ಬೈಂದೂರಿಗೆ ಬಹುಪಯೋಗಿ ಬಂದರು, ಗಂಗೊಳ್ಳಿ-ಕುಂದಾಪುರ ನಡುವೆ ಸೇತುವೆಗಾಗಿ ಮನವಿ
ಕೇಂದ್ರ ಸಚಿವ ಸೋನಾವಾಲಗೆ ಸಿಎಂ ಬೊಮ್ಮಾಯಿ, ಎಂಪಿ ಮನವಿ

ಉಡುಪಿ : ಬೈಂದೂರು ವಿಧಾನಸಭಾ ಕ್ಷೇತ್ರದಲಿ ಸಾಗರಮಾಲಾ ಯೋಜನೆಯಡಿ ಬಹುಪಯೋಗಿ ಬಂದರು (ಮಲ್ಟಿ ಪರ್ಪಸ್ ಹಾರ್ಬರ್) ಹಾಗೂ ಗಂಗೊಳ್ಳಿ -ಕುಂದಾಪುರ ನಡುವೆ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡುವಂತೆ ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ ಅವರೊಂದಿಗೆ ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವರಾದ ಸರ್ಬಾನಂದ ಸೋನಾವಾಲ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿಯಾದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಸಲ್ಲಿಸಿ ಆಗ್ರಹಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಮೀನುಗಾರಿಕೆ, ಪ್ರವಾಸೋದ್ಯಮ, ವಾಣಿಜ್ಯ ಹಾಗೂ ಆರ್ಥಿಕ ಅಭಿವೃದ್ದಿಗೆ ಪೂರಕ ಅವಕಾಶಗಳಿದ್ದು, ಇಲ್ಲಿ ಬಹುಉಪಯೋಗಿ ಬಂದರು ಸ್ಥಾಪನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಸದ ರಾಘವೇಂದ್ರ ಒತ್ತಾಯಿಸಿದರು.
ಬೈಂದೂರು ವಿಧಾನಸಭಾ ವ್ಯಾಪ್ತಿಗೆ ಬರುವ ಗಂಗೊಳ್ಳಿಯಿಂದ ಕುಂದಾಪುರಕ್ಕೆ ಬರಲು ಸುಮಾರು 18 ಕಿ.ಮೀ ಸುತ್ತಿ ಬಳಸಿ ಬರಬೇಕಾಗಿದೆ. ಗಂಗೊಳ್ಳಿ ಮೀನುಗಾರಿಕಾ ಬಂದರು ಮತ್ತು ವಾಣಿಜ್ಯ ಕೇಂದ್ರವಾದ ಕುಂದಾಪುರವನ್ನು ಸಂಪರ್ಕಿಸಲು ಸೇತುವೆ ನಿರ್ಮಿಸಿದ್ದಲ್ಲಿ ಗಂಗೊಳ್ಳಿಯಿಂದ ಕುಂದಾಪುರ ಬಹಳ ಹತ್ತಿರವಾಗಲಿದೆ. ಕಚೇರಿ, ಆಸ್ಪತ್ರೆ, ಮೀನುಗಾರಿಕಾ ಹಾಗೂ ಇನ್ನಿತರೆ ಅವಶ್ಯಕತೆ ಗಳನ್ನು ಪೂರೈಸಲು ಇದು ಸಹಕಾರಿಯಾಗಲಿದೆ. ಆದ್ದರಿಂದ ತುರ್ತಾಗಿ ಗಣನೆಗೆ ತೆಗೆದುಕೊಂಡು ಪ್ರಥಮ ಆದ್ಯತೆಯ ಮೇರೆಗೆ ಸೇತುವೆ ನಿರ್ಮಾಣಕ್ಕೆ ಅನುಮೋದನ್ ದೊರಕಿಸಿಕೊಡಬೇಕೆಂದು ಸಂಸದರು ಒತ್ತಾಯಿಸಿದರು.
ಮೇಲಿನ ಎರಡೂ ಪ್ರಸ್ತಾವನೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಯೋಜನೆಗಳ ಬಗ್ಗೆ ಪತ್ರ ಬರೆದಿದ್ದು ಪಿಪಿಪಿ ಮಾದರಿಯಲ್ಲಿ ಮಲ್ಟಿಪರ್ಪಸ್ ಹಾರ್ಬರ್(ಬಹುಪಯೋಗಿ ಬಂದರು) ನಿರ್ಮಿಸಲು ಶೀಘ್ರವಾಗಿ ಟೆಂಡರ್ ಕರೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಲ್ಲದೇ ಗಂಗೊಳ್ಳಿ-ಕುಂದಾಪುರ ಸೇತುವೆ ನಿರ್ಮಿಸಲು ತ್ವರಿತವಾಗಿ ಸಕಾರಾತ್ಮಕವಾಗಿ ಪರಿಗಣಿಸುವ ಭರವಸೆ ನೀಡಿದರು. ಇದೇ ವೇಳೆ ಎರಡೂ ಯೋಜನೆಗಳಿಗೆ ಕರ್ನಾಟಕ ಸರಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೇಂದ್ರ ಸಚಿವರಿಗೆ ಭರವಸೆ ನೀಡಿದರು.
ಸಭೆಯಲ್ಲಿ ಕೇಂದ್ರ ಸಹಾಯಕ ಸಚಿವ ಶ್ರೀಪಾದ್ ನಾಯಕ್, ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಉಪಸ್ಥಿತರಿದ್ದರು.







