ಮಳಲಿ ಮಸೀದಿ ಪ್ರಕರಣ: ಆಗಸ್ಟ್ 10ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ

ಬಜ್ಪೆ, ಆ.1: ನ್ಯಾಯಾಧೀಶರು ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಮಳಲಿಪೇಟೆ ಮಸೀದಿ ಪ್ರಕರಣದ ತೀರ್ಪನ್ನು ಆ.10ಕ್ಕೆ ಮುಂದೂಡಿ ನ್ಯಾಯಾಲಯವು ಆದೇಶಿಸಿದೆ.
ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ವಾದ-ಪ್ರತಿವಾದಗಳನ್ನು ಆಲಿಸಿ ತೀರ್ಪು ಕಾಯ್ದಿರಿಸಿತ್ತು. ಈ ಬೆಳವಣಿಗೆಗಳ ಮಧ್ಯೆ ಮೂರನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರು ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಪ್ರಕರಣದ ತೀರ್ಪನ್ನು ಆಗಸ್ಟ್ 10ಕ್ಕೆ ಮುಂದೂಡಿ ಆದೇಶಿಸಿದೆ.
ನ್ಯಾಯಾಧೀಶರ ವರ್ಗಾವಣೆಯ ಹಿನ್ನೆಲೆಯಲ್ಲಿ ಪ್ರಕರಣವು ಹೊಸ ಪೀಠದ ಮುಂದೆ ಬರಲಿದೆ.
ಮಸೀದಿಗೆ ಸಂಬಂಧಿಸಿದ ವಾದ-ಪ್ರತಿವಾದಗಳನ್ನು ಮೂರನೇ ಸಿವಿ ನ್ಯಾಯಾಲಯವು ಆಲಿಸಿ ತೀರ್ಪು ನೀಡುವ ಹಂತದಲ್ಲಿದ್ದಾಗ ಸ್ಥಳೀಯರಾದ ಮನೋಜ್ ಕುಮಾರ್ ಧನಂಜಯ ಮತ್ತಿತರರು ಮಳಲಿ ಮಸೀದಿ ಸಂಬಂಧಿತ ತೀರ್ಪು ಪ್ರಕಟಿಸದಂತೆ ತಡೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ರಾಜ್ಯ ಹೈಕೋರ್ಟ್, ಉಚ್ಚ ನ್ಯಾಯಾಲಯ ಆದೇಶ ನೀಡುವವರೆಗೆ ಕೆಳಗಿನ ನ್ಯಾಯಾಲಯಗಳು ತೀರ್ಪು ಪ್ರಕಟಿಸಿದಂತೆ ಆದೇಶಿಸಿತ್ತು. ಬಳಿಕದ ಬೆಳವಣಿಗೆಯಲ್ಲಿ ಸಿವಿಲ್ ನ್ಯಾಯಾಲಯ ತೀರ್ಪು ಪ್ರಕಟಿಸದಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ವಾದಿ-ಪ್ರತಿವಾದಿಗಳಿಗೆ ಸಿವಿಲ್ ನ್ಯಾಯಾಲಯವು ಇಂದು ತೀರ್ಪು ನೀಡುವ ನಿರೀಕ್ಷೆಯಿತ್ತು. ಆದರೆ ನ್ಯಾಯಾಧೀಶರ ವರ್ಗಾವಣೆ ಯಿಂದಾಗಿ ಪ್ರಕರಣದ ತನಿಖೆಯನ್ನು ಆ.10ಕ್ಕೆ ಮುಂದೂಡಿ ನ್ಯಾಯಾಲಯ ಆದೇಶ ಹೊರಡಿಸಿದೆ.







