ವಕೀಲರಿಗೆ ವಿಮೆ ಯೋಜನೆ: 50 ಕೋಟಿ ರೂ. ಹೊಂದಿಸಲು ಯೋಜನೆ ರೂಪಿಸಲು ಉಪ ಸಮಿತಿಗೆ ಹೊಣೆ

ಬೆಂಗಳೂರು, ಆ.4: ರಾಜ್ಯದ ವಕೀಲರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ಅನುವಾಗುವಂತೆ ರಾಜ್ಯ ಸರಕಾರವು 50 ಕೋಟಿ ರೂ. ಮೂಲನಿಧಿ ಸ್ಥಾಪಿಸಲಿದ್ದು, ಬಾಕಿ 50 ಕೋಟಿ ರೂ. ಹೊಂದಿಸುವುದಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಲು ಉಪ ಸಮಿತಿ ರಚಿಸಲು ಕಾನೂನು ಸಚಿವ ಎಂ.ಮಾಧುಸ್ವಾಮಿ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರಸಕ್ತ ವರ್ಷದ ಬಜೆಟ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ವಕೀಲರಿಗೆ ಆರೋಗ್ಯ ಸೌಲಭ್ಯಕ್ಕಾಗಿ ಮೂಲನಿಧಿ ಸ್ಥಾಪಿಸಲು ನೆರವು ನೀಡಲಾಗುವುದು ಎಂದು ಘೋಷಿಸಿದ್ದರು.ಈ ಹಿನ್ನೆಲೆಯಲ್ಲಿ ಸರಕಾರವು ಶೇ.50ರಷ್ಟು ಮೊತ್ತವನ್ನು ನೀಡಲಿದೆ.ಕಾನೂನು ಇಲಾಖೆಯ ಕಾರ್ಯದರ್ಶಿ ವೆಂಕಟೇಶ್ ನಾಯಕ್ ಅವರು ಉಪ ಸಮಿತಿ ರಚಿಸಲಿದ್ದು, ಸಮಿತಿಯು ರೂಪಿಸಲಿರುವ ಯೋಜನೆಯನ್ನು ಕಾನೂನು ಸಚಿವರ ಮುಂದೆ ಮಂಡಿಸಲು ತೀರ್ಮಾನಿಸಲಾಗಿದೆ.
ಸರಕಾರ 50 ಕೋಟಿ ರೂ.ನೀಡಿದರೂ ವಕೀಲರಿಂದ 50 ಕೋಟಿ ರೂ. ಸಂಗ್ರಹಿಸಲಾಗದು ಎಂದು ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಂ.ಕಾಶೀನಾಥ್, ಮಾಜಿ ಅಧ್ಯಕ್ಷ ಕೆ.ಬಿ.ನಾಯಕ್, ಬೆಂ. ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅವರು ಸಚಿವರ ಗಮನಕ್ಕೆ ತಂದರು. ಹೀಗಾಗಿ, ಯೋಜನೆ ರೂಪಿಸಲು ಸಮಿತಿ ರಚಿಸಲು ಸಚಿವರು ನಿರ್ದೇಶಿಸಿದರು.
ವಕೀಲರ ಪರಿಷತ್ ಸದಸ್ಯರಾದ ಗೌತಮ್ ಚಂದ್, ಆರ್ ರಾಜಣ್ಣ, ಹಣಕಾಸು ಇಲಾಖೆಯ ಏಕರೂಪ್ ಕೌರ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.ರಾಜ್ಯದ ವಕೀಲರಿಗೆ ಆರೋಗ್ಯ ಸೌಲಭ್ಯ ಕಾರ್ಯಕ್ರಮ ರೂಪಿಸಲು ಅನುವಾಗುವಂತೆ ಮೂಲನಿಧಿ ಸ್ಥಾಪಿಸಲು ರಾಜ್ಯ ಸರಕಾರದ ವತಿಯಿಂದ ನೆರವು ನೀಡುವ ಯೋಜನೆಗೆ ಈಚೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು.







