ಕೋಮು ಸಂಘರ್ಷ ನಿಷೇಧ ಕಾಯ್ದೆ ಜಾರಿ ಬಗ್ಗೆ ಚರ್ಚೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ : ಕೋಮು ಸಂಘರ್ಷ ನಿಷೇಧ ಕಾಯ್ದೆ ತರುವುದರಿಂದಲೇ ಗೂಡಾಗಿರಿ, ಮಾನವ ಹತ್ಯೆಗಳು ನಿಲ್ಲುತ್ತದೆ ಎನ್ನುವುದಾದರೆ ಈ ಕಾಯ್ದೆ ತರಲು ಯಾವ ಸಂಕೋಚವೂ ಇಲ್ಲ. ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬಹುತೇಕ ಬಿಲ್ಲವ ಜಾತಿಯ ಹಿಂದೂ ಮುಖಂಡರ ಹತ್ಯೆಗಳಾಗುತ್ತಿರುವ ಕುರಿತು ಶುಕ್ರವಾರ ಕುಂದಾಪುರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಧರ್ಮಾಂಧತೆ ಒಂದು ಜಾತಿಗೆ ಸೀಮಿತವಾಗಿ ನಿಂತಿಲ್ಲ. ಎಲ್ಲ ಜಾತಿಯ, ಹಿಂದೂತ್ವವಾದಿಗಳ ಮೇಲೆ, ಬಿಜೆಪಿ ಕಾರ್ಯಕರ್ತರ ಮೇಲೆ ಕೊಲೆ ಮಾಡುವಂತಹ ವ್ಯವಸ್ಥಿತ ಸಂಚುಗಳನ್ನು ನಾವು ನೋಡುತ್ತಿದ್ದೇವೆ. ಎಲ್ಲವನ್ನೂ ಹತ್ಯೆ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು. ಇದರ ಹಿಂದಿರುವ ತಾರ್ಕಿಕ ಭಯೋತ್ಪಾದನೆ ಬಗ್ಗೆ ಗಮನಿಸಿ ಅದರ ಮೇಲೆ ಕ್ರಮ ಕೈಗೊಳ್ಳಲಾಗು ವುದು ಎಂದರು.
ಬಿಜೆಪಿ ಯುವ ಮುಖಂಡರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾರ್ಯಕರ್ತರಿಗೆ ಕೋಪ- ನೋವಾದಾಗ ಇವೆಲ್ಲವೂ ಸಹಜ. ಅವರೆಲ್ಲರ ಆಕ್ರೋಶದ ಹಿಂದೆ ನಿಜವಾದ ಕಳಕಳಿ ಇದೆ. ನಮ್ಮದೇ ಕಾರ್ಯಕರ್ತರು, ನಮ್ಮನ್ನು ಗೆಲ್ಲಿಸಿದ್ದಾರೆ. ಕಷ್ಟಪಟ್ಟು ನಮ್ಮೊಂದಿಗೆ ಓಡಾಟ ಮಾಡಿದ್ದಾರೆ. ಅಂತವರ ಮನಸ್ಸಿಗೆ ನೋವಾದಾಗ ಆಕ್ರೋಶ ಹೊರಹಾಕುವುದು ಸಾಮಾನ್ಯ. ಇದನ್ನು ಅರ್ಥಮಾಡಿಕೊಂಡು ಕಾರ್ಯಕರ್ತರ ಹೇಳಿರುವ ವಿಚಾರದ ಬಗ್ಗೆ ಗಮನ ಕೊಡುತ್ತೇವೆ ಎಂಬ ವಿಶ್ವಾಸದ ಮಾತನ್ನು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಹಾಗೂ ಮುಖ್ಯಮಂತ್ರಿಗಳು ಹೇಳಿದ್ದಾರೆ. ಎಲ್ಲವೂ ಸರಿಯಾಗಲಿದೆ ಎಂದು ತಿಳಿಸಿದರು.
ಇಡೀ ಸರಕಾರ ಕುಳಿತು ಒಟ್ಟಾಗಿ ಕೆಲಸ ಮಾಡುತ್ತಿದೆ. ಇಂತಹ ಪರಿಸ್ಥಿತಿಯನ್ನು ನಿಯಂತ್ರಣ ಮಾಡುವುದು ಬಿಟ್ಟರೆ ಇದಕ್ಕೆ ಬೇರೆ ಮಾರ್ಗಗಳಿಲ್ಲ. ಇಂತಹ ಮಾನಸಿಕತೆ ಇರುವವರು ತಲೆ ಎತ್ತಬಾರದು ಅನ್ನುವುದಷ್ಟೇ ಗುರಿ. ಅದಕ್ಕೋಸ್ಕರ ಪೊಲೀಸ್ ಬಲ, ಇಂಟೆಲಿಜೆನ್ಸಿ ಬಲವನ್ನು ಹೆಚ್ಚು ಮಾಡುತ್ತೇವೆ. ಇಂತಹ ಘಟನೆಗಳು ಮುಂದೆ ಮರುಕಳಿಸದಂತೆ ಜಾಗೃತೆ ವಹಿಸುತ್ತೇವೆ. ನಡೆದ ಪ್ರಕರಣ ಗಳಿಗೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳ ಭೇಟಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಪ್ರತಿರೋಧವನ್ನು ಗಮನಿಸಿ ತಕ್ಷಣ ಮುಖ್ಯಮಂತ್ರಿಗಳು ಮಂಗಳೂರಿಗೆ ಭೇಟಿ ನೀಡಿ ಹೋಗಿದ್ದಾರೆ. ಹಿಂಸೆ ಯಾವ ಧರ್ಮದಲ್ಲಿ ನಡೆದರೂ ಸರಕಾರ ಅದನ್ನು ಸಹಿಸುವುದಿಲ್ಲ ಎಂದರು. ಸಂಸದ ತೇಜಸ್ವಿ ಸೂರ್ಯ ಅವರ ವೈರಲ್ ಆಡಿಯೋದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಂಸದ ತೇಜಸ್ವಿ ಸೂರ್ಯ ಏನು ಹೇಳಿದ್ದಾರೊ ನನಗೆ ಗೊತ್ತಿಲ್ಲ. ಕೇಳಿದ ಬಳಿಕ ಪ್ರತಿಕ್ರಿಯಿಸುವೆ ಎಂದು ತಿಳಿಸಿದರು.







