ಕೋಮುವಾದ ಕಾರ್ಮಿಕ ವರ್ಗದ ಶತ್ರು: ಸುರೇಶ್ ಕಲ್ಲಾಗರ್
ಕುಂದಾಪುರ ಸಿಐಟಿಯು ತಾಲೂಕು ಸಮ್ಮೇಳನ ಉದ್ಘಾಟನೆ
![ಕೋಮುವಾದ ಕಾರ್ಮಿಕ ವರ್ಗದ ಶತ್ರು: ಸುರೇಶ್ ಕಲ್ಲಾಗರ್ ಕೋಮುವಾದ ಕಾರ್ಮಿಕ ವರ್ಗದ ಶತ್ರು: ಸುರೇಶ್ ಕಲ್ಲಾಗರ್](https://www.varthabharati.in/sites/default/files/images/articles/2022/08/1/344419-1659372572.jpg)
ಕುಂದಾಪುರ: ಸರಕಾರ ತಮ್ಮ ಆಡಳಿತ ವೈಫಲ್ಯಗಳನ್ನು ಮರೆಮಾಚಲು ಕೋಮುವಾದ, ಮತೀಯವಾದ ಹರಿಯ ಬಿಡುತ್ತಿದೆ. ಇಂತಹ ಕುತಂತ್ರ ರಾಜಕೀಯಕ್ಕೆ ಕಾರ್ಮಿಕರು ಬಲಿಯಾಗದೇ ಜಾಗ್ರತವಾಗಿರಬೇಕು. ಕೋಮುವಾದ ಕಾರ್ಮಿಕ ವರ್ಗದ ಶತ್ರುವಾಗಿದೆ ಎಂದು ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.
ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ಕಾಂ.ಶಾರದ ವೇದಿಕೆಯಲ್ಲಿ ರವಿವಾರ ನಡೆದ ಸಿಐಟಿಯು ಕುಂದಾಪುರ ತಾಲೂಕು ಐದನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಐಕ್ಯತೆ ಮತ್ತು ಹೋರಾಟದ ಗುರಿಯೊಂದಿಗೆ ಸ್ಥಾಪನೆಗೊಂಡ ಸಿಐಟಿಯು ಸಂಘಟನೆ ಕಾರ್ಮಿಕರಲ್ಲಿ ಸಾಮರಸ್ಯ ಬೆಳೆಸುವ ಕೆಲಸ ಮಾಡುತ್ತಿದೆ.ಸರಕಾರ ಕಾರ್ಮಿಕರ ಕಾನೂನು ತಿದ್ದುಪಡಿ, ಬೆಲೆ ಏರಿಕೆಯ ಶೋಷಣೆ ಹಾಗೂ ಸ್ಕೀಂ ನೌಕರರಾದ ಬಿಸಿಯೂಟ ನೌಕರರನ್ನು ದುಡಿಸಿ ಕಳೆದ 3 ತಿಂಗಳಿಂದ ಸರ್ಕಾರ ಗೌರವಧನ ಹಾಗೂ ಹೆಚ್ಚಳವಾದ 1000 ರೂ. ಬಿಡುಗಡೆ ಮಾಡದೇ ಶೋಷಣೆ ಮಾಡುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್ ಮಾತನಾಡಿ, ಕಾರ್ಮಿಕ ವರ್ಗ ತಮ್ಮ ಸಂಘಟನೆ ಮತ್ತು ಹೋರಾಟ ಬಲಗೊಳಿಸಲು ಪ್ರತಿ ಮೂರು ವರ್ಷಗಳಿಗೊಮ್ಮೆ ಸಮ್ಮೇಳನ ನಡೆಸುತ್ತದೆ. ಆ.೨೮ರಂದು ಬ್ರಹ್ಮಾವರ ದಲ್ಲಿ ಜಿಲ್ಲಾ ಸಮ್ಮೇಳನ, ೨೦೨೨ ನವೆಂಬರ್ನಲ್ಲಿ ಮೂರು ದಿನಗಳ ಕಾಲ ಕುಂದಾಪುರದಲ್ಲಿ ರಾಜ್ಯ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಸಮ್ಮೇಳನದ ಧ್ವಜಾರೋಹಣ ಕಾರ್ಮಿಕ ಮುಖಂಡ ಮಹಾಬಲ ವಡೇರ ಹೋಬಳಿ ನೆರವೇರಿಸಿದರು. ಕೃಷಿಕೂಲಿಕಾರರ ಸಂಘದ ಜಿಲ್ಲಾ ಮುಖಂಡ ವೆಂಕಟೇಶ್ ಕೋಣಿ, ಅಕ್ಷರದಾಸೋಹ ನೌಕರರ ಸಂಘದ ಜಯಶ್ರೀ, ಅಂಗನ ವಾಡಿ ನೌಕರರ ಸಂಘದ ಆಶಾಲತಾ ಶೆಟ್ಟಿ, ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ರಮೇಶ್ ವಿ. ಉಪಸ್ಥಿತರಿದ್ದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಬಲ್ಕೀಸ್ ವಹಿಸಿದ್ದರು. ಸಿಐಟಿಯು ಸಂಚಲನ ಸಮಿತಿ ಸಂಚಾಲಕ ಎಚ್.ನರಸಿಂಹ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಸಮ್ಮೇಳನವು ನೂತನ ಸಮಿತಿ ಆಯ್ಕೆ ಮಾಡಲಾಯಿತು. ಚಂದ್ರಶೇಖರ ವಿ. ಸಂಚಾಲಕರಾಗಿ ೧೫ ಮಂದಿಯ ಸಮಿತಿಯನ್ನು ಸಮ್ಮೇಳನ ಆಯ್ಕೆ ಮಾಡಲಾಯಿತು.
ಬಾಕ್ಸ್ ಮಾಡಿ...
ಸಮ್ಮೇಳನದ ನಿರ್ಣಯಗಳು
ಕೃಷಿ ಹಾಗೂ ಕಾರ್ಮಿಕ ಸಂಹಿತೆಗಳ ವಾಪಾಸ್ಸು ಪಡೆಯಲು, ಸ್ಕೀಂ ನೌಕರರಾದ ಅಕ್ಷರ ದಾಸೋಹ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆ ಯರನ್ನು ಖಾಯಂಗೊಳಿಸಲು, ರಿಕ್ಷಾ ಚಾಲಕರ ಭದ್ರತಾ ಮಂಡಳಿಗೆ ಅನುದಾನ ಶೀಘ್ರ ಬಿಡುಗಡೆಗೆ, ಹಂಚು ಉದ್ಯಮಕ್ಕೆ ಪ್ರೋತ್ಸಾಹ, ಕಾರ್ಮಿಕರಿಗೆ ಪರ್ಯಾಯ ಉದ್ಯೋಗಕ್ಕಾಗಿ ನಿರ್ಣಯ ಮಂಡಿಸಲಾಯಿತು.