ಆ.15ರಂದು ಕಲ್ಮಾಡಿ ಚರ್ಚ್ನ ಅಧಿಕೃತ ಪುಣ್ಯ ಕ್ಷೇತ್ರದ ಘೋಷಣೆ

ಉಡುಪಿ: ಕಲ್ಮಾಡಿ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರ ಘೋಷಣೆ ಹಾಗೂ ಚರ್ಚ್ನ ಸುವರ್ಣ ಮಹೋತ್ಸವ ಆಚರಣೆಯು ಆ.15ರಂದು ನಡೆಯಲಿದೆ ಎಂದು ಚರ್ಚ್ನ ಧರ್ಮ ಗುರು ವಂ.ಬ್ಯಾಪ್ಟಿಸ್ಟ್ ಮೆನೇಜಸ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1988ರ ಆ.15ರಂದು ಕಲ್ಮಾಡಿಯಲ್ಲಿ ಅಂದಿನ ಮಂಗಳೂರಿನ ಬಿಷಪಂ ಅತೀ ವಂ.ಡಾ.ಬಾಸಿಲ್ ಡಿಸೋಜ ವೆಲಂಕಣಿ ಮಾತೆಯ ಪ್ರತಿಮೆಯನ್ನು ತಮಿಳು ನಾಡಿನ ವೆಲಂಕಣಿ ಪುಣ್ಯಕ್ಷೇತ್ರದಿಂದ ತಂದು ಪ್ರತಿಷ್ಠಾಪಿಸಲಾಗಿತ್ತು. ಪ್ರತಿ ಷ್ಠಾಪನೆಯ ನಂತರ, ಇಂದಿಗೂ ಕೇಂದ್ರದಲ್ಲಿ ಅನೇಕ ಪವಾಡಗಳು ನಡೆದಿವೆ ಎಂದರು.
ಪುಣ್ಯಕ್ಷೇತ್ರ ಘೋಷಣೆಯ ಧಾರ್ಮಿಕ ಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ಕೃತಜ್ಞಾತಾ ಪೂರ್ವಕವಾಗಿ ದಿವ್ಯ ಬಲಿಪೂಜೆಯ ಮುಖಾಂತರ ನಡೆಯಲಿದೆ. ದಿವ್ಯ ಬಲಿಪೂಜೆಯಲ್ಲಿ ಉಡುಪಿ ಧರ್ಮಾಧ್ಯಕ್ಷ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ, ಮಂಗಳೂರು ಧರ್ಮಾಧ್ಯಕ್ಷ ವಂ. ಡಾ.ಪೀಟರ್ ಪೌಲ್ ಸಲ್ಡಾನಾ, ಮಂಗಳೂರಿನ ನಿವೃತ ಬಿಷಪ್ ವಂ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜಾ, ಶಿವಮೊಗ್ಗ ಧರ್ಮಾಧ್ಯಕ್ಷ ವಂ. ಡಾ. ಫ್ರಾನ್ಸಿಸ್ ಸೆರಾವೊ, ಬಳ್ಳಾರಿ ಧರ್ಮಾಧ್ಯಕ್ಷ ವಂ. ಡಾ. ಹೆನ್ರಿ ಡಿಸೋಜಾ, ಬೆಳ್ತಂಗಡಿ ಧರ್ಮಾಧ್ಯಕ್ಷ ವಂ. ಡಾ. ಲಾರೆನ್ಸ್ ಮುಕ್ಕುಯಿ, ಪುತ್ತೂರಿನ ಧರ್ಮಾಧ್ಯಕ್ಷ ವಂ. ಡಾ. ಗೀವರ್ಗಿಸ್ ಮಕಾರಿಯೋಸ್ ಕಲಾಯಿಲ್ ಭಾಗವಹಿಸಲಿರುವರು.
ಮಹೋತ್ಸವದ ಪೂರ್ವ ತಯಾರಿಯಾಗಿ ಒಂಬತ್ತು ದಿನಗಳ ನೊವೆನಾ ಜರಗಲಿದ್ದು ಧ್ವಜಾರೋಹಣವನ್ನು ಆ.೬ರಂದು ಸಂಜೆ ೪ ಗಂಟೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನೆರವೇರಿಸಲಿರುವರು. ಆ.೧೪ರಂದು ವೆಲಂಕಣಿ ಮಾತೆಯ ಮೆರವಣಿಗೆ ನಡೆಯಲಿದ್ದು ಉಡುಪಿ ಶಾಸಕ ರಘುಪತಿ ಭಟ್ ಮತ್ತು ಕಲ್ಮಾಡಿ ವಾರ್ಡ್ ಸದಸ್ಯ ಸುಂದರ ಕಲ್ಮಾಡಿ ಚಾಲನೆ ನೀಡಲಿರುವರು ಎಂದು ಹೇಳಿದರು.
ಸುದ್ದಿಗೋಷ್ಠೀಯಲ್ಲಿ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೊನ್ಸಾ, ಚರ್ಚಿನ ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕ ಸಂದೀಪ್ ಅಂದ್ರಾದೆ, ಸದಸ್ಯೆ ರೋಶನ್ ಆಗ್ನೆಸ್ ಡಿಸೋಜಾ ಉಪಸ್ಥಿತರಿದ್ದರು.