ಜಾರಕಿಹೊಳಿ ಸೀಡಿ ಪ್ರಕರಣ | ಅನುಮತಿ ಪಡೆಯದೆ ವರದಿ ಸಲ್ಲಿಸುವಂತಿಲ್ಲ: ಹೈಕೋರ್ಟ್

ಬೆಂಗಳೂರು, ಜು.25: ಮಾಜಿ ಸಚಿವ, ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಅವರು ಬೆಂಗಳೂರು ನಗರದ ಠಾಣೆಯೊಂದರಲ್ಲಿ ದಾಖಲಿಸಿರುವ ಬ್ಲ್ಯಾಕ್ಮೇಲ್ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ಉಚ್ಛ ನ್ಯಾಯಾಲಯದ ಅನುಮತಿ ಪಡೆಯದೇ ವಿಚಾರಣಾ ಕೋರ್ಟ್ಗೆ ಎಸ್ಐಟಿ ಸಲ್ಲಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ಮಾಡಿದೆ. ಜತೆಗೆ ಈ ಪ್ರಕರಣದಲ್ಲಿ ಕಾನೂನು ವಿಷಯಗಳ ಬಗ್ಗೆ ಕೋರ್ಟ್ಗೆ ಸಲಹೆ ನೀಡಲು ಹಿರಿಯ ವಕೀಲ ಸಂದೇಶ್ ಚೌಟ್ರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಕ ಮಾಡಿದೆ.
ರಮೇಶ್ ಜಾರಕಿಹೊಳಿ ಅವರ ಸೀಡಿ ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಿರುವುದರ ಸಿಂಧುತ್ವ ಮತ್ತು ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ಜಾರಕಿಹೊಳಿ ದಾಖಲಿಸಿರುವ ಬ್ಲ್ಯಾಕ್ಮೇಲ್ ಪ್ರಕರಣ ರದ್ದು ಕೋರಿ ಸಂತ್ರಸ್ತೆ ಹಾಗೂ ಮತ್ತಿಬ್ಬರು ಆರೋಪಿಗಳಾದ ನರೇಶ್, ಶ್ರವಣ್ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು.
ಉಚ್ಛ ನ್ಯಾಯಾಲಯದ ಅನುಮತಿ ಪಡೆಯದೇ ಎಸ್ಐಟಿಯು ತನಿಖಾ ವರದಿಯನ್ನು ವಿಚಾರಣಾ ಕೋರ್ಟ್ಗೆ ಸಲ್ಲಿಸಬಾರದು ಎಂಬ ಹೈಕೋರ್ಟ್ನ ಆದೇಶವು ಆರೋಪಿಗಳಾದ ನರೇಶ್ ಹಾಗೂ ಶ್ರವಣ್ ಪ್ರಕರಣಕ್ಕೂ ಅನ್ವಯವಾಗುತ್ತದೆ ಎಂದು ನ್ಯಾ.ಸುನಿಲ್ ದತ್ ಯಾದವ್ ಅವರಿದ್ದ ಪೀಠವು ತಿಳಿಸಿದೆ.





