ಕಡಬ; ಸ್ನೇಹಿತೆ ಮನೆಗೆ ಬಂದಿದ್ದಕ್ಕೆ ಆಕ್ಷೇಪಿಸಿ ದಾಂಧಲೆ; ಸಂಘ ಪರಿವಾರದ ನಾಲ್ವರ ವಿರುದ್ಧ ಪ್ರಕರಣ ದಾಖಲು

ಕಡಬ, ಜು.22: ಸ್ನೇಹಿತೆಯೊಬ್ಬಳು ತನ್ನ ಮನೆಗೆ ಬಂದಿರುವುದನ್ನು ಆಕ್ಷೇಪಿಸಿ ಸಂಘ ಪರಿವಾರದ ಕಾರ್ಯಕರ್ತರು ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬಳು ನೀಡಿದ ದೂರಿನಂತೆ ನಾಲ್ವರ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ಆತೂರು ಗೋಳಿತ್ತಡಿ ನಿವಾಸಿಗಳಾದ ಸುದರ್ಶನ್ ಗೆಲ್ಗೊಡಿ, ಪ್ರಶಾಂತ್ ಕೊಲ್ಯ, ತಮ್ಮು ಕಲ್ಕಡಿ ಹಾಗೂ ಪ್ರಸಾದ್ ಕೊಲ್ಯ ಎಂಬವರ ವಿರುದ್ಧ ಐಪಿಸಿ ಕಲಂ 143, 147, 159, 504 ಹಾಗೂ 506ರಡಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪ್ಪಿನಂಗಡಿ ರಾಮನಗರ ನಿವಾಸಿ ಕಾವ್ಯಾ ಎಂಬವರು ಕೊಯಿಲ ಗ್ರಾಮದ ಕುದ್ಲೂರು ಎಂಬಲ್ಲಿರುವ ಸ್ನೇಹಿತೆ ಸಂಶೀನಾರ ಮನೆಗೆ ಆಟೋ ರಿಕ್ಷಾದಲ್ಲಿ ಜೊತೆಯಾಗಿ ತೆರಳಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯ ಆಟೋರಿಕ್ಷಾ ಚಾಲಕ ಸುದರ್ಶನ್ ಎಂಬಾತ ಸಂಶೀನಾಳ ಸಹೋದರ ಝಿಯಾದ್ ಹಿಂದೂ ಯುವತಿಯೊಬ್ಬಳನ್ನು ಕರೆದುಕೊಂಡು ಹೋಗಿದ್ದಾನೆ ಎಂಬ ಸುಳ್ಳುಸುದ್ದಿ ಹಬ್ಬಿಸಿದ್ದನೆನ್ನಲಾಗಿದೆ. ಇದೇ ವಿಚಾರವಾಗಿ ಅಂದು ಸಂಘಪರಿವಾರದ ಕಾರ್ಯಕರ್ತರು ಕುದ್ಲೂರಿನಲ್ಲಿರುವ ತನ್ನ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ಕಡಬ ಠಾಣೆಗೆ ನೀಡಿರುವ ದೂರಿನಲ್ಲಿ ಸಂಶೀನಾ ತಿಳಿಸಿದ್ದಾರೆ.
ಘಟನೆ ನಡೆದ ಸಂದರ್ಭ ಸ್ಥಳಕ್ಕೆ ತೆರಳಿದ್ದ ಕಡಬ ಪೊಲೀಸರು ಮಾತುಕತೆ ನಡೆಸಿದ್ದರಿಂದ ಯಾವುದೇ ದೂರು ದಾಖಲಿಸಿರಲಿಲ್ಲ. ಈ ನಡುವೆ ಕಳೆದ ಕೆಲವು ದಿನಗಳಿಂದ ಮತ್ತೆ ಕೆಲವು ಯುವಕರು ತನ್ನ ಸಹೋದರ ಝಿಯಾದ್ನನ್ನು ಊರಿಗೆ ಬರಲು ಬಿಡುವುದಿಲ್ಲ ಎಂಬ ಬಗ್ಗೆ ಬಹಿರಂಗ ಹೇಳಿಕೆ ನೀಡಿ ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಸಂಶೀನಾ ಕಡಬ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಕಡಬ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







