ಉಪರಾಷ್ಟ್ರಪತಿ ಸ್ಥಾನಕ್ಕೂ ಮಹಿಳೆಯರನ್ನೇ ಆಯ್ಕೆ ಮಾಡುವ ಮೂಲಕ ಇತಿಹಾಸ ನಿರ್ಮಿಸಬೇಕು: ಮೋಟಮ್ಮ

ಬೆಂಗಳೂರು, ಜು.27: ನಮ್ಮ ರಾಜ್ಯದವರೇ ಆದ ನುರಿತ ಹಾಗೂ ಮುತ್ಸದಿ ನಾಯಕಿ ಮಾರ್ಗರೇಟ್ ಆಳ್ವ ದೇಶದ ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ದೇಶದ ರಾಷ್ಟ್ರಪತಿಯಾಗಿ ದೌಪದಿ ಮುರ್ಮು ಆಯ್ಕೆಯಾಗಿದ್ದು, ಉಪರಾಷ್ಟ್ರಪತಿ ಸ್ಥಾನಕ್ಕೂ ಮಹಿಳೆಯರನ್ನೆ ಆಯ್ಕೆ ಮಾಡಿ ಇತಿಹಾಸ ನಿರ್ಮಿಸಬೇಕು ಎಂಬುದು ನಮ್ಮ ಆಶಯ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷ ಕೂಡ ಮಾರ್ಗರೇಟ್ ಆಳ್ವ ಅವರಿಗೆ ಬೆಂಬಲಿಸಿ ಒಮ್ಮತದಿಂದ ಆಯ್ಕೆ ಮಾಡಬಹುದಿತ್ತು ಎಂದರು.
ಇನ್ನು ಕಾಲ ಮಿಂಚಿಲ್ಲ, ಇನ್ನಾದರೂ ಸರಿಯಾದ ತೀರ್ಮಾನ ಕೈಗೊಂಡು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮಾರ್ಗರೇಟ್ ಆಳ್ವ ಅವರಿಗೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ದ್ವಿತೀಯ ಪ್ರಾಶಸ್ತ್ಯ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಎಲ್ಲ ಸಂಸದರಿಗೆ ಮನವಿ ಮಾಡುತ್ತೇವೆ ಎಂದು ಮೋಟಮ್ಮ ಹೇಳಿದರು.
ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಮಾತನಾಡಿ, ರಾಜ್ಯದ ಹೆಣ್ಣುಮಗಳು ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿರುವುದೇ ಹೆಮ್ಮೆಯ ವಿಚಾರ, ಅವರ ಸುದೀರ್ಘ ಸೇವೆ ನಂತರ ಅವರಿಗೆ ಈ ಅವಕಾಶ ಸಿಕ್ಕಿದ್ದು, ಎಲ್ಲ ಸಂಸದರು ಮಾರ್ಗರೇಟ್ ಬೆಂಬಲಿಸಬೇಕು ಎಂದು ಕೋರಿದರು.
ದೇಶ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಸ್ಥಾನದಲ್ಲಿ ಮಹಿಳೆಯರು ಆಯ್ಕೆಯಾಗಿ ದೇಶವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಬೇಕು. ಆ ಸಾಮಥ್ರ್ಯ ಇವರಿಗೆ ಇದೆ ಎಂದು ನಂಬಿದ್ದೇವೆ. ಹೀಗಾಗಿ ಮಾರ್ಗರೇಟ್ ಆಳ್ವ ಅವರಿಗೆ ಬೆಂಬಲಿಸಿ ಇತಿಹಾಸ ಬರೆಯಬೇಕು ಎಂದು ಅವರು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವೆ ರಾಣಿ ಸತೀಶ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್, ಮಾಜಿ ಅಧ್ಯಕ್ಷೆ ಮಂಜುಳಾ ನಾಯ್ಡು, ಜಲಜಾ ನಾಯಕ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.







