿರ ಬಸ್ಗಳನ್ನು ನಡೆಸಬಹುದು. ಹಾಲಿ ಇರುವ ವಾಹನಗಳ ಸಂಖ್ಯೆ 24 ಸಾವಿರ. ಇನ್ನು 5 ವರ್ಷಗಳ ಕಾಲ ನೇಮಕಾತಿ ಬೇಡ. ಸಾರಿಗೆ ನಿಗಮಗಳ ಸುಸ್ಥಿತಿಗೆ ಇಂತಹ ಮಹತ್ವದ ಸುಧಾರಣೆ ಮಾಡಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಆದರೆ, ವಸ್ತುಸ್ಥಿತಿ ಬೇರೆಯೇ ಇದ್ದು, ಬಿಎಂಟಿಸಿ ಸೇರಿಸಿ ಎಲ್ಲ ನಿಗಮಗಳಲ್ಲೂ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇರುವುದರಿಂದ ಈಗಿರುವ ವಾಹನಗಳೆ ಸಂಪೂರ್ಣವಾಗಿ ಬೀದಿಗಿಳಿಯುತ್ತಿಲ್ಲ. ಸದರಿ ವರದಿಯಲ್ಲೇ ‘ಈಗಲೂ 2ಸಾವಿರ ಬಸ್ಗಳು ರಸ್ತೆಗೆ ಬಂದಿಲ್ಲ' ಎಂದು ತಿಳಿಸಲಾಗಿದೆ. ಅಂದ ಮೇಲೆ ಈಗಿರುವ ಖಾಲಿ ಹುದ್ದೆಗಳಿಗಾದರೂ ನೇಮಕಾತಿ ಮಾಡದಿದ್ದರೆ ಇನ್ನು ಮುಂದೆ ಇನ್ನೂ ಹೆಚ್ಚು ಬಸ್ಗಳು ಘಟಕಗಳಲ್ಲಿ ಉಳಿಯಬೇಕಾಗುತ್ತದೆ' ಎಂದು ಅವರು ಎಚ್ಚರಿಸಿದ್ದಾರೆ.
‘ಕಾರ್ಯಾಗಾರಗಳಿಂದ ಘಟಕಗಳಿಗೆ ತಾಂತ್ರಿಕ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಬೇಕು. ವಾಹನಗಳ ರಿಪೇರಿಯನ್ನು ಹೊರಗುತ್ತಿಗೆ ಅಥವಾ ಗುತ್ತಿಗೆ ಕಾರ್ಮಿಕರ ಮೂಲಕ ಮಾಡಿಸಬೇಕು. ಖಾಲಿ ಇರುವ ಎಲ್ಲ ಹುದ್ದೆಗಳನ್ನು ರದ್ದುಮಾಡಬೇಕೆಂದು ತಿಳಿಸಲಾಗಿದೆ. ಈ ಕ್ರಮಗಳಿಂದ ಈಗಿರುವ ನೌಕರರ ಮೇಲೆ ಹೆಚ್ಚಿನ ಶ್ರಮಭಾರ ಬೀಳುತ್ತದೆ ಹಾಗೂ ಕ್ರಮೇಣ ವಿಭಾಗೀಯ ಮತ್ತು ಪ್ರಾದೇಶಿಕ ಕಾರ್ಯಾಗಾರಗಳು ಅವಸಾನ ಹೊಂದುತ್ತವೆ. ಈ ಕ್ರಮಗಳು ಖಾಸಗೀಕರಣಕ್ಕೆ ಮುನ್ನುಡಿಯಾಗಬಹುದು' ಎಂದು ಅನಂತಸುಬ್ಬರಾವ್ ಸಂಶಯ ವ್ಯಕ್ತಪಡಿಸಿದ್ದಾರೆ.
‘ಡೀಸೆಲ್ ಬೆಲೆ ಏರಿಕೆಯಿಂದ ನಿಗಮಗಳು ತತ್ತರಿಸುತ್ತಿದ್ದು, ಆರ್ಟಿಸಿಗಳ ಸದ್ಯದ ಹೊಣೆಗಾರಿಕೆ 4,425 ಕೋಟಿ ರೂ.ಗಳಾಗಿದೆ. ನೌಕರರ ವೇತನ ಪರಿಷ್ಕರಣೆಯ ಬೇಡಿಕೆ ಬಾಕಿ ಇದೆ. ಆದುದರಿಂದ ಸರಕಾರವು ಈ ಕೂಡಲೇ 2ಸಾವಿರ ಕೋಟಿ ರೂ.ಗಳನ್ನು ಸಾರಿಗೆ ನಿಗಮಗಳಿಗೆ ಬಿಡುಗಡೆ ಮಾಡಬೇಕು. ಅಲ್ಲದೆ ಸಾರಿಗೆ ನಿಗಮಗಳಿಂದ ವಸೂಲು ಮಾಡುತ್ತಿರುವ ಮೋಟಾರು ವಾಹನ ತೆರಿಗೆಯನ್ನು ಸರಕಾರವು ನಿಗಮಗಳಿಗೆ ಬಂಡವಾಳವಾಗಿ ಹಿಂದಿರುಗಿಸುವಂತೆ ಶಿಫಾರಸ್ಸು ಮಾಡಿದೆ. ಆರ್ಟಿಸಿಗಳು ಸಾರಿಗೆ ನಿಗಮಗಳಿಗೆ ಬೆಂಬಲ ಕೊಡಲು ಸಾರ್ವಜನಿಕ ಸಾರಿಗೆ, ಹಣಕಾಸು ಮತ್ತು ಅಭಿವೃದ್ಧಿ ನಿಗಮವನ್ನು 100ಕೋಟಿ ರೂ. ಬಂಡವಾಳದೊಂದಿಗೆ ಪ್ರಾರಂಭ ಮಾಡಲು ಶಿಫಾರಸ್ಸು ಮಾಡಿದೆ. ಇಂಧನದ ವೆಚ್ಚವನ್ನು ಕಡಿತಗೊಳಿಸಲು ವಿದ್ಯುತ್ಚಾಲಿತ ಬಸ್ಗಳನ್ನು ಕ್ರಮೇಣ ತೆಗೆದುಕೊಳ್ಳಬೇಕೆಂದು ಮಾಡಿರುವ ಶಿಫಾರಸ್ಸನ್ನು ನಾವು ಬೆಂಬಲಿಸುತ್ತೇವೆ' ಎಂದು ಅನಂತ ಸುಬ್ಬರಾವ್ ತಿಳಿಸಿದ್ದಾರೆ.
‘ಸಾರಿಗೆ ನಿಗಮಗಳ ಆಸ್ತಿ (ಚರ ಮತ್ತು ಸ್ಥಿರಾಸ್ತಿಗಳ ಬೆಲೆ) 8,812 ಕೋಟಿ ರೂ.ಗಳಿದ್ದು, ಬಹುಶಃ ಇಂದಿನ ಬೆಲೆ ಎಷ್ಟಾಗಬಹುದೆಂದು ಊಹೆಗೆ ಬಿಟ್ಟಿದ್ದು. ಸಾರಿಗೆ ನಿಗಮಗಳು ತಮ್ಮ ಆಂತರಿಕ ಸಂಪನ್ಮೂಲಗಳನ್ನು ಬೆಳೆಸಿಕೊಂಡು ಅಪಾರವಾದ ಆಸ್ತಿ ಗಳಿಸಿವೆ. ಇವುಗಳಿಗೆ ಆರ್ಥಿಕ ಹಾಗೂ ಇತರೆ ರೀತಿಯ ಬೆಂಬಲ ನೀಡುವುದು ಸರಕಾರದ ಆದ್ಯ ಕರ್ತವ್ಯ. ಶ್ರೀನಿವಾಸಮೂರ್ತಿ ಸಮಿತಿ ವರದಿಯ ಬಗ್ಗೆ ಚರ್ಚಿಸಲು ಸಿಎಂ ತÀಮಗೆ ಸಮಯ ಕೊಡಬೇಕು'
-ಎಚ್.ವಿ.ಅನಂತಸುಬ್ಬರಾವ್ ಅಧ್ಯಕ್ಷ, ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್







