ಗೃಹರಕ್ಷಕ ದಳದ ಪಣಂಬೂರು ಘಟಕದಿಂದ ವನಮಹೋತ್ಸವ ಆಚರಣೆ

ಮಂಗಳೂರು, ಜು.31: ಗೃಹರಕ್ಷಕ ದಳದ ಪಣಂಬೂರು ಘಟಕದ ವತಿಯಿಂದ ಶ್ರೀ ನಂದನೇಶ್ವರ ದೇವಸ್ಥಾನದ ಆವರಣದಲ್ಲಿ ರವಿವಾರ ವನಮಹೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷದಲ್ಲಿ ಸುಮಾರು 1,000 ಸಸಿಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಗಿಡ ನೆಟ್ಟು ಹಸಿರು ಬೆಳೆಸಿದಲ್ಲಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಸಿಗಳನ್ನು ನೆಡುವ ಕಾರ್ಯ ಯೋಜನೆ ಸಿದ್ಧಪಡಿಸಲಾಗಿದೆ ಎಂದು ನುಡಿದರು.
ದೇವಸ್ಥಾನದ ಆವರಣದಲ್ಲಿ ಬಿಲ್ವಪತ್ರೆ ಗಿಡಗಳನ್ನು ನೆಡಲಾಯಿತು ಹಾಗೂ ಗೃಹರಕ್ಷಕರಿಗೆ ಮಾವು, ನೇರಳೆ, ಪೇರಳೆ, ಹಲಸು, ಹೆಬ್ಬಲಸು ಮುಂತಾದ ಗಿಡಗಳನ್ನು ಹಂಚಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ದೇವರುತ ಶರ್ಮ, ಪರಮೇಶ್ವರ ಭಟ್, ಸಮಿತಿಯ ಅಧ್ಯಕ್ಷ ಅನಂತ ಐತಳ್, ಪಣಂಬೂರು ಗೃಹರಕ್ಷಕ ದಳ ಘಟಕದ ನಿವೃತ್ತ ಘಟಕಾಧಿಕಾರಿ ಹರೀಶ್ ಆಚಾರ್, ಪ್ರಭಾರ ಘಟಕಾಧಿಕಾರಿ ಶಿವಪ್ಪ ನಾಯ್ಕ್ ಮತ್ತು ಪಣಂಬೂರು ಘಟಕದ ಗೃಹರಕ್ಷಕರಾದ ಗಂಗಾಧರ್ ಎಸ್.ಕೆ., ಜಗದೀಶ್, ರಾಘವೇಂದ್ರ, ಪ್ರೇಮಾ, ದಿನೇಶ್ ಮುಂತಾದವರು ಉಪಸ್ಥಿತರಿದ್ದರು.