ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ವಾಹನಗಳ ತಪಾಸಣೆ

ಕುಂದಾಪುರ: ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆ ಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನ ತಪಾಸಣೆ, ಗಸ್ತು ಹೆಚ್ಚಿಸಲಾಗಿದೆ.
ಶನಿವಾರ ಸಂಜೆ ಕುಂದಾಪುರ ಡಿವೈಎಸ್ಪಿಶ್ರೀಕಾಂತ್ ಕೆ. ನಿರ್ದೇಶನದಲ್ಲಿ ಕುಂದಾಪುರ ವೃತ್ತನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಕುಂದಾಪುರ ನಗರ, ಗ್ರಾಮಾಂತರ ಠಾಣೆ, ಸಂಚಾರಿ ಠಾಣೆ, ಶಂಕರನಾರಾಯಣ ಹಾಗೂ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಹಾಗೂ ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಗಂಗೊಳ್ಳಿ ಠಾಣೆ, ಬೈಂದೂರು ಹಾಗು ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದರು.
ಪೊಲೀಸ್ ಚೆಕ್ಪೋಸ್ಟ್ ನಿರ್ಮಿಸಿ ಒಳ ಪ್ರವೇಶಿಸುವ ಎಲ್ಲಾ ವಾಹನಗಳನ್ನು ತಪಾಸಣೆಗೊಳಪಡಿಸಿ ಕಾರಿನ ಹಿಂಭಾಗದ ಡಿಕ್ಕಿಯನ್ನೂ ಪೊಲೀಸರು ಪರಿಶೀಲಿಸಿ ವಾಹನ ನೋಂದಣಿ ಸಂಖ್ಯೆಯನ್ನು ಕೂಡ ಬರೆದುಕೊಂಡು ಅಗತ್ಯ ಬಿದ್ದಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದರು. ಮಾತ್ರವಲ್ಲದೆ ದಾಖಲೆಗಳು ಸರಿಯಿಲ್ಲದ ವಾಹನಗಳಿಗೆ ದಂಡ ಕೂಡ ವಿಧಿಸಲಾಗಿದೆ.
ಕುಂದಾಪುರದ 5 ಕಡೆ ಚೆಕ್ಪೋಸ್ಟ್: ಕುಂದಾಪುರ ಠಾಣಾ ವ್ಯಾಪ್ತಿಯ ಕೋಡಿ, ಕುಂದಾಪುರ ಶಾಸ್ತ್ರಿ ವೃತ್ತ, ಕುಂಭಾಸಿ, ಬಸ್ರೂರು ಮೂರುಕೈ, ಸಂಗಮ್ ಜಂಕ್ಷನ್ ಬಳಿ ಚೆಕ್ಪೋಸ್ಟ್ ನಿರ್ಮಿಸಿ ಈ ತಪಾಸಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.ಕುಂದಾಪುರ ಎಸ್ಸೈ ಸದಾಶಿವ ಗವರೋಜಿ, ಕ್ರೈಮ್ ವಿಭಾಗದ ಪ್ರಸಾದ್, ಕುಂದಾಪುರ ಟ್ರಾಫಿಕ್ ಠಾಣಾ ಪಿಎಸ್ಐಗಳಾದ ಮಹೇಶ್ ಕಂಬಿ, ಸುಧಾ ಪ್ರಭು, ಎಎಸ್ಸೈ, ಸಿಬ್ಬಂದಿಗಳು ವಾಹನ ತಪಾಸಣಾ ಕಾರ್ಯಾಚರಣೆಯಲ್ಲಿದ್ದರು.