‘ಬಿಡುಗಡೆ’ ಕಥಾ ಸಂಕಲನಕ್ಕೆ ಕಥಾಯಜ್ಞ ರಾಷ್ಟ್ರೀಯ ಕಥಾ ಪುರಸ್ಕಾರ

ಮಂಗಳೂರು, ಆ.2 : ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ ಕಥಾಯಜ್ಞ ರಾಷ್ಟ್ರೀಯ ಕಥಾ ಪುರಸ್ಕಾರಕ್ಕೆ ಹಿರಿಯ ಕಥೆಗಾರ ಬೆಂಗಳೂರಿನ ಪದ್ಮನಾಭನಗರದ ಎಎನ್ ಪ್ರಸನ್ನ ಅವರ ’ಬಿಡುಗಡೆ’ ಕಥಾಸಂಕಲನವು ಆಯ್ಕೆಯಾಗಿದೆ.
ಕಥಾ ಪುರಸ್ಕಾರವು 25 ಸಾವಿರ ರೂ.ನಗದು, ಪದಕ, ಪ್ರಶಸ್ತಿ ಫಲಕ ಮತ್ತು ಸನ್ಮಾನಗಳನ್ನು ಒಳಗೊಂಡಿದೆ. ಆ.೨೬ರಂದು ಮಂಗಳೂರಿನ ತುಳುಭವನದ ಸಿರಿಚಾವಡಿ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
1943ರಲ್ಲಿ ಜನಿಸಿದ ಎಎನ್ ಪ್ರಸನ್ನ ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಪದವಿಯ ನಂತರ ಕೆಪಿಟಿಸಿಎಲ್ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದ ಇವರ ‘ಉಳಿದವರು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ರಥ ಸಪ್ತಮಿ’ ಕೃತಿಗೆ ಬಿಹೆಚ್ ಶ್ರೀಧರ ಪ್ರಶಸ್ತಿ, ಪ್ರತಿಫಲನ ಕೃತಿಗೆ ‘ಮಾಸ್ತಿ ಕಥಾ ಪುರಸ್ಕಾರ’ ಲಭಿಸಿವೆ. ‘ನೂರು ವರ್ಷದ ಏಕಾಂತ’ ಅನುವಾದಿತ ಕಾದಂಬರಿಗೆ ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ’ಒಂದಾನೊಂದು ಕಾಡಿನಲ್ಲಿ’ ಮಕ್ಕಳ ನಾಟಕಕ್ಕೆ ಬಾಲಭವನ ಪ್ರಶಸ್ತಿ ದೊರಕಿದೆ. ’ಹಾರು ಹಕ್ಕಿಯನೇರಿ’ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





