ಸರಕಾರ ತಾರತಮ್ಯ ನೀತಿ ಕೈ ಬಿಟ್ಟು ನಿಷ್ಪಕ್ಷಪಾತ ಕ್ರಮ ಜರುಗಿಸಲಿ: ಮುಸ್ಲಿಂ ಸಂಘಟನೆಗಳ ಮುಖಂಡರ ಆಗ್ರಹ
ದ.ಕ. ಜಿಲ್ಲೆಯಲ್ಲಿ ಸರಣಿ ಹತ್ಯೆ ಪ್ರಕರಣ

ಮಂಗಳೂರು, ಆ.1: ಬೆಳ್ಳಾರೆಯ ಮಸೂದ್ ಮತ್ತು ಪ್ರವೀಣ್ ನೆಟ್ಟಾರು ಹಾಗೂ ಮಂಗಳಪೇಟೆಯ ಮುಹಮ್ಮದ್ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ತನ್ನ ತಾರತಮ್ಯ ನೀತಿಯನ್ನು ಕೈ ಬಿಟ್ಟು ನಿಷ್ಪಕ್ಷಪಾತ ಕ್ರಮ ಜರಗಿಸಬೇಕು ಎಂದು ದ.ಕ. ಜಿಲ್ಲೆಯ ವಿವಿಧ ಮುಸ್ಲಿಂ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಸಾರಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರಂಭದಲ್ಲೇ ಎಡವಿದರು. ಹತ್ಯೆಯಾದ ಪ್ರವೀಣ್ರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ. ಸರಕಾರದಿಂದ 25 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ಸಮೀಪದಲ್ಲೇ ಕೆಲವು ದಿನಗಳ ಹಿಂದೆ ದುಷ್ಕರ್ಮಿಗಳಿಂದ ಕೊಲೆಯಾದ ಮಸೂದ್ ಮನೆಗೆ ಭೇಟಿ ನೀಡದೆ, ಪರಿಹಾರದ ಚೆಕ್ ಕೂಡ ವಿತರಿಸದೆ ತಾರತಮ್ಯ ಮಾಡಿದರು. ಬೆಂಗಳೂರಿಗೆ ಹಿಂದಿರುಗಿ ಹೋಗುವಾಗ ಶಾಂತಿ ಸಭೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಮುಖ್ಯಮಂತ್ರಿ ಮೃತ ಮಸೂದ್ನ ಮನೆಗೆ ಹೋಗಿದ್ದರೆ ಶಾಂತಿ ಸಭೆಯ ಅಗತ್ಯವೇ ಇರಲಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣಬೇಕಿದ್ದ ಮುಖ್ಯಮಂತ್ರಿಯ ತಾರತಮ್ಯ ನೀತಿಯನ್ನು ಖಂಡಿಸಿ ಮುಸ್ಲಿಂ ಸಂಘಟನೆಗಳು ಜಿಲ್ಲಾಡಳಿತ ಕರೆದಿದ್ದ ಶಾಂತಿ ಸಭೆಯನ್ನು ಬಹಿಷ್ಕರಿಸುವುದು ಅನಿವಾರ್ಯವಾಯಿತು ಎಂದು ಹೇಳಿದರು.
ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಮಾತನಾಡಿ ಮುಖ್ಯಮಂತ್ರಿಯ ತಾರತಮ್ಯ ನೀತಿಯನ್ನು ಸಹಿಸಲು ಸಾಧ್ಯವಿಲ್ಲ. ಈ ಸರಣಿ ಕೊಲೆಗಳ ಹಿಂದೆ ದುಷ್ಟಶಕ್ತಿಗಳ ಕೈವಾಡವಿದೆ. ಹಾಗಾಗಿ ಮೂರೂ ಕೊಲೆ ಪ್ರಕರಣವನ್ನು ಎನ್ಐಎ ತನಿಖಾ ಸಂಸ್ಥೆಗೆ ಒಪ್ಪಿಸಬೇಕು. ಪ್ರಕರಣದಲ್ಲಿ ಅಮಾಯಕರನ್ನು ಸಿಲುಕಿಸದೆ ನೈಜ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ನ ರಾಜ್ಯ ಉಪಾಧ್ಯಕ್ಷ ಮುಮ್ತಾಝ್ ಅಲಿ ಮಾತನಾಡಿ ಮಂಗಳೂರು ಗೋಲಿಬಾರ್ನಲ್ಲಿ ಮೃತಪಟ್ಟ ಇಬ್ಬರ ಕುಟುಂಬಕ್ಕೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಪರಿಹಾರ ಧನ ಘೋಷಿಸಿ ಬಳಿಕ ಮಾತು ತಪ್ಪಿದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಣಿ ಹತ್ಯೆಯ ಪೈಕಿ ಪ್ರವೀಣ್ಗೆ ಮಾತ್ರ ಪರಿಹಾರ ಧನ ಘೋಷಿಸಿ ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಅನ್ಯಾಯ ಎಸಗಿರುವುದು ಖಂಡನೀಯ ಎಂದರು.
ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಮುಖಂಡ ಮುಹಮ್ಮದ್ ಕುಂಞಿ ಮಾತನಾಡಿ ಜಿಲ್ಲೆಯ ಹಿಂದೂ ಮುಸ್ಲಿಮರು ಅನ್ಯೋನ್ಯತೆಯಿಂದಿದ್ದಾರೆ. ಆದರೆ ಕೆಲವು ಶಕ್ತಿಗಳು ಈ ಸಮುದಾಯದ ಮಧ್ಯೆ ಭಿನ್ನತೆ ಸೃಷ್ಟಿಸುತ್ತಿದೆ. ರಾಜ್ಯ ಸರಕಾರ ಈ ಶಕ್ತಿಗಳಿಗೆ ಪ್ರೋತ್ಸಾಹ ನೀಡದೆ ನಿಷ್ಪಕ್ಷಪಾತ ಕ್ರಮ ಕೈಗೊಳ್ಳಬೇಕು. ಸಚಿವರೊಬ್ಬರು ‘ಎನ್ಕೌಂಟರ್’ ಮಾಡುವುದಾಗಿ ಅಸಂಬದ್ಧ ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
*ಪ್ರವೀಣ್ ನೆಟ್ಟಾರು ಶವ ಮೆರವಣಿಗೆಯ ಸಂದರ್ಭ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಮುಸ್ಲಿಮರ ಆರಾಧನಾ ಕೇಂದ್ರ, ಆಸ್ತಿ, ವಾಹನಗಳಿಗೆ ಹಾನಿಗೊಳಿಸಲಾಗಿದೆ. ಮುಸ್ಲಿಂ ಸಮುದಾಯವನ್ನೂ ತೇಜೋವಧೆ ಮಾಡಲಾಗಿದೆ. ಮಸೂದ್ ಮತ್ತು ಫಾಝಿಲ್ ಕೊಲೆಯ ಬಳಿಕ ಮುಸ್ಲಿಂ ಸಮುದಾಯವು ಎಲ್ಲಾ ಸಂದರ್ಭಗಳಲ್ಲೂ ಸಂಯಮ ಪಾಲಿಸಿದೆ ಎಂದ ಮುಸ್ಲಿಂ ಮುಖಂಡರು ‘ಕೆಲವು ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಸರಣಿ ಹತ್ಯೆ ಕೃತ್ಯಗಳಿಗೆ ಸಂಬಂಧಿಸಿದಂತೆ ಪಕ್ಷಪಾತ ನೀತಿ ಅನುಸರಿಸಿದೆ’ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಸೆಸ್ಸೆಫ್ ನಾಯಕ ಯಾಕೂಬ್ ಸಅದಿ ನಾವೂರು, ಮುಸ್ಲಿಂ ಲೀಗ್ ನಾಯಕ ತಬೂಕ್ ದಾರಿಮಿ, ಎಸ್ಕೆಎಸ್ಎಂ ನಾಯಕ ಬಶೀರ್ ಶಾಲಿಮಾರ್, ಎಸ್ವೈಎಸ್ ನಾಯಕ ಅಶ್ರಫ್ ಕಿನಾರ, ಕರ್ನಾಟಕ ಮುಸ್ಲಿಂ ಜಮಾಅತ್ನ ನಾಸಿರ್ ಲಕ್ಕಿಸ್ಟಾರ್, ಎಸ್ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್, ಪಿಎಫ್ಐ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್, ವೆಲ್ಫೇರ್ ಪಾರ್ಟ ಆಫ್ ಇಂಡಿಯಾದ ಮುಖಂಡ ಅಡ್ವಕೇಟ್ ಸರ್ಫ್ರಾಝ್, ಮಂಗಳಪೇಟೆ ಮಸೀದಿಯ ಅಧ್ಯಕ್ಷ ಹಸನಬ್ಬ ಮಂಗಳಪೇಟೆ, ಮುಸ್ಲಿಂ ಐಕ್ಯತಾ ವೇದಿಕೆಯ ಅಶ್ರಫ್ ಬದ್ರಿಯಾ, ಯಾಸೀನ್ ಕುದ್ರೋಳಿ, ಸುಳ್ಯ ಮಸೀದಿಯ ಅಧ್ಯಕ್ಷ ಮುಸ್ತಫಾ ಸುಳ್ಯ, ಮಾಜಿ ಕಾರ್ಪೊರೇಟರ್ ಅಬೂಬಕರ್ ಕುದ್ರೋಳಿ, ಹಾರಿಸ್ ಬೈಕಂಪಾಡಿ, ಜಲೀಲ್ ಕೃಷ್ಣಾಪುರ, ಅದ್ದು ಕೃಷ್ಣಾಪುರ, ಸುಳ್ಯ ಸಂಯುಕ್ತ ಜಮಾಅತ್ನ ಇಬ್ರಾಹೀಂ ಹಾಜಿ ಸುಳ್ಯ, ಇಕ್ಬಾಲ್ ಸುಳ್ಯ, ಕೆ.ಎಸ್. ಉಮರ್ ಮತ್ತಿತರರು ಉಪಸ್ಥಿತರಿದ್ದರು.









