ಕಳಪೆ ವಿದ್ಯುತ್ ವಸ್ತುಗಳು ಬೆಂಕಿ ಅನಾಹುತಕ್ಕೆ ಕಾರಣ: ರವೀಂದ್ರ ಗುಜ್ಜರಬೆಟ್ಟು

ಮಲ್ಪೆ : ಒಂದೇ ಜೋಡಣೆಯಲ್ಲಿ ಹಲವಾರು ವಿದ್ಯುತ್ ಉಪಕರಣ ಗಳನ್ನು ಉಪಯೋಗಿಸುವುದಲ್ಲದೆ, ಸಡಿಲ ಜೋಡಣೆ, ಅಗ್ಗದ ಕಳಪೆ ಗುಣ ಮಟ್ಟದ ವಿದ್ಯುತ್ ಉಪಕರಣಗಳೂ ವಿದ್ಯುತ್ ಶಾರ್ಟ್ ಸರ್ಕ್ಯೂಟಿಗೆ ಕಾರಣ ವಾಗುತ್ತವೆ ಎಂದು ಪಲಿಮಾರು ಮಠದ ಉಡುಪಿ ಶ್ರೀಕೃಷ್ಣ ಟೆಕ್ನಿಕಲ್ ಎಜುಕೇಶನ್ ಸೆಂಟರ್ನ ರವೀಂದ್ರ ಗುಜ್ಜರಬೆಟ್ಟು ಹೇಳಿದ್ದಾರೆ.
ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಇಕೋ ಕ್ಲಬ್ ಇತ್ತೀಚೆಗೆ ಕಾಲೇಜು ಸಭಾಭವನದಲ್ಲಿ ಆಯೋಜಿಸಲಾದ ನೀರು ಮತ್ತು ವಿದ್ಯುತ್ ಬಳಕೆ, ಉಳಿಕೆ, ಸುರಕ್ಷತೆ ವಿಷಯವಾಗಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾಹಿತಿ ನೀಡಿದರು.
ಮಾನವ ದೇಹದ ಮೂಲಕ ವಿದ್ಯುತ್ ಹರಿಯುವುದು, ವಿದ್ಯುತ್ ಜೋಡಣೆ ಯಲ್ಲಿ ಬೆಂಕಿ ಹೇಗೆ ಉಂಟಾಗುವುದು ಮತ್ತು ಕಾರಣಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತೋರಿಸಲಾಯಿತು. ವಿದ್ಯುತ್ನಿಂದ ಉಂಟಾದ ಬೆಂಕಿಗೆ ಎಂದೂ ನೀರು ಬಳಸಬಾರದು. ವಿದ್ಯುತ್ ಸುರಕ್ಷ ಸಾಧನಗಳನ್ನೇ ಬಳಸಬೇಕು. ಕೆಲವೊಮ್ಮೆ ಹಣ ಉಳಿತಾಯ ಮಾಡಲು ಕೆಟ್ಟು ಹೋದ ಆಪತ್ಕಾಲದ ವಿದ್ಯುತ್ ಸುರಕ್ಷಕ ಸಾಧನಗಳಾದ ಪ್ಯೂಸು, ಎಂ.ಸಿ.ಬಿ.(ಟ್ರಿಪ್ಪರ್), ಆರ್.ಸಿ.ಸಿ.ಬಿ., ಅರ್ಥಿಂಗ್, ಮೈನ್ ಸ್ವಿಚ್ಚ್, ತಪ್ಪಿಸಿ ನೇರ ಸಂಪರ್ಕ(ಶಾರ್ಟ್)ಗೊಳಿಸಿದರೆ ಉಂಟಾಗ ಬಹುದಾದ ಹಾನಿ, ಅವಘಡಗಳ ಬಗ್ಗೆ ಎಚ್ಚರಿಕೆ ನೀಡಲಾಯಿತು.
ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಪ್ರು ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಹರಿನಾಥ ಸುವರ್ಣ ಉಪಸ್ಥಿತರಿದ್ದರು. ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕ ಗಳಿಸಿದ್ದ ವಿದ್ಯಾರ್ಥಿ ಪುನೀತ್ ನಾಯ್ಕ್ಗೆ ಮುಖ್ಯ ಶಿಕ್ಷಕರ ಸಂಘ ಕೊಡಮಾಡಿದ್ದ್ಪ ಪುರಸ್ಕಾರ ಮತ್ತು ಪ್ರಮಾಣ ಪತ್ರವನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.
ಅಧ್ಯಾಪಕರಾದ ಶ್ರೀಕಾಂತ್ ಹೆಗ್ಡೆ, ರಂಜನ್ ಎಂ., ಮಮತಾ ನಾಯಕ್, ಜ್ಯೋತಿ, ಪ್ರಿಯಾ, ವಸಂತಿ, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಧ್ಯಾಪಕ ಸತೀಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶಕಿಲಾ ವಂದಿಸಿದರು.