ಬೆಳ್ತಂಗಡಿ; ವೃದ್ಧೆಯ ಕೊಲೆಗೈದು ಚಿನ್ನಾಭರಣ ದರೋಡೆ ಪ್ರಕರಣ: ಸಂಬಂಧಿಕ ಅಶೋಕ್ ಬಂಧನ
ಅಶೋಕ್
ಬೆಳ್ತಂಗಡಿ: ಬೆಳಾಲಿನಲ್ಲಿ ಮನೆಗೆ ನುಗ್ಗಿ ವೃದ್ಧೆಯೋರ್ವರನ್ನು ಕೊಲೆಗೈದು ಚಿನ್ನಾಭರಣ ದರೋಡೆ ಮಾಡಿದ ಪ್ರಕರಣದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಕಾನರ್ಪ ನಿವಾಸಿ, ಮೃತ ವೃದ್ಧೆಯ ಸಂಬಂಧಿಕನಾಗಿರುವ ಅಶೋಕ್ (28) ಎಂದು ಗುರುತಿಸಲಾಗಿದೆ.
ಈತ ವೃದ್ಧೆಯನ್ನು ಹತ್ಯೆಗೈದು ಚಿನ್ನಾಭರಣ ಹಾಗೂ ನಗದು ಅಪಹರಿಸಿ ಪರಾರಿಯಾಗಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈತ ಕೆಲವು ದಿನಗಳಿಂದ ಇಲ್ಲಿ ಬಂದು ಹೋಗುತ್ತಿದ್ದ ಎನ್ನಲಾಗಿದ್ದು, ಹಣಕ್ಕಾಗಿ ವೃದ್ಧೆಯನ್ನು ಹತ್ಯೆ ಮಾಡಿದ್ದಾನೆ ಎಂದು ದೂರಲಾಗಿದೆ.
ಕೊಲೆ ನಡೆದ ಮನೆಯ ಸಮೀಪ ಈತ ಹೋಗುತ್ತಿರುವುದನ್ನು ಸ್ಥಳೀಯ ವ್ಯಕ್ತಿಯೋರ್ವರು ಕಂಡಿದ್ದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸುಳಿವಿನ ಆಧಾರದಲ್ಲಿ ಹುಡುಕಾಟ ನಡೆಸಿದಾಗ ಆರೋಪಿಯ ಬಗ್ಗೆ ಮಾಹಿತಿ ಲಭಿಸಿದ್ದು ನಂತರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಹಿನ್ನೆಲೆ
ಕೊಲೆ ಮಾಡಿ ದರೋಡೆ ಮಾಡಿದ ಆರೋಪಿಯನ್ನು ಕಡುರುದ್ಯಾವರ ಗ್ರಾಮದ ಕಾನರ್ಪದ ಕುಮೇರು ಮನೆಯ ಅಶೋಕ್ (28) ಎಂದು ಗುರುತಿಸಲಾಗಿದೆ.
ಈತ ಐಸ್ ಕ್ರೀಮ್ ವಾಹನದಲ್ಲಿ ಕೆಲಸ ಮಾಡಿಕೊಂಡಿದ್ದು, ಸಂಬಂಧಿಯಾಗಿದ್ದ ಕಾರಣ ಅಕ್ಕು ಮನೆಗೆ ಬಂದು ಹೋಗುತ್ತಿದ್ದ. ಈ ವೇಳೆ ಹಣ ಕೂಡ ಕೇಳಿ ಪಡೆದು ಹೋಗಿತ್ತಿದ್ದ ಎನ್ನಲಾಗಿದ್ದು, ಈತನಿಗೆ ಕುಡಿಯುವ ಚಟ ಕೂಡ ಇದ್ದು ಕೆಲ ಸಮಯದಿಂದ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದ ಎಂದು ತಿಳಿದುಬಂದಿದ್ದು, ಹಣ ಇಲ್ಲದ ಕಾರಣ ಸಂಬಂಧಿಕರನ್ನು ಕೊಲೆ ಮಾಡಿ ದರೋಡೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.