ಬೈಂದೂರಿನಲ್ಲಿ ಮೇಘಸ್ಪೋಟ: 30 ಮನೆಗಳ 150ಕ್ಕೂ ಅಧಿಕ ಮಂದಿಯ ರಕ್ಷಣೆ
ಸಮುದ್ರಕ್ಕೆ ಕೊಚ್ಚಿ ಹೋದ 40ಕ್ಕೂ ಅಧಿಕ ನಾಡದೋಣಿ, ಕೋಟ್ಯಂತರ ರೂ. ನಷ್ಟ
![ಬೈಂದೂರಿನಲ್ಲಿ ಮೇಘಸ್ಪೋಟ: 30 ಮನೆಗಳ 150ಕ್ಕೂ ಅಧಿಕ ಮಂದಿಯ ರಕ್ಷಣೆ ಬೈಂದೂರಿನಲ್ಲಿ ಮೇಘಸ್ಪೋಟ: 30 ಮನೆಗಳ 150ಕ್ಕೂ ಅಧಿಕ ಮಂದಿಯ ರಕ್ಷಣೆ](https://www.varthabharati.in/sites/default/files/images/articles/2022/08/2/344482-1659440396.jpeg)
ಕುಂದಾಪುರ: ಮಂಗಳವಾರ ಮುಂಜಾನೆ ಸಂಭವಿಸಿದ ಮೇಘಸ್ಪೋಟದಿಂದಾಗಿ ಬೈಂದೂರು ತಾಲೂಕಿನ ಶಿರೂರು ಬಹುತೇಕ ಜಲಾವೃತಗೊಂಡಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಒತ್ತಿನೆಣೆ ಪರಿಸರದಲ್ಲಿ ಮೇಘಸ್ಪೋಟಗೊಂಡ ಪರಿಣಾಮ ಹೊಳೆಗಳು ಕೂಡ ತುಂಬಿದ್ದು ಏಕಾಏಕಿ ನೀರು ಏರಿದ ಪರಿಣಾಮ ಪೇಟೆ, ಕೆಸರಕೋಡಿ, ಹಡವಿನಕೋಣೆ, ಕುಂಬಾರಕೇರಿ, ಪಡುವರಿ, ಬಹುತೇಕ ಭಾಗಗಳು ಜಲಾವೃತಗೊಂಡಿವೆ.
ಶಿರೂರಿನ ಕುಂಬಾರಕೇರಿಯಲ್ಲಿ ಎರಡು ಮನೆ ಕುಸಿದಿದೆ, ಕಳಿಹಿತ್ಲುನಲ್ಲಿ ದೋಣಿಗಳು ನಾಪತ್ತೆಯಾಗಿವೆ, ಹಡವಿನಕೋಣೆಯಲ್ಲಿ ಮೂವತ್ತಕ್ಕೂ ಅಧಿಕ ದೋಣಿ ಹೊಸ ಬಲೆಗಳು ಸಮುದ್ರ ಪಾಲಾಗಿದ್ದು ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ. ಕಡಲಿನಲ್ಲಿ ತೇಲಿ ಬರುತ್ತಿರುವ ದೋಣಿಗಳನ್ನು 500ಕ್ಕೂ ಅಧಿಕ ಮೀನುಗಾರರು ಕ್ರೇನ್ ಹಾಗೂ ರೋಪ್ ಬಳಸಿ ಮೇಲಕ್ಕೆತ್ತುವ ಯತ್ನ ಮಾಡುತ್ತಿದ್ದಾರೆ. ದೋಣಿಗಳು ಹಾನಿಗೀಡಾಗಿದ್ದು ಬಲೆ, ಎಂಜಿನ್, ಜಿಪಿಎಸ್, ವೈರ್ ಲೆಸ್ ಸಮುದ್ರದಲ್ಲಿ ಕೊಚ್ಚಿಹೋಗಿವೆ.
ಶಿರೂರು ಭಾಗದಲ್ಲಿ ಇಪ್ಪತ್ತೈದಕ್ಕೂ ಅಧಿಕ ಮನೆ ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿದ್ದು ಗೃಹೋಪಯೋಗಿ ವಸ್ತುಗಳು ಚೆಲ್ಲಾಪಿಲ್ಲಿಯಾದ ಪರಿಣಾಮ ಮನೆಮಂದಿ ಕಂಗಾಲಾಗಿದ್ದಾರೆ. ಅಗ್ನಿಶಾಮಕದಳದ ದೋಣಿ ಬಳಸಲಾಗಿದ್ದು, 30 ಮನೆಗಳ 150ಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದ್ದು ಮೂರು ಕಡೆ ಕಾಳಜಿ ಕೇಂದ್ರ ತೆರೆಯಲಾಗಿದೆ.
ನೆರೆ ಬಂದು ಹಾನಿಗೀಡಾದ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಭೇಟಿ ನೀಡಿದ್ದು ತಕ್ಷಣದಿಂದ ಸುರಕ್ಷತಾ ಕ್ರಮ ಮತ್ತು ಮುಂಜಾಗ್ರತೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದು ಸಂತ್ರಸ್ಥರಿಗೆ ಜಿಲ್ಲಾಡಳಿತದಿಂದ ಸಹಾಯ ನೀಡುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ತಹಶಿಲ್ದಾರ್ ಕಿರಣ್ ಗೌರಯ್ಯ, ಜಿ.ಪಂ.ಮಾಜಿ ಅಧ್ಯಕ್ಷ ರಾಜು ಪೂಜಾರಿ, ಗ್ರಾ.ಪಂ.ಅಧ್ಯಕ್ಷೆ ದಿಲ್ ಶಾದ್ ಬೇಗಂ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ,ಗ್ರಾ.ಪಂ.ಸದಸ್ಯರು, ಕಂದಾಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿ ನಿಬಾಯಿಸಿದರು.
ಗಂಗೊಳ್ಳಿ 24*7 ಆಪತ್ಬಾಂಧವ ಅಂಬುಲೆನ್ಸ್ ನಿರ್ವಾಹಕ ಇಬ್ರಾಹಿಂ ಗಂಗೊಳ್ಳಿ, ತಂಡದ ಸದಸ್ಯರಾದ ನದೀಮ್, ಫೈರೋಝ್, ನತಹರ್, ತಾಝೀಮ್ ಬೆಳಿಗ್ಗೆ 6.30ರಿಂದ ಶಿರೂರು ಭಾಗದಲ್ಲಿ ಅಧಿಕಾರಿಗಳೊಂದಿಗಿದ್ದು ರಕ್ಷಣಾ ಕಾರ್ಯಾಚರಣೆ, ಜನರ ಸ್ಥಳಾಂತರದಲ್ಲಿ ಸಹಕಾರ ನೀಡಿದರು.