ಬೆಳ್ಳಾರೆ, ಸುಬ್ರಹ್ಮಣ್ಯ ಪಿಎಸ್ಸೈಗಳ ದಿಢೀರ್ ವರ್ಗಾವಣೆ
ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ
ಬೆಳ್ಳಾರೆ, ಜು.29: ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಪೋಲಿಸ್ ಠಾಣೆ ಪಿಎಸ್ಸೈಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶ ಹೊರಡಿಸಿದ್ದಾರೆ.
ಬೆಳ್ಳಾರೆ ಉಪ ನಿರೀಕ್ಷಕ ರುಕ್ಮ ನಾಯ್ಕ್, ಸುಬ್ರಹ್ಮಣ್ಯ ಎಸ್ಐ ಜಂಬೂರಾಜ್ ಮಹಾಜನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಬೆಳ್ಳಾರೆಯ ನೂತನ ಠಾಣಾಧಿಕಾರಿಯಾಗಿ ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್ಸೈ ಸುಹಾಸ್ ರವರನ್ನು ನೇಮಕ ಮಾಡಲಾಗಿದೆ. ಅದೇರೀತಿ ಸುಬ್ರಹ್ಮಣ್ಯ ಠಾಣಾಧಿಕಾರಿಯಾಗಿ ವಿಟ್ಲ ಠಾಣೆಯ ಪಿಎಸ್ಸೈ ಮಂಜುನಾಥ್ ಟಿ. ಅವರನ್ನು ನಿಯೋಜಿಸಿ ಆದೇಶಿಸಲಾಗಿದೆ.
ರುಕ್ಮ ನಾಯ್ಕ್, ಜಂಬೂರಾಜ್ ಮಹಾಜನ್ ಅವರನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದ್ದು, ನಿರ್ದಿಷ್ಟ ಠಾಣೆ ತೋರಿಸಿಲ್ಲ. ವಾರದ ಅವಧಿಯಲ್ಲಿ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಮತ್ತು ಕಳಂಜದಲ್ಲಿ ಮಸೂದ್ ಎಂಬ ಯುವಕನ ಕೊಲೆ ಪ್ರಕರಣ ನಡೆದಿತ್ತು. ಇದರ ಹಿನ್ನಲೆಯಲ್ಲಿ ಬೆಳ್ಳಾರೆಯಲ್ಲಿ ಪ್ರಕ್ಷುಬ್ಧ ವಾತಾರಣ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಾಗಿದೆ.