ಶಿವಸೇನೆ ನಿಯಂತ್ರಣಕ್ಕಾಗಿ ಹೋರಾಟ: ಉದ್ದವ್ ಠಾಕ್ರೆ-ಏಕನಾಥ್ ಶಿಂಧೆಗೆ ಬಹುಮತದ ಪುರಾವೆ ಸಲ್ಲಿಸಲು ಚು.ಆಯೋಗ ಸೂಚನೆ
Photo:PTI
ಹೊಸದಿಲ್ಲಿ: ಶಿವಸೇನೆಯ ನಿಯಂತ್ರಣಕ್ಕಾಗಿ ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ನಡುವಿನ ಕದನ ಹೊಸ ಹಂತಕ್ಕೆ ತಲುಪಿದೆ. ತಾವು ಹೊಂದಿರುವ ಸದಸ್ಯರ ಬಹುಮತ ಸಾಬೀತುಪಡಿಸಲು ಇಬ್ಬರೂ ದಾಖಲೆಯ ಪುರಾವೆ ನೀಡಬೇಕಾಗಿದೆ.
ಆಗಸ್ಟ್ 8 ರೊಳಗೆ ದಾಖಲೆಗಳನ್ನು ನೀಡುವಂತೆ ಚುನಾವಣಾ ಆಯೋಗವು ಎರಡೂ ಕಡೆಯವರಿಗೆ ತಿಳಿಸಿದ್ದು ಮಧ್ಯಾಹ್ನ 1 ಗಂಟೆಯೊಳಗೆ ಉತ್ತರವನ್ನು ಸಲ್ಲಿಸಲು ತಿಳಿಸಲಾಗಿದೆ. ನಂತರ ಚುನಾವಣಾ ಆಯೋಗವು ಶಿವಸೇನೆಯ ಎರಡೂ ಬಣಗಳ ನಡುವಿನ ಹಕ್ಕುಗಳು ಹಾಗೂ ವಿವಾದಗಳ ಬಗ್ಗೆ ವಿಚಾರಣೆ ನಡೆಸಲಿದೆ.
"ನಿಜವಾದ ಶಿವಸೇನೆ"ಯ ಮೇಲೆ ನಡೆಯುತ್ತಿರುವ ಜಗಳ ಚುನಾವಣಾ ಆಯೋಗವನ್ನು ತಲುಪಿದೆ. ಉದ್ಧವ್ ಬಣ ಹಾಗೂ ಠಾಕ್ರೆ ಬಣಗಳೆರಡೂ ಚುನಾವಣಾ ಸಮಿತಿಗೆ ಪತ್ರ ಬರೆದಿವೆ.
ಪಕ್ಷದ ಚಿಹ್ನೆ(ಬಿಲ್ಲು ಹಾಗೂ ಬಾಣ)ಯನ್ನು ತಮ್ಮ ಬಣಕ್ಕೆ ಹಂಚಿಕೆ ಮಾಡಬೇಕು ಎಂದು ಕೋರಿ ಚುನಾವಣಾ ಆಯೋಗಕ್ಕೆ ಶಿವಸೇನಾದ ಏಕನಾಥ ಶಿಂಧೆ ಬಣವು ಮನವಿ ಮಾಡಿತ್ತು.
ಪಕ್ಷದ ಕೆಲವು ಸದಸ್ಯರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಉದ್ಧವ್ ಠಾಕ್ರೆ ಅವರ ಬಣದ ಅನಿಲ್ ದೇಸಾಯಿ ಹಲವು ಸಂದರ್ಭಗಳಲ್ಲಿ ಇಸಿಐಗೆ ಪತ್ರ ಬರೆದಿದ್ದರು. ಶಿಂಧೆ ಬಣವು 'ಶಿವಸೇನೆ' ಅಥವಾ 'ಬಾಲಾ ಸಾಹೇಬ್' ಹೆಸರನ್ನು ಬಳಸಿಕೊಂಡು ಯಾವುದೇ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಬಗ್ಗೆಯೂ ಅವರು ಆಕ್ಷೇಪ ಎತ್ತಿದ್ದರು.
ಅನಿಲ್ ದೇಸಾಯಿ ಅವರು ಏಕನಾಥ್ ಶಿಂಧೆ, ಗುಲಾಬ್ರಾವ್ ಪಾಟೀಲ್, ತಾಂಜಿ ಸಾವಂತ್ ಹಾಗೂ ಉದಯ್ ಸಾಮಂತ್ ಅವರನ್ನು ಪಕ್ಷದ ಹುದ್ದೆಗಳಿಂದ ತೆಗೆದುಹಾಕುವಂತೆ ಕೋರಿದ್ದರು.
55 ಶಾಸಕರಲ್ಲಿ 40 ಮಂದಿ, ವಿವಿಧ ಎಂಎಲ್ಸಿಗಳು ಹಾಗೂ 18 ರಲ್ಲಿ 12 ಸಂಸದರು ತಮ್ಮೊಂದಿಗೆ ಇದ್ದಾರೆ ಎಂದು ಶಿಂಧೆ ಅವರು ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.