ವಿಶ್ವಕರ್ಮ ಸಮಾಜವನ್ನು ಎಸ್ಟಿಗೆ ಸೇರಿಸಲು ಹೋರಾಟ: ವಿಶ್ವಕರ್ಮ ಮಹಾಸಭಾ

ಉಡುಪಿ : ಪ್ರಸ್ತುತ ಹಿಂದುಳಿದ ವರ್ಗದ ೨ ಎ ವರ್ಗದಲ್ಲಿರುವ ವಿಶ್ವಕರ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂಬುದು ನಮ್ಮ ಮುಖ್ಯ ಬೇಡಿಕೆಯಾಗಿದ್ದು, ಈ ಹೋರಾಟದಲ್ಲಿ ಸಮಾಜದ ೪೨ ಪಂಗಡಗಳ ಪೈಕಿ ೪೦ ಪಂಗಡಗಳು ಮುಂಚೂಣಿಯಲ್ಲಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಉಡುಪಿ ಜಿಲ್ಲಾಧ್ಯಕ್ಷ ನೇರಂಬಳ್ಳಿ ರಮೇಶ್ ಆಚಾರ್ಯ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೭೫ ವರ್ಷಗಳಿಂದಲೂ ವಿಶ್ವಕರ್ಮ ಸಮಾಜ ಸರಕಾರವು ಗುರುತಿಸಿರುವ ಹಿಂದುಳಿದ ವರ್ಗದ ೨ ಎ ವರ್ಗದ ಶೇ.೧೫ ಮೀಸಲಾತಿಯಲ್ಲಿನ ಗುಂಪಿನಲ್ಲಿ ಇದೆ. ಹಿಂದುಳಿದವರ್ಗದಲ್ಲಿರುವ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜ ಕೀಯವಾಗಿ ಮುಂದುವರೆದಿರುವ ಸಮಾಜಗಳೊಂದಿಗೆ ಸ್ಪರ್ಧೆ ನೀಡಲಾರದೆ ನಮ್ಮ ಸಮಾಜ ಸೋತು ಅಬಿವೃದ್ಧಿ ವಂಚಿತವಾಗಿದೆ. ವಿಶ್ವಕರ್ಮ ಸಮಾಜ ದೇಶಕ್ಕೆ ಅಪಾರ ಕೊಡುಗೆ ಕೊಟ್ಟಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದರು.
ನಮ್ಮ ಸಮಾಜವನ್ನು ಕುಲಶಾಸ್ತ್ರ ಅಧ್ಯಯನ ಮಾಡಿಸದೆ ಮೂಲವನ್ನು ತಿಳಿಯದೇ ಸರಕಾರ ಮೀಸಲಾತಿ ವರ್ಗಗಳ ೨ ಎ ಗುಂಪಿನಲ್ಲಿ ಸೇರಿಸಿದೆ. ಇದನ್ನು ಮನಗಂಡು ಸಮಾಜದ ಮುಖಂಡ ಕೆ.ಪಿ.ನಂಜುಂಡಿ ಸಮಾಜದ ಕುಲಶಾಸ್ತ್ರ ಅಧ್ಯಯನ ನಡೆಸಲು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ. ಅದೇ ರೀತಿ ಅದಕ್ಕೆ ಮುಖ್ಯಮಂತ್ರಿ ಕೂಡ ಒಪ್ಪಿದ್ದಾರೆ.
ಈ ನಿಟ್ಟಿನಲ್ಲಿ ಸಮಾಜದ ಮುಖಂಡರಿಗೆ ಹಾಗೂ ಯುವ ಸಮುದಾಯಕ್ಕೆ ಮೀಸಲಾತಿ ವರ್ಗಗಳ ಬಗ್ಗೆ ಮಾಹಿತಿ ತಿಳಿಸಿ ಜಾಗೃತಿ ಮೂಡಿಸಲು ಜು.೩೧ ರಂದು ಮಧ್ಯಾಹ್ನ ೨ಗಂಟೆಗೆ ಬೆಂಗಳೂರಿನ ಶಾಸಕರ ಭವನದಲ್ಲಿ ಕಾರ್ಯಾಗಾರ ವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಹಿಂದುಳಿದವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್ ಭಾಗವಹಿಸಲಿರುವರು. ಇದರಲ್ಲಿ ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮುಖಂಡರು ಭಾಗವಹಿಸಲಿರುವರು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬೈಂದೂರು ಸಂಘದ ಅಧ್ಯಕ್ಷ ನಾರಾಯಣ ಆಚಾರ್ಯ, ಕೋಟ ಹೋಬಳಿ ಅಧ್ಯಕ್ಷ ರೋಶನ್ ಆಚಾರ್ಯ, ಗಂಗಾಧರ ಆಚಾರ್ಯ, ರಾಮಕೃಷ್ಣ ಆಚಾರ್ಯ, ಅನಂತ ಆಚಾರ್ಯ ಬಂಡಿಮಠ ಉಪಸ್ಥಿತರಿದ್ದರು.







