'ಯಾರ್ರೀ ಅದು ತೇಜಸ್ವಿ ಸೂರ್ಯ?': ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ಮೈಸೂರು,ಜು.28: ಯಾರ್ರೀ ಅದು ತೇಜಸ್ವಿ ಸೂರ್ಯ, ಬೆಂಗಳೂರಿಗೆ ಅವರು ಏನು ಕೊಡುಗೆ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರ್ರೀ ತೇಜಸ್ವಿ ಸೂರ್ಯ, ಬೆಂಗಳೂರಿಗೆ ಅವರ ಕೊಡುಗೆ ಏನು? ಜನ ಏನೋ ಆಯ್ಕೆ ಮಾಡಿದ್ದಾರೆ. ಹಾಗಾಗಿ ನಾವು ಸಹಿಸಿಕೊಂಡಿರಬೇಕು ಎಂದು ಹೇಳಿದರು.
ಸಾಮಾನ್ಯ ಜನರಿಗೆ ರಕ್ಷಣೆ ನೀಡಲು ಸಾಧ್ಯವಾಗದಿದ್ದರೆ ಸರ್ಕಾರವನ್ನು ಏಕೆ ನಡೆಸುತ್ತಿದ್ದೀರಿ, ಪ್ರತಿ ಕುಟುಂಬಕ್ಕೆ ಮತ್ತು ಶಾಲೆಗೆ ಹೋಗುವ ಮಕ್ಕಳಿಗೆ ಗನ್ ಮ್ಯಾನ್ ಕೊಡಬೇಡಿ, ಶಾಂತಿ ಕೊಡಿ ಎಂದಷ್ಟೇ ನಿಮ್ಮನ್ನು ಕೇಳುತ್ತಿರುವುದ. ತಮ್ಮ ಹೇಳಿಕೆಗಳನ್ನು ನೀಡುವಾಗ ಎಚ್ಚರಿಕೆಯಿಂದ ನೀಡಬೇಕು, ಸುಮ್ಮನೆ ಬಾಯಿಗೆ ಬಂದಹಾಗೆ ಹೇಳಿಕೆಗಳನ್ನು ನೀಡುವುದಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಧರ್ಮ -ಧರ್ಮಗಳ ನಡುವೆ ಘರ್ಷಣೆ ಉಂಟು ಮಾಡುವುದು ಬಿಜೆಪಿಯವರಿಗೆ ಒಳ್ಳೆಯ ರಾಜಕೀಯ ಬೆಳೆ ಇದ್ದಹಾಗೆ, ಮಂಗಳೂರಿನಲ್ಲಿ ನಡೆದಿರುವ ಘಟನೆಗಳು ಮತ ಫಸಲಿನ ಬೆಳೆ ಇದ್ದಹಾಗೆ, ಚುನಾವಣೆ ಸಂದರ್ಭದಲ್ಲಿ ಇದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಅವರಿಗೆ ಗೊತ್ತಿದೆ. ಕರ್ನಾಟದಲ್ಲಿ ಅಷ್ಟೇ ಅಲ್ಲ ದೇಶದಲ್ಲಿ ಕೂಮು ಗಲಭೆ ಸೃಷ್ಟಿಸಿ ಮತ ಪಡೆಯುವುದೇ ಇವರ ಹುನ್ನಾರವಾಗಿದೆ ಎಂದು ಕಿಡಿಕಾರಿದರು.
ಇವರ ದೃಷ್ಟಿಯಲ್ಲಿ ಜೀವಕ್ಕೆ ಬೆಲೆಯೇ ಇಲ್ಲ, ಇಂದು ಮಂಗಳೂರು, ನಿನ್ನೆ ಶಿವಮೊಗ್ಗ ಮುಂದೆ ಇನ್ನೆಲ್ಲಿ ಧರ್ಮ ಸಂಘರ್ಷ ಉಂಟು ಮಾಡುತ್ತಾರೊ ಗೊತ್ತಿಲ್ಲ, ಕಾಂಗ್ರೆಸ್ ಆಡಳಿತಾವಧಿಯಲ್ಲಿ 28 ಕೊಲೆಗಳಾಯಿತು ಎನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಎಷ್ಟು ಕೊಲೆಗಳಾಯಿತು ಎಂಬುದನ್ನು ನೋಡಿಕೊಳ್ಳಲಿ. ಇಂತಹ ಸರ್ಕಾರವನ್ನು ರಾಜ್ಯದ ಜನತೆ ಕಿತ್ತೊಗೆಯಬೇಕು ಎಂದು ಹೇಳಿದರು.
ಶಿವಮೊಗ್ಗದಲ್ಲಿ ನಡೆದ ಹತ್ಯೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಯಿತು. ಆವರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಅಸ್ತ್ರಗಳು ಬಳಕೆಯಾಗುತ್ತಿತ್ತು ಎಂದು ಸ್ವತಹ ಅವರೇ ಒಪ್ಪಿಕೊಂಡಿದ್ದಾರೆ. ಇಂತಹ ವಾತಾರಣ ಸೃಷ್ಟಿಗೆ ಯಾರು ಕಾರಣ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅರ್ಥಮಾಡಿಕೊಳ್ಳಬೇಕು, ಇವರು ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡುತ್ತಿದ್ದಾರೋ ಎಂದು ವಾಗ್ದಾಳಿ ನಡೆಸಿದರು.







