ಉಡುಪಿ; ಕುಖ್ಯಾತ ಅಂತಾರಾಜ್ಯ ಮನೆಗಳ್ಳರ ಬಂಧನ; 20 ಲಕ್ಷ ರೂ. ಮೌಲ್ಯದ ಸೊತ್ತು ವಶ

ಉಡುಪಿ, ಆ.4: ಬ್ರಹ್ಮಾವರ ಪೊಲೀಸ್ ಠಾಣೆ ತಂಡಗಳು ಇತ್ತೀಚೆಗೆ ಹಾವಂಜೆ ಗ್ರಾಮದ ಶೇಡಿಗುಳಿ ಎಂಬಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಸ್ಯಾಂಟ್ರೋ ಕಾರೊಂದನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅದರಲ್ಲಿ ಮನೆ ಬಾಗಿಲು ಒಡೆಯುವ ಕಬ್ಬಿಣದ ರಾಡ್ ಹಾಗೂ ಬೆಳ್ಳಿಯ ಆಭರಣಗಳು ಪತ್ತೆಯಾಗಿದ್ದು, ಕಾರಿನಲ್ಲಿದ್ದ ಮೂರು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ವಿಚಾರಣೆಗೊಳಪಡಿಸಿದಾಗ ಅವರು ಕುಖ್ಯಾತ ಅಂತರ್ ರಾಜ್ಯ ಮನೆಗಳ್ಳರೆಂಬುದು ಪತ್ತೆಯಾಗಿತ್ತು. ಬಂಧಿತರನ್ನು ಹೆಬ್ರಿ ತಾಲೂಕು ಶಿವಪುರ ಗ್ರಾಮ ಕೆರೆಬೆಟ್ಟುವಿನ ಸದ್ಯ ಬೆಂಗಳೂರು ಚಂದಾಪುರ ನಿವಾಸಿ ದಿಲೀಪ್ ಶೆಟ್ಟಿ, ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂನ ರಾಜನ್ ಹಾಗೂ ಕೊಯಮತ್ತೂರು ಜಿಲ್ಲೆ ಜಡಯಂ ಪಾಳ್ಯಂ ತಾಲೂಕು ಆಲಕೊಂಬಿನ ಷಣ್ಮುಗಂ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಪುರದ ದಿಲೀಪ್ ಶೆಟ್ಟಿ, ಸ್ಯಾಂಟ್ರೋ ಕಾರು ಹಾಗೂ ಓಮಿನಿ ಕಾರನ್ನು ಬಳಸಿಕೊಂಡು ಬೆಂಗಳೂರಿನಿಂದ ರಾಜನ್, ಕುಟ್ಟಿ ವಿಜಯನ್ ಹಾಗೂ ಸಜಿತ್ ವರ್ಗೀಸ್ರೊಂದಿಗೆ ಬಂದು ಹಾಸನ, ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿ ಮನೆಗಳ್ಳತನ ನಡೆಸುತಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ.
ದಿಲೀಪ್ ಶೆಟ್ಟಿ ಹಾಗೂ ರಾಜನ್ ಅವರಿಂದ ಸುಮಾರು 13 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 20 ಸಾವಿರ ರೂ. ಮೌಲ್ಯದ 500 ಗ್ರಾಂ ಬೆಳ್ಳಿ ಆಭರಣ, ಕೃತ್ಯಕ್ಕೆ ಬಳಸಿದ ಸ್ಯಾಂಟ್ರೋ ಕಾರು, ಒಂದು ಓಮಿನಿ ಕಾರು ಸೇರಿದಂತೆ ಒಟ್ಟು 20 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದು, ಐದು ಮನೆ ಕಳ್ಳತನ ಪ್ರಕರಣಗಳನ್ನು ಬೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿಲೀಪ್ ಶೆಟ್ಟಿ ಹಾಗೂ ರಾಜನ್ರನ್ನು ವಿಚಾರಣೆಗೊಳಪಡಿಸಿದಾಗ ಬ್ರಹ್ಮಾವರ ಠಾಣಾ ಸರಹದ್ದಿನ 2 ರಾತ್ರಿ ಮನೆ ಕಳ್ಳತನ, ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಒಂದು ರಾತ್ರಿ ಮನೆಗಳ್ಳತನ ಹಾಗೂ ಅಜೆಕಾರು ಠಾಣಾ ವ್ಯಾಪ್ತಿಯಲ್ಲಿ 2 ರಾತ್ರಿ ಮನೆಗಳ್ಳತನ ಪ್ರಕರಣಗಳಲ್ಲಿ ಸೊತ್ತು ಕಳವು, ಚಿನ್ನಾಭರಣ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಕದ್ದ ಮಾಲುಗಳನ್ನು ಬೆಂಗಳೂರು ಮತ್ತು ಕೊಯಮತ್ತೂರಿನಲ್ಲಿ ಅಡವಿಟ್ಟಿದ್ದನ್ನು ಈಗಾಗಲೇ ವಶಪಡಿಸಿ ಕೊಳ್ಳಲಾಗಿದೆ.
ದಿಲೀಪ್ ಶೆಟ್ಟಿ ವಿರುದ್ಧ ಈ ಹಿಂದೆ ಹಾಸನದ ಅರಸೀಕೆರೆ, ಬೆಂಗಳೂರಿನ ಆರ್ಎಂಸಿ ಯಾರ್ಡ್, ನಂದಿನಿ ಲೇಔಟ್ ಮತ್ತು ಮಂಡ್ಯದ ನಾಗಮಂಗಲ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸುಲಿಗೆ, ಅಬಕಾರಿ, ಹನಿ-ಟ್ರ್ಯಾಪ್ ಪ್ರಕರಣ ಹಾಗೂ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಅಲ್ಲದೇ ಜಾಮೀನು ರಹಿತ ವಾರೆಂಟು ಆತನ ವಿರುದ್ಧ ಇದೆ.
ರಾಜನ್ ತನ್ನ 19ನೇ ವಯಸ್ಸಿನಿಂದ ಕಳ್ಳತನ ಮಾಡುತಿದ್ದು, ಆತನ ವಿರುದ್ಧ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿವೆ. ರಾಜ್ಯದ ಚಿಕ್ಕಮಗಳೂರು-1, ಕುಮಟಾ-1, ಸುರತ್ಕಲ್-4 ಹಾಗೂ ಕೇರಳ ರಾಜ್ಯದ ತ್ರಿಶೂರು-4, ಪಟ್ಟಾಂಬಿ-4, ತರೂರು-1, ತಮಿಳುನಾಡು ರಾಜ್ಯದ ನೀಲಗಿರಿ-3 ಪ್ರಕರಣಗಳು ದಾಖಲಾಗಿವೆ. ಉಡುಪಿ ಜಿಲ್ಲೆಯದೂ ಸೇರಿದಂತೆ ರಾಜನ್ ಮೇಲೆ ಒಟ್ಟು 22 ಕೇಸುಗಳು ದಾಖಲಾಗಿದ್ದು, ವಿವಿಧ ಠಾಣೆಗಳಲ್ಲಿ ಜಾಮೀನು ರಹಿತ ವಾರೆಂಟಗಳಿವೆ.
ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ ಅನಂತಪದ್ಮನಾಭರ ನೇತೃತ್ವದಲ್ಲಿ ಬ್ರಹ್ಮಾವರ ಠಾಣಾ ಪಿಎಸ್ಐ ಗುರುನಾಥ ಬಿ. ಹಾದಿಮನಿ, ಕೋಟ ಠಾಣಾ ಪಿಎಸ್ಐ ಮಧು ಬಿ.ಇ., ಬ್ರಹ್ಮಾವರ ಠಾಣಾ ತನಿಖಾ ಪಿಎಸ್ಐ ಮುಕ್ತಾಬಾಯಿ, ಪ್ರೊಬೆಷನರಿ ಪಿಎಸ್ಐ ಸುಬ್ರಹ್ಮಣ್ಯ ದೇವಾಡಿಗ ಹಾಗೂ ಠಾಣಾ ಸಿಬ್ಬಂದಿಗಳಾದ ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್, ಮೊಹಮ್ಮದ್ ಅಜ್ಮಲ್, ಅಣ್ಣಪ್ಪ ಹಾಗೂ ಕೋಟ ಠಾಣಾ ಸಿಬ್ಬಂದಿಗಳಾದ ಪ್ರಸನ್ನ, ರಾಘವೇಂದ್ರ, ಗೋಪಾಲ ನಾಯ್ಕ ಇವರ ಜಂಟಿ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.
.jpeg)