ಮಂಗಳೂರು: ಬಲ್ಮಠ ರಸ್ತೆಯಲ್ಲಿರುವ ರಿಸೈಕಲ್ ದಿ ಲಾಂಜ್ ಮೇಲೆ ಬಜರಂಗದಳ ದಾಳಿ
ಪಾರ್ಟಿ ಮಾಡುತ್ತಿದ್ದವರನ್ನು ಅವಹೇಳನ ಮಾಡಿ ವಾಪಸ್ ಕಳಿಸಿದ ಬಜರಂಗದಳ ಕಾರ್ಯಕರ್ತರು

ಮಂಗಳೂರು, ಜು.25: ನಗರದ ಬಲ್ಮಠದಲ್ಲಿರುವ ಪಬ್ವೊಂದಕ್ಕೆ ಬಜರಂಗ ದಳದ ಕಾರ್ಯಕರ್ತರು ಎನ್ನಲಾದ ತಂಡವೊಂದು ನುಗ್ಗಿ ಕಾನೂನು ಕೈಗೆತ್ತಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಪಬ್ನಲ್ಲಿ ವಿದ್ಯಾರ್ಥಿಗಳು ಪಾರ್ಟಿ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಬಜರಂಗ ದಳದ ಕಾರ್ಯಕರ್ತರು ಪಾರ್ಟಿ ನಿಲ್ಲಿಸುವಂತೆ ಒತ್ತಾಯಿಸಿದರು ಎನ್ನಲಾಗಿದೆ. ಅಲ್ಲದೆ ವಿದ್ಯಾರ್ಥಿಗಳನ್ನು ಹೊರಹೋಗುವಂತೆ ಒತ್ತಾಯಿಸಿದರು ಎಂದು ಆರೋಪಿಸಲಾಗಿದೆ.
ಬಲ್ಮಠ ರಸ್ತೆಯಲ್ಲಿರುವ ರಿಸೈಕಲ್ ದಿ ಲಾಂಜ್ ಎಂಬ ಪಬ್ ಮೇಲೆ ಬಜರಂಗದಳ ಕಾರ್ಯಕರ್ತರು ದಾಳಿ ದಾಳಿ ಮಾಡಿದ್ದು, ಪಾರ್ಟಿ ಮಾಡುತ್ತಿದ್ದವರನ್ನು ಅವಹೇಳನ ಮಾಡಿ ವಾಪಸ್ ಕಳಿಸಿದ್ದಾರೆ ಎಂದು ದೂರಲಾಗಿದೆ.
2009 ರ ಪಬ್ ದಾಳಿ ನಡೆದ ಅದೇ ಪಬ್ ಮೇಲೆ ಈಗ ಮತ್ತೆ ದಾಳಿ ನಡೆದಿದ್ದು, ಈಗ ಅದು ರಿಸೈಕಲ್ ಎಂದು ಹೆಸರು ಬದಲಾಯಿಸಿದ್ದು, ಹಿಂದೆ ಅಮ್ನೆಸಿಯ ಪಬ್ ಎಂದು ಗುರುತಿಸಲಾಗಿತ್ತು.
ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಬಜರಂಗ ದಳದ ಕಾರ್ಯಕರ್ತರನ್ನು ಹೊರಗೆ ಕಳುಹಿಸಿದರು ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಬಗ್ಗೆ ಇನ್ನಷ್ಟು ವಿವರ ತಿಳಿದುಬರಬೇಕಿದೆ.








