ಕುದ್ರೋಳಿ: ಬಿಲ್ಲವ ಸಂಘದ ಪ್ರತಿನಿಧಿಗಳ ಸಭೆ

ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ ನೇತೃತ್ವದಲ್ಲಿ ಬಿಲ್ಲವ ಸಂಘಟನೆಗಳ ಪ್ರತಿನಿಧಿಗಳ ಸಭೆಯು ಕುದ್ರೋಳಿಯ ನಾರಾಯಣ ಗುರು ಕಾಲೇಜಿನ ದಾಮೋದರ ಆರ್.ಸುವರ್ಣ ಸಭಾಂಗಣದಲ್ಲಿ ರವಿವಾರ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಭಾರತ ಬಿಲ್ಲವರ ಯೂನಿಯನ್ನ ಅಧ್ಯಕ್ಷ ನವೀನ್ ಚಂದ್ರ ಡಿ.ಸುವರ್ಣ ಪ್ರಸ್ತುತ ದಿನಗಳ ವಿದ್ಯಮಾನವನ್ನು ಗಮನಿಸುವಾಗ ಬಿಲ್ಲವ ಸಮಾಜ ಹಿಂದಿಗಿಂತ ಈಗ ಹೆಚ್ಚು ಸಂಘಟಿತರಾಗುವ ಅಗತ್ಯವಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಪಾಠ ೧೦ನೆ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮರು ಸೇರ್ಪಡೆಯಾಗಲು ನಾವು ಕೈಗೊಂಡ ಹೋರಾಟದಿಂದ ಸಾಧ್ಯವಾಯಿತು ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ದ.ಕ.ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಬಿಲ್ಲವ ಸಮಾಜದ ಪರವಾಗಿ ಕೃತಜ್ಙತೆ ಸಲ್ಲಿಸಿದರು.
ಕುದ್ರೋಳಿ ಶ್ರೀ ಗೋಕರ್ಣಾನಾಥೇಶ್ವರ ದೇವಸ್ಥಾನದ ಅಧ್ಯಕ್ಷ ಎಚ್.ಎಸ್.ಸಾಯಿರಾಮ್ ಸಭೆಯನ್ನು ಉದ್ಘಾಟಿಸಿದರು. ವಿಶ್ವ ಬಿಲ್ಲವ ಸಮ್ಮೇಳನ ನಡೆಸುವ ಬಗ್ಗೆ, ಬಿಲ್ಲವ ಅಭಿವೃದ್ಧಿ ನಿಗಮ ಸ್ಥಾಪಿಸುವ ಬಗ್ಗೆ ಸರಕಾರವನ್ನು ಒತ್ತಾಯಿಸಬೇಕು ಎಂಬ ಪ್ರಸ್ತಾಪ ಸಭೆಯಲ್ಲಿ ಕೇಳಿ ಬಂತು.
ವೇದಿಕೆಯಲ್ಲಿ ಯೂನಿಯನ್ನ ಉಪಾಧ್ಯಕ್ಷ ಲೋಕನಾಥ ಅಮೀನ್, ಸಂಘಟನಾ ಕಾರ್ಯದರ್ಶಿಗಳಾದ ಉದಯಚಂದ್ರ ಡಿ. ಸುವರ್ಣ, ಕೆ.ಟಿ. ಸುವರ್ಣ, ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ, ನಾರಾಯಣ ಗುರು ಯುವ ವೇದಿಕೆಯ ಅಧ್ಯಕ್ಷ ಸುದರ್ಶನ್ ಡಿ. ಸುವರ್ಣ, ಮಡಿಕೇರಿ ಬಿಲ್ಲವ ಸಂಘದ ಪ್ರಮುಖರಾದ ಬಿ.ಎ. ರಾಜಶೇಖರ್, ಬಿಲ್ಲವ ಪರಿಷತ್ ಉಡುಪಿ ಅಧ್ಯಕ್ಷ ನವೀನ್ ಅಮೀನ್ ಉಪಸ್ಥಿತರಿದ್ದರು.
ಎಂ.ಎಸ್. ಕೋಟ್ಯಾನ್ ಪ್ರಾಸ್ತಾವಿಸಿದರು. ಸುಖಲಾಕ್ಷಿ ಸುವರ್ಣ ಸ್ವಾಗತಿಸಿದರು, ಹರೀಶ್ ಮುಂಡೋಳಿ ವಂದಿಸಿದರು.







