ʼಕಸ್ತೂರಿ ರಂಗನ್ ವರದಿಯ ಆತಂಕ ಪರಿಹಾರಕ್ಕೆ ಕೇರಳ ಮಾದರಿಯ ಭೌತಿಕ ಸಮೀಕ್ಷೆ ಒಂದೇ ದಾರಿʼ
ಉಡುಪಿ ಜಿಲ್ಲಾ ಭಾಕಿಸಂ ಪ್ರತಿಪಾದನೆ
![ʼಕಸ್ತೂರಿ ರಂಗನ್ ವರದಿಯ ಆತಂಕ ಪರಿಹಾರಕ್ಕೆ ಕೇರಳ ಮಾದರಿಯ ಭೌತಿಕ ಸಮೀಕ್ಷೆ ಒಂದೇ ದಾರಿʼ ʼಕಸ್ತೂರಿ ರಂಗನ್ ವರದಿಯ ಆತಂಕ ಪರಿಹಾರಕ್ಕೆ ಕೇರಳ ಮಾದರಿಯ ಭೌತಿಕ ಸಮೀಕ್ಷೆ ಒಂದೇ ದಾರಿʼ](https://www.varthabharati.in/sites/default/files/images/articles/2022/07/27/343832-1658930336.jpg)
ಸಾಂದರ್ಭಿಕ ಚಿತ್ರ
ಉಡುಪಿ: ಪಶ್ಚಿಮ ಘಟ್ಟದ ಸಂರಕ್ಷಣೆಯ ಉದ್ದೇಶದಿಂದ ಡಾ. ಕಸ್ತೂರಿ ರಂಗನ್ ನೇತೃತ್ವದ ಉನ್ನತಮಟ್ಟದ ಸಮಿತಿ ನೀಡಿರುವ ವರದಿಯನ್ನು ಕಾರ್ಯಗತಗೊಳಿಸುವಂತೆ ಸುಪ್ರೀಂ ಕೋರ್ಟ್ನ ಹಸಿರು ಪೀಠ ಕೇಂದ್ರ ಸರಕಾರಕ್ಕೆ ನಿರಂತರವಾಗಿ ಒತ್ತಡವನ್ನು ಹೇರುತ್ತಲೇ ಬಂದಿದೆ. ಈ ಕಾರಣಕ್ಕೆ ಕಳೆದ ಜು.೬ರಂದು ನಾಲ್ಕನೇ ಬಾರಿಗೆ ಗಜೆಟ್ ಪ್ರಕಟಣೆ ಹೊರಡಿಸಿರುವ ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಈ ಬಗ್ಗೆ ಜನರು ಮತ್ತು ಸರಕಾರಗಳು ತಮ್ಮ ಅಭಿಪ್ರಾಯ ಅಥವಾ ಆಕ್ಷೇಪಗಳಿದ್ದಲ್ಲಿ ಸಲ್ಲಿಸಲು ೬೦ ದಿನಗಳ ಕಾಲಾವಕಾಶ ನೀಡಿದ್ದು, ಅದು ಮುಂದಿನ ಸೆಪ್ಟಂಬರ್ ೩ಕ್ಕೆ ಅಂತ್ಯಗೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಆದರೆ ಈ ವಿಚಾರದಲ್ಲಿ ಕೊನೆಗೂ ಎಚ್ಚೆತ್ತ ರಾಜ್ಯ ಸರಕಾರಗಳು ಹಾಗೂ ಈ ಭಾಗದ ಸಂಸದರುಗಳ ಒತ್ತಡಕ್ಕೆ ಮಣಿದ ಸಚಿವಾಲಯ, ವಾಸ್ತವ ಪರಿಸ್ಥಿತಿಯ ಅಧ್ಯಯನಕ್ಕೆ ಉನ್ನತಮಟ್ಟದ ಸಮಿತಿಯನ್ನು ರಚಿಸಿ, ಸಂತ್ರಸ್ಥ ರಾಜ್ಯದ ಸರಕಾರಗಳೊಂದಿಗೆ ಸಮಾಲೋಚಿಸಿ, ಜನವಸತಿ ಪ್ರದೇಶ, ರೈತರೇ ಅಭಿವೃದ್ಧಿ ಪಡಿಸಿದ ಹಸಿರು ತೋಟಗಳನ್ನು ಹೊರಗಿಟ್ಟು, ಹೇರಬೇಕಾದ ನಿರ್ಭಂಧ- ನಿಯಂತ್ರಣಗಳ ಬಗ್ಗೆ ಚರ್ಚಿಸಿ, ವರದಿ ನೀಡುವಂತೆ ಆದೇಶಿಸಿ, ಒಂದು ವರ್ಷದ ಸಮಯಾವಕಾಶ ನೀಡಿದೆ ಎಂಬ ವಿಚಾರ ಜನರ ಆತಂಕವನ್ನು ಸ್ವಲ್ಪ ಮಟ್ಟಿಗೆ ದೂರ ಮಾಡಿದೆ ಎಂದು ಭಾಕಿಸಂ ಹೇಳಿಕೆಯಲ್ಲಿ ತಿಳಿಸಿದೆ.
ಕಸ್ತೂರಿ ರಂಗನ್ ವರದಿಯ ಕುರಿತಂತೆ ಜನರ, ರೈತರ ಆತಂಕ ಪರಿಹಾರಕ್ಕೆ ಕೇರಳ ಮಾದರಿಯ ಭೌತಿಕ ಸಮೀಕ್ಷೆ ಒಂದೇ ದಾರಿಯಾಗಿದೆ ಎಂದು ಭಾಕಿಸಂ ಅಭಿಪ್ರಾಯಪಟ್ಟಿದೆ. ಕೇರಳ ಸರಕಾರ ಈ ವರದಿ ಅನುಷ್ಠಾನದ ಬಗ್ಗೆ ಮೊದಲ ಗಜೆಟ್ ಪ್ರಕಟಣೆ ಹೊರಟಾಗಲೇ ಗ್ರಾಮ-ಗ್ರಾಮಗಳಲ್ಲಿ ಕಂದಾಯ, ಅರಣ್ಯ ಅಧಿಕಾರಿಗಳು, ಸ್ಥಳೀಯ ಜನ ಪ್ರತಿನಿಧಗಳು ಹಾಗೂ ಗ್ರಾಮಸ್ಥರು, ವಾರಗಳ ಕಾಲ ಗ್ರಾಮದ ನಕ್ಷೆಯನ್ನಿಟ್ಟುಕೊಂಡು, ಯಾವ ಯಾವ ಪ್ರದೇಶದಲ್ಲಿ ನೈಸರ್ಗಿಕ ಅರಣ್ಯವಿದೆ, ಯಾವ ಸರ್ವೆ ನಂಬ್ರಗಳಲ್ಲಿ ಜನವಸತಿ, ಕೃಷಿಕರೆ ಅಭಿವೃದ್ಧಿಪಡಿಸಿದ ತೋಟ ಗದ್ದೆ, ಅರಣ್ಯ ಕೃಷಿಗಳಿವೆ ಎಂಬುದನ್ನು ಗುರುತಿಸಿ, ಆ ಪ್ರದೇಶಗಳನ್ನು ಕೈ ಬಿಟ್ಟು ಉಳಿದ ಭೂ ಭಾಗವನ್ನು ಗುರುತಿಸಿ, ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವಂತೆ ಸಲಹೆ ನೀಡಿತ್ತು.
ಈ ಕಾರಣಕ್ಕೆ ಕೇರಳದಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಗುರುತಿಸಲಾಗಿದ್ದ ೧೩,೧೦೮ ಚದರ ಕಿ.ಮೀ.ಗಳಲ್ಲಿ ೩,೧೧೦ ಚದರ. ಕಿ.ಮೀ. ಗಳನ್ನು ಕೈಬಿಟ್ಟು ಕೇವಲ ೯,೯೯೪ ಚದರ ಕಿ.ಮೀ.ಗಳನ್ನು ಮಾತ್ರ ಉಳಿಸಿ ಕೊಂಡಿದೆ. ಇದರಲ್ಲಿ ೯,೧೦೭ ಚದರ. ಕಿ.ಮೀ. ಪ್ರದೇಶ ಸಂರಕ್ಷಿತ ಅರಣ್ಯ ಮತ್ತು ವನ್ಯ ಜೀವಿ ಅಭಯಾರಣ್ಯವಾಗಿದೆ. ಆದುದರಿಂದ ೨೦,೬೬೮ ಚದರ ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಹೊಂದಿರುವ ಕರ್ನಾಟಕವೂ ಇದೇ ಮಾದರಿಯನ್ನು ಅನುಸರಿಸಬೇಕು ಎಂದು ಭಾಕಿಸಂ ಸಲಹೆ ನೀಡಿದೆ.
ಆದರೆ ಕರ್ನಾಟಕದ ಜನಪ್ರತಿನಿಧಿಗಳು ಪ್ರತಿ ಬಾರಿ ಗಜೆಟ್ ಪ್ರಕಟಣೆ ಹೊರಡಿಸಿದಾಗಲೂ ರಾಜ್ಯ ಸರಕಾರ ಕೇರಳ ರಾಜ್ಯಕ್ಕಿಂತಲೂ ಉತ್ತಮ ವರದಿ ನೀಡುವುದಾಗಿ ಕೊಚ್ಚಿಕೊಂಡು, ಮಂತ್ರಿಗಳ ನೇತೃತ್ವದ ಸದನ ಸಮಿತಿ ರಚಿಸಿ, ಈ ವರದಿಯಲ್ಲಿ ತಿಳಿಸಲಾದ ಗ್ರಾಮಗಳ ವ್ಯಾಪ್ತಿಯಲ್ಲಿ ಅರ್ಧ-ಒಂದು ಗಂಟೆಯ ಸಭೆ ನಡೆಸಿ, ಪ್ರತೀ ಗ್ರಾಮದಲ್ಲೂ ವರದಿಗೆ ಜನರ ವಿರೋಧ ವಿರುವುದರಿಂದ ಪ್ರಸ್ತಾಪ ಕೈ ಬಿಡುವಂತೆ ಶಿಫಾರಸ್ಸು ಮಾಡುತ್ತೇವೆ ಎಂದು ಕೇವಲ ರಾಜಕೀಯ ಆಶ್ವಾಸನೆ ನೀಡಿ, ಸರಕಾರಕ್ಕೆ ‘ವರದಿ ಜಾರಿಗೆ ಜನರ ವಿರೋಧವಿದೆ’ ಎಂಬ ಒಂದೆರಡು ಪುಟಗಳ ಉತ್ತರ ನೀಡಿ ಕೈತೊಳೆದು ಕೊಂಡಿತ್ತು.
ಆದರೂ ಸಹಾ ರಾಜ್ಯ ಸರಕಾರದ ಅಧಿಕಾರಿಗಳು ಕೇಂದ್ರಕ್ಕೆ ಪತ್ರ ಬರೆದು ವರದಿ ಜಾರಿಗೆ ಕರ್ನಾಟಕ ಸರ್ಕಾರದ ಒಪ್ಪಿಗೆ ಇದೆ ಎಂಬ ಉತ್ತರ ನೀಡಿರುವುದು ವಿಧಾನ ಸಭಾ ಕಲಾಪದಿಂದ ತಿಳಿದು ಬಂದಿದೆ. ಹೀಗಾಗಿ ಈ ಬಾರಿಯೂ ಇದೇ ರೀತಿಯ ಇನ್ನೊಂದು ದೊಂಬರಾಟ ಆಗದಿರಲಿ ಎಂದು ಭಾಕಿಸಂ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಆತಂಕ ವ್ಯಕ್ತಪಡಿಸಿದ್ದಾರೆ.